ಮನ ತುಂಬಿ ಬಂದ ಕ್ಷಣಗಳು

ನೋಡೇ ಯಾರು ಬಂದಿದ್ದಾರೆ ಅಂತ, ಮಾತಾಡ್ಸಿದೆಯ? ಏನು ತೊಗೋತಾರೆ ಅಂತ ಕೇಳಿದೆಯ ಅಂತ ಆತ ಆಕೆಯನ್ನು ಕೇಳಿದ. ಇದು ಯಾರು ಅಂತ ಗೊತ್ತಾಯ್ತಾ ಇಲ್ವಾ? ಅಂತ ಮನೆಗೆ ಬಂದವರನ್ನು ತೋರಿಸಿ ಕೇಳಿದಾಗಲು ಆಕೆಯಿಂದ ಯಾವುದೇ ಉತ್ತರವಿಲ್ಲ. ಓ ನಿನ್ನ ಉುಟದ ಟೈಮ್ ಆಯ್ತು ಅಲ್ವಾ, ಹಸಿವೆ ಆಗ್ತಿದೆಯೇನೋ ಅನ್ನುತ್ತಾ ಆತ ಹೋಗಿ ಆಕೆಯ ಆಹಾರವಾದ ತಿಳಿ ಗಂಜಿಯನ್ನು ತಂದು ಆಕೆಗೆ ತಿನ್ನಿಸತೊಡಗಿದ. ನಿಧಾನವಾಗಿ ಒಂದೊಂದೇ ಗುಟುಕು ಒಳಗೆ ಹೋಗುತ್ತಿತ್ತು. ಆಕೆ ಆತನ ಮಗುವಲ್ಲ, ಆದರೂ ಮಗುವಿನಂತೆಯೇ….ಆಕೆ ಆತನ ಪತ್ನಿ. ಈ ಜಗತ್ತಿನ ಪರಿವಿಯೆ ಇಲ್ಲದಂತೆ ಕೋಮಾವಸ್ಥೆಯಲ್ಲಿ ಮಲಗಿರುವ ಹೆಣ್ಣುಮಗಳು. ಹೇಳಿದ ಮಾತು ತಿಳಿಯುವುದೋ ಇಲ್ಲವೋ, ಪ್ರತ್ಯುತ್ತರ ಹೇಳಲಾಗದು, ಹಾಸಿಗೆಯಲ್ಲಿ ಮಲಗಿ ಅಲ್ಲಿ ಅತ್ತಿತ್ತ ತಿರುಗುವುದಕ್ಕೂ, ಅಲ್ಲಿಂದ ಏಳುವುದಕ್ಕೂ ಆಕೆಯಿಂದ ಆಗದು. ತೆಳ್ಳಗಿನ ಆಹಾರ ಬಾಯಿಗೆ ಕೊಟ್ಟರೆ ನಿಧಾನವಾಗಿ ಒಳಗೆ ಇಳಿಯುತ್ತದೆ ಅಷ್ಟೇ. ಯಾವುದೋ ಖಾಯಿಲೆಯಿಂದಾಗಿ ಆಕೆ ತನ್ನ 45-50 ವಯಸ್ಸಿನಲ್ಲಿ ಕೋಮಾವಸ್ತೆಯನ್ನು ತಲುಪಿದ್ದಳು. ವರ್ಷಗಟ್ಟಲೇ ಇದೆ ಸ್ಥಿತಿ. ಮಕ್ಕಳು ಮದುವೆಯಾಗಿ ಅವರವರ ಮನೆಯಲ್ಲಿದ್ದರು, ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಇದ್ದರೂ ಎಷ್ಟು ದಿನ ಯಾರು ಸೇವೆ ಮಾಡಬಲ್ಲರು? ವರ್ಷಗಟ್ಟಲೇ ಆದರೂ ಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ನಿನಗೂ ನೋಡಿಕೊಳ್ಳುವುದು ಕಷ್ಟ, ಆಕೆಗೂ ಅನುಭವಿಸುವುದು ಕಷ್ಟ, ಸುಮ್ಮನೇ ಏನಾದರೂ ವಿಷದ ವಸ್ತು ಕೊಡಿಸಿಬಿಡು ಅಥವಾ ಡಾಕ್ಟರ್ ಹತ್ತಿರ ಏನಾದರೂ ಇಂಜೆಕ್ಶನ್ ಕೊಡಿಸಿ ಸಾಯಿಸಿಬಿಡು ಅಂತ ನೆಂಟರು, ಸ್ನೇಹಿತರು ಕೆಲವರು ಆತನಿಗೆ ಹೇಳಿದರು. ಆದರೂ ಆತನಿಗೆ ಇಷ್ಟುವರ್ಷ ಜೊತೆಗೆ ಸಂಸಾರ ಮಾಡಿದ ಪತ್ನಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಧರ್ಮೇಚ, ಅರ್ಥೆಚ, ಕಾಮೆಚ, ನಾತಿಚರಾಮಿ ಎಂದು ನೀಡಿದ ವಚನವನ್ನು ಮರೆಯಲು ಸಾಧ್ಯವಿಲ್ಲ. ಇಷ್ಟುವರ್ಷ ಎಲ್ಲವನ್ನು ಹಂಚಿಕೊಂಡು ಬದುಕಿದ ಆಕೆಯ ಜೊತೆ ಬಿಡಲು ಆತನ ಮನಸ್ಸು ಒಪ್ಪದು. ಆಕೆ ಇರುವಷ್ಟು ದಿನ ಆಕೆಯ ಸೇವೆಯನ್ನು ನಾನು ಮಾಡುತ್ತೇನೆ, ಆಕೆಯನ್ನು ನೋಡಿದರೆ ಸಂಕಟವಾಗುತ್ತದೆ ಎನ್ನುತ್ತಾ ಆಕೆಯ ಪ್ರತಿಯೊಂದು ಕೆಲಸಗಳನ್ನುಮನಸ್ಸಿಟ್ಟು ಮಾಡುತ್ತಿದ್ದ. ಆಕೆ ಆತನ ಮಾತಿಗೆ ಸ್ಪಂದಿಸುತ್ತಾಳೇನೋ ಅನ್ನುವಂತೆ ಆಕೆಯೊಂದಿಗೆ ಮಾತನಾಡುತ್ತಿದ್ದ. ಮನೆಗೆ ಯಾರಾದರೂ ಹೋದರೆ ತೋರಿಸಿ ಗುರುತು ಸಿಕ್ಕಿತೆ ಎಂದು ಕೇಳುತ್ತಿದ್ದ. ಆ ದಿನ ಆತ ” ಇದು ಯಾರು ಎಂತ ಗೊತ್ತಾಯ್ತಾ “ಅಂತ ತೋರಿಸಿದ್ದು ನನ್ನನ್ನು. ವರದಕ್ಷಿಣೆಗಾಗಿ, ಸಣ್ಣಪುಟ್ಟ ಜಗಳಗಳಿಗಾಗಿ ಸಾಯಿಸುವ, ಹೊಡೆದು ಬಡಿದು ಕಷ್ಟ ನೀಡುವ, ಡೈವರ್ಸ್ ಕೊಡುವ ವಿಷಯಗಳನ್ನು ಕೇಳಿದ್ದೆ. ಆದರೆ ಮಗುವಿನಂತೆ ಪತ್ನಿಯ ಸೇವೆ ಮಾಡುವ, ಪ್ರೀತಿಸುವ, ಕಾಳಜಿ ತೋರಿಸುವ ಉದಾತ್ತ ಮನಸ್ಸಿನ ಮನುಷ್ಯನನ್ನು ಕಂಡು ಮನಸ್ಸು ಮತ್ತು ಕಣ್ಣು ಎರಡೂ ತುಂಬಿಬಂದವು. ಆ ಹೆಣ್ಣುಮಗಳು ಅಂತಹ ಸ್ಥಿತಿಯಲ್ಲಿ ಮಲಗಿದ್ದರು ಆಕೆ ಪುಣ್ಯವಂತೆ ಅನ್ನಿಸಿತು.

ಆ ಮನೆಯ ಗೃಹಿಣಿ, ಆಕೆಯ ಪತಿ, ಒಬ್ಬ ಕೆಲಸದವಳು, ಒಬ್ಬ ನರ್ಸ್, ಒಬ್ಬ ಅತಿಥಿ. ಆ ಸಮಯದಲ್ಲಿ ಮನೆಯಲ್ಲಿದ್ದವರು ಈ 5 ಜನ. ಆ ದಂಪತಿಗಳ ಮಗ ಮತ್ತು ಸೊಸೆ ಎಲ್ಲೋ ಹೊರಗೆ ಹೋಗಿದ್ದರೆಂದು ತೋರುತ್ತದೆ. ಆ ಮನೆಯ ಗೃಹಿಣಿಯ ವಯಸ್ಸು ಒಂದು 60-65 ರ ಮಧ್ಯದಲ್ಲಿ ಇರಬಹುದು.ಗಂಟಲಲ್ಲೊಂದು ತೂತು, ಅಲ್ಲೊಂದು ಚಿಕ್ಕ ಕೊಳವೆಯಂತದ್ದು, ತಲೆಯಲ್ಲಿ ಕೂದಲಿಲ್ಲ, ತಲೆಗೊಂದು ಕರ್ಚಿಪ್ ಕಟ್ಟಿದ್ದಳು. ದೇಹ ಮೊದಲಿನಂತೆ ದಷ್ಟ ಪುಷ್ಟವಾಗಿರಲಿಲ್ಲ, ಕೃಶವಾಗಿತ್ತು, ಮುಖದ ಕಾಂತಿ ಕಳೆಗುಂದಿತ್ತು. ಮಾತನಾಡಲು ಧ್ವನಿ ಹೊರಡುತ್ತಿರಲಿಲ್ಲ. ಆಕೆ ಒಬ್ಬ ಕ್ಯಾನ್ಸರ್ ಪೆಶೆಂಟ್. ಆಕೆಗೆ ಆಗಿದ್ದು ಗಂಟಲಿನ ಕ್ಯಾನ್ಸರ್. ಆದರೂ ಸನ್ನೆಗಳ ಮೂಲಕ ಎಲ್ಲ ಕುಶಲವೇ ಎಂಬಂತೆ ಬಂದ ಅತಿಥಿಯನ್ನು ವಿಚಾರಿಸಿಕೊಂಡು, ಮನೆಯಲ್ಲೆಲ್ಲ ಹೇಗಿದ್ದಾರೆ, ಚಹಾ ತೆಗೆದುಕೊಳ್ಳುತ್ತೀಯಾ ಎಂದು ಒಂದು ಪೇಪರಿನಲ್ಲಿ ಬರೆದು ವಿಚಾರಿಸಿದಾಗ ಈಗ ಏನು ಬೇಡ ಎಂದು ಅತಿಥಿಯ ಉತ್ತರ. ಪೇಪರಿನಲ್ಲಿ ಬರೆದು ತೋರಿಸುವ ಮಾತುಕತೆ ಸ್ವಲ್ಪ ಹೊತ್ತು ಮುಂದುವರಿಯಿತು. ನಂತರ ಈಗ ಬಂದೆ ನೀವು ಮಾತಾಡುತ್ತೀರಿ ಎಂದು ಅತಿಥಿ ಮತ್ತು ಆಕೆಯ ಪತಿಯನ್ನು ಮಾತನಾಡಲು ಬಿಟ್ಟು ಎದ್ದು ಹೋದಳು. 10 ನಿಮಿಷವಾದರೂ ಬರದಿದ್ದಾಗ ಹೋಗಿ ಮಲಗಿಕೊಂಡರಾ ಎಂದು ಅತಿಥಿ ಆಕೆಯ ಪತಿಯನ್ನು ಕೇಳಿದಾಗ, ಟೀ ತರೋಕೆ ಹೋಗಿರಬಹುದು,ಒಳಗೆ ಕೆಲಸದವಳು ಇದ್ದಾಳೆ ಎಂಬ ಉತ್ತರ ಆಕೆಯ ಪತಿಯಿಂದ. ಹೀಗಂದ ಸ್ವಲ್ಪ ಹೊತ್ತಿನಲ್ಲಿ ಕೆಲಸದವಳ ಜೊತೆ ಹೊರಗೆ ಬಂದ ಆಕೆಯ ಕೈಯಲ್ಲಿ ಒಂದು ಟೀ ಕಪ್, ಕೆಲಸದವಳ ಕೈಯಲ್ಲಿ ಒಂದು ಪ್ಲೇಟ್ ಪುರಿ ಭಾಜಿ, ಒಂದು ಸ್ವೀಟ್. ಬೇಡ ಎಂದರು ಒತ್ತಾಯಮಾಡಿ ಅತಿಥಿಗೆ ಅದೆಲ್ಲವನ್ನೂ ಕೊಟ್ಟಳು. ಅಷ್ಟು ಹೊತ್ತಿನವರೆಗೂ ಈಕೆ ಎದ್ದು ಗಟ್ಟಿಯಾಗಿ ಓಡಾಡುತ್ತಾಳೋ ಇಲ್ಲವೋ ಎಂದು ಆಕೆಯ ಕುಶಲೋಪರಿ ವಿಚಾರಿಸಿಕೊಂಡು ಹೋಗಲು ಬಂದ ಅತಿಥಿ ಯೋಚಿಸುತ್ತಿದ್ದರೆ, ಆಕೆಯ ಈ ಅತಿಥಿ ಸತ್ಕಾರ ನೋಡಿ ಮಾತೇ ಹೊರಡುತ್ತಿರಲಿಲ್ಲ. ಅಂದು ಅವರ ಮನೆಗೆ ಹೋದ ಅತಿಥಿ ಬೇರೆ ಯಾರು ಅಲ್ಲ, ಅದು ನಾನೇ. ಮನೆಗೆ ಅತಿಥಿಗಳು ಏಕಾದರೂ ಬರುತ್ತಾರೋ ಎಂದು ಯೋಚಿಸುವ ಈ ಕಾಲದಲ್ಲಿ ಇಂತಹ ಸ್ಥಿತಿಯಲ್ಲೂ ಅತಿಥಿ ಸತ್ಕಾರ ಮಾಡುವ ಗೃಹಿಣಿಯನ್ನು ನೋಡಿ ಹೃದಯ ಭಾರವಾಯಿತು. ಆಕೆ ಕುಳಿತಲ್ಲಿಂದಲೇ ಕೆಲಸದವಲಿಗೆ ಒಂದು ಕಪ್ ಚಹಾ ಮಾಡಿಕೊಂಡು ಬಾ ಎಂದು ತಿಳಿಸಿದ್ದರು ಆಗುತ್ತಿತ್ತು. ಆದರೆ ತಾನೇ ಎದ್ದು ಹೋಗಿ ಮಾಡಿಕೊಂಡು ( ಮಾಡಿಸಿಕೊಂಡು) ಬಂದ ಆಕೆಗೆ ಮನಸ್ಸು ಹ್ಯಾಟ್ಸ್ ಆಫ್ ಎಂದಿತು.

ಇವೆರಡು ನನ್ನ ಕಣ್ಮುಂದೆ ನಡೆದ ಘಟನೆಗಳು. ಪ್ರಪಂಚದಲ್ಲಿ ಎಲ್ಲ ರೀತಿಯ ಜನರೂ ಇರುತ್ತಾರೆ. ಎಸ್ಟೋ ಸರಿ ನಮಗೆ ಇಂತಹ ಜನರ ಮನಸ್ಸಿನ ಜನರ ಭೇಟಿಯಾಗುತ್ತದೆ. ಎಲ್ಲರಿಗೂ ಇಂತಹ ಬೇರೆ ಬೇರೆ ಅನುಭವವಾಗಿರಬಹುದು. ಕೆಲವರಿಗೆ ಅದು ಜ್ಞಾಪಕವಿರುತ್ತದೆ, ಇನ್ನೂ ಕೆಲವರಿಗೆ ಮರೆತು ಹೋಗುತ್ತದೆ. ಈ ಇಬ್ಬರು ಉನ್ನತ ಮನಸ್ಸಿನ ಜನರ ಭೇಟಿಯ ನೆನಪು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣವೆಂದು ಅನ್ನಿಸಿತು………..ಬರೆದಿದ್ದೇನೆ……………

Published in: on ಏಪ್ರಿಲ್ 14, 2009 at 8:36 AM  Comments (10)  

ಮಲೇಶಿಯಾ ಪ್ರವಾಸ

ಬೆಳಿಗ್ಗೆ 7.30 ಘಂಟೆಗೆ ಬೆಂಗಳೂರಿನ ಜಯನಗರದಲ್ಲಿ ಬಸ್ ಇಳಿದಾಗ, BTM layout ಗೆ ಹೋಗೋಕೆ 100 ರೂಪಾಯಿ ಕೊಟ್ರೆ ಬರ್ತೀನಿ, 120 ರೂಪಾಯಿ ಕೊಟ್ರೆ ಬರ್ತೀನಿ ಅಂತ ಬಸ್ ಹತ್ರ ನಿಂತು ಕೇಳ್ತಾ ಇದ್ದ ಆಟೋದವರ ನೆನಪು ಬಂದಿದ್ದು ನಾವು ಮಲೇಶಿಯಾಗೆ ಹೋದಾಗ. 2 ತಿಂಗಳ ಹಿಂದೆ ನಾವು ಪ್ರವಾಸಕ್ಕೆ ಅಂತ ಮಲೇಶಿಯಾದ ರಾಜಧಾನಿ kuala lumpur ಗೆ ಹೋಗಿದ್ದೆವು. ಬೆಳಿಗ್ಗೆ ಹೋಗಿ ಅಲ್ಲಿನ Airport ನಿಂದ ಹೊರಗೆ ಬಂದು ನಾವು ಬುಕ್ ಮಾಡಿದ್ದ ಹೊಟೆಲ್ ಗೆ ಹೋಗುವುದಕ್ಕೆ ಅಂತ ಟ್ಯಾಕ್ಸಿ ಕೇಳಿದ್ರೆ ಒಬ್ಬ 120 ರಿಂಗೇಟ್ಸ್ ( ಮಲೇಶಿಯಾದ ಕರೆನ್ಸಿ) ಕೊಡಿ ಅಂದ್ರೆ ಇನ್ನೊಬ್ಬ 100 ಅಂದ. ಹೀಗೆ ಮನಸ್ಸಿಗೆ ಬಂದಷ್ಟು ದುಡ್ಡು ಕೆಳೋರೆ ಹೊರತು ಮೀಟರ್ ಹಾಕುವವರ ಮಾತೇ ಇಲ್ಲ. ಅದರಲ್ಲೂ ನಾವು ಬೇರೆ ಪ್ರದೇಶದವರು, ಹೊಸದಾಗಿ ಅಲ್ಲಿ ಹೋದವರು ಅಂತ ತಿಳಿದರಂತು ಒಬ್ಬೊಬ್ಬರು ಒಂದೊಂದು ರೇಟ್ ಹೇಳುವವರೇ. ಈ ಹಾಡು ನಾವು ತಿರುಗಿ ಬರುವುದಕ್ಕೆಂದು ಏರ್‌ಪೋರ್ಟ್‌ಗೆ ಹೋಗುವವರೆಗೂ ಇತ್ತು. ಆ ವಿಷಯ ಹಾಗಿರಲಿ, ನಾನು ಇಲ್ಲಿ ಹೇಳುವುದಕ್ಕೆ ಹೊರಟಿರುವುದು ನಾವು ನೋಡಿದ ಸ್ಥಳಗಳ ಬಗ್ಗೆ.

kuala lumpur ದ genting highland, Bathu caves, Petronas twin tower ಇವು ಮೂರು ಮುಖ್ಯ ಪ್ರವಾಸಿ ಸ್ಥಳಗಳು.

ನಮ್ಮ ಉುಟಿ ಯ ಹಾಗೆ ಎತ್ತರದ ಪ್ರದೇಶ, ಹೋಗುವಾಗ ಮಂಜು ಕವಿದು ರಸ್ತೆಯೇ ಕಾಣದಂತಿರುವ ದೃಶ್ಯ, ಮಧ್ಯಾಹ್ನವೇ ಚಳಿಯ ಅನುಭವ. ಅಲ್ಲಿ ನಮ್ಮ ವಂಡರ್ ಲಾ ದ ಹಾಗೆ ಆದರೆ ಅದಕ್ಕಿಂತಲೂ ದೊಡ್ಡದಾದ ಒಂದು ಅಮ್ಯೂಸ್ಮೆಂಟ್ ಪಾರ್ಕ್. ಅಲ್ಲಿ ವಿಧ ವಿಧದ ಆಟಗಳು, ಷೋಗಳು, ದೃಶ್ಯಗಳು….ಒಟ್ಟಾರೆ ಒಂದು ದಿನ ಪೂರ್ತಿ ಅಲ್ಲಿ ಕಳೆದರು ನೋಡಿ, ಅನುಭವಿಸಿ ಮುಗಿಯದಿರುವಂತಹ ಸ್ಥಳ. ಅಲ್ಲಿನ ಕೆಲವು ಚಿತ್ರಗಳು ನಿಮಗಾಗಿ…
theme-2
theme-3
theme-41
dscn09692

ನಮ್ಮ ಮುಂದಿನ ಪಯಣ Petronas Twin Tower ನ ಕಡೆಗೆ. ಸರ್ಕಾರದ ಮತ್ತು ಇತರ ಕೆಲವು ಕಂಪನಿಗಳ ಸಹಾಯದೊಂದಿಗೆ Petronas ಕಂಪನಿ ಇದನ್ನು 1992 ರಿಂದ 1998 ರವರೆಗೆ ನಿರ್ಮಾಣ ಮಾಡಿತು. 88 ಅಂತಸ್ತುಗಳ ಎತ್ತರವಿರುವ ಈ ಅದ್ಭುತ ಜೋಡಿ ಕಟ್ಟಡಗಳ ಮಧ್ಯೆ 41ನೆಯ ಅಂತಸ್ತಿನಲ್ಲಿ ಒಂದು over bridge ಕಟ್ಟಲಾಗಿದೆ. ಈ ಕಟ್ಟಡದ ಅಂತಸ್ತುಗಳಲ್ಲಿ ಹಲವು ಪ್ರಮುಖ ಕಂಪನಿಗಳು ತಮ್ಮ office branch ಹೊಂದಿವೆ. 41ನೆಯ ಅಂತಸ್ತುಗಳವರೆಗೆ ಹೋಗಿ, ಆ ಅದ್ಭುತ ಸೌಂದರ್ಯವನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ಇದೆ. Glass, steel, concrete ಇವುಗಳನ್ನು ಉಪಯೋಗಿಸಿ ಈ ಅದ್ಭುತ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಆ ಸುಂದರ ಕಟ್ಟಡಗಳ ಮತ್ತು ಜಗತ್ತಿನ ಇನ್ನೂ ಹಲವು ಎತ್ತರದ ಕಟ್ಟಡಗಳ ಮಾಹಿತಿಯನ್ನು ಹೊಂದಿದ ಚಿತ್ರಗಳು ಇಲ್ಲಿವೆ.
dsc089691
dscn10572
dscn10332
dscn10462
dscn10482
dscn10472
dscn10492
dscn10502

ಕೊನೆಯದಾಗಿ ನಾವು ಭೇಟಿ ನೀಡಿದ ಸ್ಥಳ ಒಂದು ದೇವಸ್ಥಾನ. Bathu caves (god murugan temple) . ಇಲ್ಲಿನ ಗುಹೆಗಳು ಮತ್ತು ಮುರುಗ ( ಷಣ್ಮುಖ) ದೇವರು ಪ್ರಸಿದ್ಧ. ಅಲ್ಲಿನ ಒಂದು ಚಿತ್ರ ತಮ್ಮ ನೋಟಕ್ಕೆ.
dscn10652

ನಾವು ಪ್ರವಾಸ ಮುಗಿಸಿ ಬಂದು 2 ತಿಂಗಳುಗಳಾದರೂ ನಿನ್ನೆ ತಾನೇ ನೋಡಿ ಬಂದಂತೇ ಅನ್ನಿಸುತ್ತಿದೆ. ಆದ್ದರಿಂದ ಅಲ್ಲಿನ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿ ಈ ಬ್ಲಾಗನ್ನು ಬರೆಯುತ್ತಿದ್ದೇನೆ. ಅಲ್ಲಿನ ಮಾಹಿತಿ ಮತ್ತು ಚಿತ್ರಗನ್ನು ನೋಡಿ ನೀವೂ ಸಂತೋಷ ಪಡುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ, ಸರಿನಾ……..

Published in: on ಏಪ್ರಿಲ್ 9, 2009 at 9:36 AM  Comments (9)  

ಬದುಕೆಂಬ ದೋಣಿ

ಬದುಕೆಂದರೆ ಕಾಮನಬಿಲ್ಲು, ಬದುಕೆಂದರೆ ಬಿರು ಬಿಸಿಲು, ಬದುಕೆಂದರೆ ಮರಳುಗಾಡು, ಬದುಕೆಂದರೆ ಮುಂಗಾರಿನ ಮಳೆ ಅಂತ ಬದುಕಿನ ಬಗ್ಗೆ ಒಬ್ಬೊಬ್ಬರು ಒಂದೊಂದು ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ. ಅವರವರ ಬದುಕಿನ ಆ ಸಂದರ್ಭಕ್ಕನುಸಾರವಾಗಿ, ಅಥವಾ ಅವರ ಬದುಕಿನ ಅನುಭವಗಳಿಂದಾಗಿ ವ್ಯಕ್ತಪಡಿಸುವ ಭಾವನೆ ಅದು. ಇವೆಲ್ಲ ಭಾವನೆ, ಅನುಭವಗಳ ಮಿಶ್ರಣವೇ ಬದುಕು ಅಂತ ನನ್ನ ಅನಿಸಿಕೆ.

ಕಷ್ಟ ಕೋಟಲೆಗಳು ಕಣ್ಣ ಮುಂದೆ ಬಂದು ನಿಂತಾಗ ಬದುಕು ಬರಡು ಮರುಭೂಮಿ ಅನ್ನಿಸುತ್ತದೆ, ನೋವುಗಳ ಬಿಸಿ ತಾಗಿದಾಗ ಬದುಕೊಂದು ಸುಡು ಬಿಸಿಲು ಅನ್ನಿಸುವುದು ಸಹಜವೇ ಸರಿ.ಅದೇ ಬದುಕಿನಲ್ಲಿ ಸುಖದ ಹೊಳೆ ಹರಿದಾಗ ಬದುಕೊಂದು ಸುಂದರ ಕಾಮನಬಿಲ್ಲು, ಮುಂಗಾರಿನ ತುಂತುರು ಮಳೆ ಅನ್ನಿಸುವುದು ಅಷ್ಟೇ ವಾಸ್ತವಿಕ.ಸುಖವೂ ಶಾಶ್ವತವಲ್ಲ, ದುಃಖವೂ ಶಾಶ್ವತವಲ್ಲ. ಎರಡು ಒಂದರ ಜೊತೆಗೊಂದು ಕಣ್ಣಾ ಮುಚ್ಚಾಲೆ ಆಡುತ್ತಿರುತ್ತವೆ. ಇವುಗಳನ್ನು ಋತು ಚಕ್ರಕ್ಕೆ ಹೋಲಿಸಿದರೆ, ಮಳೆಗಾಲದ ನಂತರ ಚಳಿಗಾಲ, ನಂತರ ಬೇಸಿಗೆ, ಅದಾದ ಮೇಲೆ ತಿರುಗಿ ಮಳೆಗಾಲ ಬರುವಂತೆಯೇ ಬದುಕಿನ ಮುಖಗಳೂ ಸಹ ಚಕ್ರದಹಾಗೆ ಸುತ್ತುತ್ತಲೇ ಇರುತ್ತವೆ.

ಕೆಲವೊಮ್ಮೆ ಸುಡು ಸುಡು ಬಿಸಿಲಿನ ನಡುವೆ ಸಣ್ಣ ಮಳೆ ಬಂದು ಹೋದಂತೆ, ಜೋರಾದ ಜದಿ ಮಳೆಯ ಮಧ್ಯೆ ಇಣುಕಿ ನೋಡುವ ಸೂರ್ಯ ಕಿರಣ ದಂತೆ ಕಷ್ಟಗಳ ನಡುವೆ ನವಿರಾದ ಸಂತಸ, ಸಾಂತ್ವನ, ನೋವಿನ ಬಿಸಿ ಗಾಯಕ್ಕೆ ತಣ್ಣನೆಯ ಮದ್ದು.ಅಥವಾ ಮೇಲೇರುತ್ತಿರುವವನ ಕಾಲು ಹಿಡಿದು ಎಳೆಯುವಂತೆ, ಸುಖವಾಗಿ ನಿದ್ರಿಸುತ್ತಿರುವವನ ಮೇಲೆ ತಣ್ಣೀರು ಎರಚಿದಂತೆ, ಸುಖದ ನಡುವೆ ಸ್ವಲ್ಪ ಕಿರಿ ಕಿರಿ, ಮೃದುವಾದ ದೇಹವನ್ನು ಚೇಳು ಬಂದು ಕೂಟುಕಿದಂತೆ ಸಣ್ಣನೆಯ ಯಾತನೆ ನಡೆಯುತ್ತಲೇ ಇರುತ್ತದೆ. ಇದರಿಂದ ಯಾರೂ ಮುಕ್ತರಲ್ಲ, ಯಾರಿಂದಲೂ ತಪ್ಪಿಸಲೂ ಆಗದು. ಬಂದದ್ದು ಬಂದಂತೆ ಅನುಭವಿಸುವುದೊಂದೇ ದಾರಿ.

ಸುಖ, ದುಃಖ, ನೋವು, ನಲಿವುಗಳನ್ನು ಒಂದೇ ತೆರನಾಗಿ ಸ್ವೀಕರಿಸಬೇಕು ಅನ್ನುವುದು ಸತ್ಯವಾದರೂ ನಮ್ಮಂಥ ಸಾಮಾನ್ಯ ಮನುಷ್ಯರಿಗೆ ಅದು ಅಸಾಧ್ಯವಾದಂತ ಮಾತು. ಎಲ್ಲವನ್ನು ಒಂದೇ ರೀತಿಯಾಗಿ ಸ್ವೀಕರಿಸುವ ಮನುಷ್ಯ ಮಹಾತ್ಮನಾಗುತ್ತಾನೆ, ಇನ್ನೊಂದು ಅರ್ಥದಲ್ಲಿ ಆಸೆ ಆಕಾಂಕ್ಷೆ, ನಾನು, ನನ್ನದು ಎನ್ನುವುದನ್ನೆಲ್ಲ ಬಿಟ್ಟ ಮಹಾತ್ಮರಿಂದ ಮಾತ್ರ ಇದು ಸಾಧ್ಯ ಅಂತ ಸಾಮಾನ್ಯ ಮನುಷ್ಯೆಯಾದ ನನಗೆ ಅನ್ನಿಸುತ್ತದೆ. ನನಗೆ ಜೀವನದಲ್ಲಿ ಬಹಳಷ್ಟು ಆಸೆಗಳಿವೆ, ಕಣ್ಣು ತುಂಬಾ ಕನಸುಗಳಿವೆ, ನಾನು ನನ್ನದು ಎಂಬ ಮಮಕಾರವಿದೆ ಹೀಗಿರುವಾಗ ನಾನು ಸುಖ ಬಂದಾಗ ಹಿಗ್ಗುತ್ತೇನೆ, ದುಃಖ ಬಂದಾಗ ಕುಗ್ಗುತ್ತೇನೆ. ಯಾವುದೇ ತರದ ಭಾವನೆಗಳನ್ನು ವ್ಯಕ್ತ ಪಡಿಸದೇ, ಸುಖ, ದುಃಖ ಎರಡು ಒಂದೇ ಎಂದು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ನಿಮ್ಮೆಲ್ಲರ ಮನಸ್ಸು ಇದನ್ನೇ ಹೇಳುತ್ತದೆ ಅಂದುಕೊಳ್ಳುತ್ತೇನೆ.

ಆದ್ದರಿಂದ ನನಗೆ ಅನಿಸುವ ದಾರಿ ಅಂದರೆ ಸಂದರ್ಭಗಳು ಯಾವ ರೀತಿಯಾಗಿ ಬರುತ್ತವೆಯೋ ಅದರಂತೆಯೇ ಅದನ್ನು ಸ್ವೀಕರಿಸುವುದು. ಒಬ್ಬೊಬ್ಬ್ಬರ ಪಾಲಿಗೆ ಒಂದೊಂದು ಹೆಚ್ಚು, ಒಂದೊಂದು ಕಮ್ಮಿ. ಆದರೆ ಯಾರೂ ಇದರಿಂದ ಹೊರತಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವುದು. ಸಂತಸ, ಸುಖ ಬಂದಾಗ ಸುಖವಾಗಿ ಅನುಭವಿಸುವುದು. ದುಃಖ, ಕಷ್ಟ ಬಂದರೆ ತಾಳಿಕೊಳ್ಳುವ, ಎದುರಿಸುವ ಶಕ್ತಿ, ತಾಳ್ಮೆ (ಇದು ನನ್ನಲ್ಲಿ ಸ್ವಲ್ಪ ಕಮ್ಮಿ ಅಂದುಕೊಳ್ಳುತ್ತೇನೆ, ನಾನು ರೂಢಿಸಿಕೊಳ್ಳುವುದು ಬಹಳಷ್ಟಿದೆ) ಬೆಳೆಸಿಕೊಳ್ಳುವುದು. ಮುಂದೆ ಅನುಭವಿಸಲಿರುವ ಸುಖಕ್ಕಾಗಿ ಕಾಯುವುದು ಅಷ್ಟೇ…..
ಇದು ನಾನು ನನ್ನ ಜೀವನದಿಂದ ಕಂಡುಕೊಂಡಿದ್ದು, ನಿಮ್ಮಲ್ಲಿ ಕೆಲವರದ್ದಾದರೂ ಇದೆ ರೀತಿಯ ಅನುಭವ ಅಭಿಪ್ರಾಯ ಇರಬಹುದಲ್ಲವೇ? ತಿಳಿಸಿ

ತಾಳಿಕೊಂಡು ಬಾಳು
ಬಾಳುವುದಕ್ಕಾಗಿ ತಾಳು

ಸುಖ ದುಃಖಗಳ ಸಂಕೇತವಾಗಿ 2 ಚಿತ್ರಗಳನ್ನು ಇಲ್ಲಿ ಹಾಕುತ್ತಿದ್ದೇನೆ.

dscn0976

dsc01094

ಇಷ್ಟ ಕಷ್ಟಗಳ ನಡುವಿನ ನನ್ನ ಜೀವನ

dscn10951ಅಡಿಗೆ ಮಾಡುವುದು ಇಷ್ಟ
ಪಾತ್ರೆ ತೊಳೆಯುವುದು ಕಷ್ಟ
ದೊಡ್ಡ ಮನೆ ಇಷ್ಟ
ಕ್ಲೀನ್ ಮಾಡುವುದು ಕಷ್ಟ
ಐಸ್ ಕ್ರಿಮ್ ಚಾಕ್ಲೇಟ್ ಇಷ್ಟ
ದಪ್ಪ ಆದರೆ ಕಷ್ಟ
ಶಾಪಿಂಗ್ ರೋಮಿಂಗ್ ಇಷ್ಟ
ಜೇಬು ಖಾಲಿಯಾದರೆ ಕಷ್ಟ
ಇಷ್ಟದಲ್ಲೊಂದು ಕಷ್ಟ
ಕಷ್ಟವಾದರೂ ಇಷ್ಟ
ಇದೇ ಜೀವನ ಅಲ್ಲವೇ

Published in: on ಏಪ್ರಿಲ್ 3, 2009 at 7:28 AM  Comments (8)  

ಮರೆಯಲಾಗದ ಘಟನೆ….

ಕಳ್ಳತನ, ಮೋಸ, ವಂಚನೆ ಇವೆಲ್ಲ ಜಗತ್ತಿನ ಯಾವ ಮೂಲೆಗೆ ಹೋದ್ರೂ ಇದೆ ಕಣ್ರೀ. ಮುಂದುವರಿದ ರಾಷ್ಟ್ರಗಳು, ಹಿಂದುಳಿದ ರಾಷ್ಟ್ರಗಳು ಅನ್ನುವ ಮಾತೇ ಇಲ್ಲ. ಇವುಗಳ ಸಂಖ್ಯೆ ಹೆಚ್ಚು ಕಮ್ಮಿ ಇರಬಹುದು ಅಷ್ಟೇ. ಒಂದೊಂದು ಕಡೆ ಹೆಚ್ಚು, ಒಂದೊಂದು ಕಡೆ ಕಮ್ಮಿ. ಬಡತನ, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಸಿಗದಿರುವುದು…ಹೀಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ದೊಡ್ಡ ಪಟ್ಟಿಯೆ ಬೆಳೆಯುತ್ತದೆ.

ಈ ವಿಷಯ ಏಕೆ ಬಂತು ಅಂದ್ರೆ, ಸಿಂಗಾಪುರದಲ್ಲಿ ಮೋಸ ವಂಚನೆಗಳು ಬಹಳ ಕಮ್ಮಿ. ಟ್ಯಾಕ್ಸಿಯಲ್ಲಿ ಮೀಟರ್ ಮೋಸ, ಮನೆ ಹುಡುಕುವಾಗ ಮೋಸ, ಕಳ್ಳತನ, ಮನೆ ದರೋಡೆ ಇವೆಲ್ಲ ತುಂಬಾ ಅಂದ್ರೆ ತುಂಬಾನೆ ಕಮ್ಮಿ ಅಂತ ಎಲ್ಲರೂ ಹೇಳ್ತಾರೆ ಮತ್ತು ನನ್ನ ಗಮನಕ್ಕೂ ಬಂದಿದೆ. ಆದರೆ ಅಲ್ಲಿ ಇಲ್ಲಿ ಅಪರೂಪಕ್ಕೆ ನಡೆಯುವ ಒಂದು ಮೋಸಕ್ಕೆ ನಾವು ಬಲಿಯಾಗಿದ್ದೀವಿ ಅನ್ನುವುದು ಸತ್ಯ. ಅದನ್ನೇ ನಾನು ಇಲ್ಲಿ ಹೇಳುವುದಕ್ಕೆ ಹೊರಟಿರುವುದು.

ನಾನು ಇಲ್ಲಿ ಬರುವ ಹೊಸದರಲ್ಲಿ ನನ್ನವರು ಒಂದು ಮನೆಯನ್ನು ನೋಡಿ ಅವನು ತಾನೇ ಓನರ್ ಅನ್ನುವ ಕಾಗದ ಪಾತ್ರಗಳನ್ನು ತೋರಿಸಿದ ನಂತರ (ಆ ಮನೆಯಲ್ಲಿ ಆತನ ಜೊತೆ ಆತನ ಕುಟುಂಬವೂ ಇರುವುದನ್ನು ನೋಡಿಕೊಂಡು) ಡೆಪಾಸಿಟ್ ಹಣ ಅಡ್ವಾನ್ಸ್ ಆಗಿ ಕೊಟ್ಟು, ಅವನು ಕೊಟ್ಟ ಕಾಗದ ಪತ್ರದಲ್ಲಿ ಅಗ್ರೀಮೆಂಟ್ ಮಾಡಿಕೊಂಡು ಬಂದರು. ಅವನು ಕೀ ಕೊಡ್ತೀನಿ ನೀವು ಇಂಥ ದಿನ ಶಿಫ್ಟ್ ಆಗಬಹುದು ಅಂದು ಹೇಳಿದ ದಿನ ಆತನಿಗೆ ಕಾಲ್ ಮಾಡಿದ್ರೆ, ಮೊಬೈಲ್ ಸ್ವಿಚ್ ಆಫ್. ಅವನು ಎಲ್ಲೋ ಹೊರಗೆ ಹೋಗಿರಬಹುದು ನಾಳೆ ಹೋಗೋಣ ಅಂದುಕೊಂಡು ಸುಮ್ಮನಾದರು. ಮರುದಿನವೂ ಇದೆ ಹಾಡು. ಆಗ ಚಿಂತೆ ಪ್ರಾರಂಭವಾಯಿತು. (ಯಾರದಾದರೂ ಮನೆಗೆ ಹೋಗುವಾಗ ಅವರು ಆ ಸಮಯದಲ್ಲಿ ಇರುತ್ತಾರೋ ಇಲ್ಲವೋ ಎಂದು ವಿಚಾರಿಸಿಕೊಂಡು ಹೋಗುವುದಕ್ಕಾಗಿ ಕಾಲ್ ಮಾಡಿಕೊಂಡು ಹೋಗುವುದು) ಅದರ ಮಾರನೆಯ ದಿನ ಶನಿವಾರ ಏನಾದರೂ ಆಗಲಿ ಅಂದುಕೊಂಡು ಅವರ ಮನೆಗೆ ಹೋದರೆ ಅಲ್ಲಿ ಮನೆಗೆ ಬೀಗ ಹಾಕಿತ್ತು ಮತ್ತು ಅಲ್ಲಿ ಒಬ್ಬ ಮನುಷ್ಯ ಯಾರಿಗೋ ಕಾಯುತ್ತಿರುವವನ ಹಾಗೆ ನಿಂತಿದ್ದ. ಇವರು ಹೋಗಿ ಆ ಮನುಷ್ಯನನ್ನು ನೀನು ಈ ಮನೆಯವರ ಪರಿಚಯಸ್ತನೇ ಎಂದು ವಿಚಾರಿಸಿದಾಗ, ಅವನು ಹೇಳಿದ ಮಾತು ಕೇಳಿ ನನ್ನವರಿಗೆ ಶಾಕ್ ಹೊಡೆದಂತಾಗಿತ್ತು.

ವಿಷಯವೇನೆಂದರೆ ಓನರ್ ಅನ್ನಿಸಿದ ಮನುಷ್ಯ, ಆ ಇನ್ನೊಬ್ಬ ಕಾಯುತ್ತಿರುವ ಮನುಷ್ಯನಿಗೂ ಮನೆ ಕೊಡುತ್ತೇನೆ ಅಂತ ಹೇಳಿ ಹಣ ತೆಗೆದುಕೊಂಡಿದ್ದ. ( ಓನರ್ ಎಂದು ಹೇಳಿದ ಮನುಷ್ಯ ಚೀನೀ ಅಥವಾ ಮಲಾಯ್, ಇನ್ನೊಬ್ಬ ಮೋಸಹೋದ ಮನುಷ್ಯ ಶ್ರೀಲಂಕನ್ ) ಇದರಲ್ಲಿ ಮೋಸವಿದೆ ಅಂದುಕೊಂಡು ಇಬ್ಬರು ಸೇರಿಕೊಂಡು ಪೋಲಿಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು, ಅವನು ಕೊಟ್ಟ ಅಗ್ರೀಮೆಂಟ್ ಡೀಟೇಲ್ಸ್ ಎಲ್ಲ ಕೊಟ್ಟು ಬಂದರು. ಆಗ ತಿಳಿದ ವಿಷಯವೆಂದರೆ ಆ ಮನುಷ್ಯ ಮನೆಯ ಓನರ್ ಅಲ್ಲ. ಆತ ತೋರಿಸಿದ, ಕೊಟ್ಟ, ಕಾಗದ ಪತ್ರಗಳೆಲ್ಲ ನಕಲಿ. ಅವನು ಮೋಸ ಮಾಡಲು ಪ್ಲಾನ್ ಮಾಡಿದ್ದ, ನಾವು ಆತನ ಮೋಸಕ್ಕೆ ಬಲಿಯಾಗಿದ್ದೆವು. ಆ ಸಂದರ್ಭದಲ್ಲಿ ನಾವು ಪಟ್ಟ ಪಾಡು………….ಮುಂಚೆ ಇರುವ ಜಾಗ ಖಾಲಿ ಮಾಡಬೇಕು, ಬೇರೊಂದು ಮನೆ ಬೇಗ ಹುಡುಕಬೇಕು, ಕಷ್ಟ ಪಟ್ಟು ದುಡಿದ ಹಣವನ್ನು ಕಳೆದುಕೊಂಡ ನೋವು, ಬೇರೊಂದು ಮನೆಗೆ ಹಣ ಒದಗಿಸಬೇಕು. ಎಲ್ಲ ಕಷ್ಟಗಳು ಒಂದೇ ಸರಿ ಬಂದು ತಲೆಯ ಮೇಲೆ ಕುಳಿತಿದ್ದವು. ಅಂತೂ ಬೇರೆ ಮನೆ ಸಿಗುವ ವರೆಗೆ ಸ್ವಲ್ಪ ದಿನ ಸ್ನೇಹಿತರೊಬ್ಬರ ಸಹಾಯದಿಂದ ಅವರ ಮನೆಯಲ್ಲಿ ಉಳಿದುಕೊಂಡು, ಅಲ್ಲಿಂದ ಈ ಮನೆಗೆ ಬಂದು ನಿಟ್ಟುಸಿರು ಬಿಟ್ಟೆವು.

8-10 ತಿಂಗಳುಗಳ ವರೆಗೂ ಆ ಮೋಸಗಾರನ ಸುಳಿವೇ ಇಲ್ಲ. ಪೋಲಿಸ್ ಸ್ಟೇಷನ್ ಗೆ ಕಾಲ್ ಮಾಡಿದರೆ, ಸಿಗಲಿಲ್ಲ ಅನ್ನುವ ಉತ್ತರ. 2 ತಿಂಗಳ ಮುಂಚೆ ಧಿಡೀರ್ ನೆ ಒಂದು ದಿನ ಪೋಲಿಸ್ ಸ್ಟೇಷನ್ ನಿಂದ ಕಾಲ್ ಬಂತು. ಆ ಮೋಸಗಾರ ಸಿಕ್ಕಿದ್ದಾನೆ. ಆತನ ಮೇಲೆ ಕೇಸ್ ಹಾಕಿದ್ದೇವೆ. ನಿಮ್ಮ ಹಾಗೆ ಇನ್ನೂ ಕೆಲವು ಜನಕ್ಕೆ ಆತ ಮೋಸ ಮಾಡಿದ್ದಾನೆ ಅಂತ. ಆಗ ಸ್ವಲ್ಪ ಸಮಾಧಾನ, ಕಳೆದುಕೊಂಡ ಹಣ ಸಿಗುವುದೆಂಬ ಆಸೆ ಚಿಗುರಿತು.

ನಂತರ 1-2 ಸರಿ ಕಾಲ್ ಮಾಡಿ ಕೇಳಿದಾಗ ಕೇಸ್ ನಡೆಯುತ್ತಿದೆ ಎಂಬ ಉತ್ತರ. ಈಗ ಒಂದು 8-10 ದಿನಗಳ ಮುಂಚೆ ಆತನ ಮೇಲೆ ಹಾಕಿದ ಕೇಸ್ ಮುಗಿಯಿತು, ಆತನನ್ನು ಜೈಲ್ ಗೆ ಹಾಕಿದ್ದಾರೆ, ಯಾರಿಗೂ ಕೊಡಲು ಆತನ ಬಳಿ ಹಣ ಇಲ್ಲ ಎನ್ನುವ ವಿಷಯ ತಿಳಿಯಿತು. ಇನ್ನೊಬ್ಬ ಮೋಸ ಹೋದ ಮನುಷ್ಯ (ಶ್ರೀಲಂಕನ್) ಸ್ಟೇಷನ್ ಗೆ ಹೋಗಿ ಆತನನ್ನು ಜೈಲ್ ಗೆ ಹಾಕಿರುವುದನ್ನು ಕನ್‌ಫರ್ಮ್ ಮಾಡಿಕೊಂಡು ಬಂದ.

ನಮ್ಮ ಹಣವಂತೂ ನಮಗೆ ತಿರುಗಿ ಬರಲಿಲ್ಲ, ಬರುವುದು ಇಲ್ಲ ಏಕೆಂದರೆ ಮೋಸಗಾರನ ಬಳಿ ಹಣ ಇಲ್ಲ. ಇನ್ನೂ ಎಷ್ಟೋ ಜನರಿಗೆ ಆತನಿಂದ ಆಗಬಹುದಾದ ಮೋಸವನ್ನು ತಪ್ಪಿಸಿದ ಪುಣ್ಯ ಮತ್ತು ಮೋಸಗಾರನಿಗೆ ಶಿಕ್ಷೆ ಕೊಡಿಸಿದ ಸಮಾಧಾನವಷ್ಟೇ ನಮ್ಮ ಪಾಲಿಗೆ.

ಆತನನ್ನು ಹಿಡಿದು ಬರೇ 2 ತಿಂಗಳಲ್ಲಿ ಕೋರ್ಟ್ ಕೇಸ್ ಮುಗಿಸಿ ಆತನನ್ನು ಜೈಲ್ ಗೆ ಕಳಿಸಿದ್ದು. ಒಮ್ಮೆಯೂ ಈ ನಡುವೆ ನಮ್ಮನ್ನು ಪೋಲೀಸ್ ಸ್ಟೇಷನ್ ಗೆ ಬಾ, ಅಥವಾ ಕೋರ್ಟ್ ಗೆ ಬಾ ಅಂತ ಕರೆಯದೇ ಇದ್ದಿದ್ದು, ಇವೆಲ್ಲ ನನಗೆ ಇಲ್ಲಿನ ಕಾನೂನಿನ ಪರಿಚಯ ಮಾಡಿ ಕೊಟ್ಟಿತ್ತು. ನಮ್ಮ ಉೂರಿನಲ್ಲಿ ಒಂದು ಸಣ್ಣ ಕಳ್ಳತನದ ಕೇಸ್ ವರ್ಷಗಟ್ಟಲೇ ನಡೆಸುವುದು, 50 ಸರಿ ಕಂಪ್ಲೇಂಟ್ ಕೊಟ್ಟವನನ್ನು ಅಲೆಸುವುದು, ನೋಡಿದ ನನಗೆ ಈ ಸಿಸ್ಟಂ ಇಷ್ಟವಾಗಿತ್ತು. ಇದೇ ಕಾರಣದಿಂದಲೋ ಏನೋ ಇಲ್ಲಿ ಕಳ್ಳತನ, ಮೋಸ ವಂಚನೆಗಳು ಕಡಿಮೆ. ತಪ್ಪಿತಸ್ತರಿಗೆ ಶಿಕ್ಷೆ ಅಗಲೆ ಬೇಕಲ್ಲವೇ? ಏನೇ ಅಂದುಕೊಂಡರೂ ನಮ್ಮ ಹಣಕ್ಕಂತು ಎಳ್ಳು ನೀರು ಬಿಟ್ಟಿದ್ದು ನಿಜ. ಇದು ಒಂದು ಮರೆಯಲಾಗದ ಘಟನೆ…….

ಪವರ್ ಕಟ್

ಪವರ್ ಕಟ್

ಮೊನ್ನೆ ನಮ್ಮ ಲೆಟರ್ ಬಾಕ್ಸ್ ಚೆಕ್ ಮಾಡಿದಾಗ ಎಲೆಕ್ಟ್ರಿಸಿಟೀ ಬೋರ್ಡ್ ನಿಂದ ಒಂದು ಲೆಟರ್ ಇತ್ತು. ಸಧ್ಯ ಅಸ್ಟೆ ಎಲೆಕ್ಟ್ರಿಕ್ ಬಿಲ್ ತುಂಬಿ ಆಗಿದೆ ಮತ್ತೇನು ಲೆಟರ್ ಅಂದುಕೊಂಡು ಓಪನ್ ಮಾಡಿ ನೋಡಿದೆ. ಅದರಲೊಳಗಿದ್ದ ವಿಷಯದ ಸಾರಾಂಶ ಇದು.

“ಬರುವ ಗುರುವಾರ ತರೀಕು 3 ರಂದು ಎಲೆಕ್ಟ್ರಿಕ್ ಮೆಂಟನೆನ್ಸೆ ಮತ್ತು ರೆಪೀರಿ ಕೆಲಸ ನಡೆಯುವುದರ ನಿಮಿತ್ತ ಮಧ್ಯಾಹ್ನ 2 ಗಂಟೆ ಇಂದ 4.30 ರ ವರೆಗೆ ಪವರ್ ಕಟ್ ಇರುತ್ತದೆ. ದಯವಿಟ್ಟು ಸಹಕರಿಸಬೇಕು”

ಕರೆಂಟ್ ತೆಗೆಯುವ 3-4 ದಿನಗಳ ಮುಂಚೆಯೇ ತಿಳಿಸುವ ವ್ಯಸ್ತೆಯನ್ನು ನಾನು ಮೊದಲ ಬಾರಿಗೆ ನೋಡಿದ್ದೆ. ನಾನು ಇಲ್ಲಿ ಬಂದಮೇಲೆ ಮೊದಲನೆಯ ಸರಿ ಹೀಗೆ ಕರೆಂಟ್ ತೆಗೆಯುತ್ತಿರುವುದು.

ಮನೆಗೆ ಬಂದು ಕುಳಿತೊಡನೆಯೇ ನನ್ನ ಯೋಚನೆ ನಮ್ಮ ಉೂರಿನ ಕಡೆಗೆ ಓಡತೊಡಗಿತು. ನಮ್ಮ ಉೂರು ಕರ್ನಾಟಕದ (ಉತ್ತರಕನ್ನಡ ಜಿಲ್ಲೆಯ) ಒಂದು ಹಳ್ಳಿ. ಅಲ್ಲಿ ದಿನದಲ್ಲಿ 6 ರಿಂದ 8 ತಾಸು ಪವರ್ ಕಟ್. ಒಮ್ಮೊಮ್ಮೆ ಇದು 10 ರಿಂದ 12 ಗಂಟೆಗಳ ಕಾಲವು ಮುಂದುವರೆಯುತ್ತದೆ. ಮಳೆಗಾಲದಲ್ಲಂತೂ ಕೇಳುವುದೇ ಬೇಡ 24-48 ಗಂಟೆಗಳ ಕಾಲ ಪವರ್ ಖೋತಾ. ಯಾವಾಗ ಬರುತ್ತೋ, ಯಾವಾಗ ಹೋಗುತ್ತೋ ದೇವರೇ ಬಲ್ಲ. ಮಧ್ಯದಲ್ಲಿ ಒಮ್ಮೊಮ್ಮೆ ಕರೆಂಟ್ ಇದ್ದರೂ ಇಲ್ಲದ ಹಾಗೆ ಲೋ ವೋಲ್ಟೇಜ್. ಮಿಕ್ಸರ್ ಓಡೋದಿಲ್ಲ, ಲೈಟ್ ಕಾಣೋದಿಲ್ಲ. ಬಹಳ ಜನಲೈಟ್ ಸೋಲಾರ್ ವ್ಯವಸ್ತೆ ಮಾಡಿಕೊಂಡಿದ್ದಾರೆ. ಮಿಕ್ಸರ್, ಪಂಪ್ ಸೆಟ್ಎಲ್ಲ ಓಡುವುದಕ್ಕೆ ಇನ್ನೂ ಹೆಚ್ಚಿನ ಪವರ್ ಅವಶ್ಯ. ಅದರ ಹಣವೂ ಅಸ್ಟೆ ಹೆಚ್ಚು. ಆದರೆ ಎಲ್ಲರಿಂದಲೂ ಇದು ಸಾಧ್ಯವೇ?

ಕರೆಂಟ್ ಇರುವುದಿಲ್ಲ, ಮಿಕ್ಸರ್ ಹೇಗೆ ಹಾಕುವುದು, ಅಡಿಗೆಗೆ ಹೇಗೆ ಬೀಸುವುದು,ನೀರಿಗೆ ಪಂಪ್ ಸೆಟ್ ಹೇಗೆ ಹಾಕುವುದು? ದಿನಾಲೂ ಇದೆ ಹಾಡು ಅನ್ನುವುದು ಅಮ್ಮನ ಗೋಳು. ಜೋರಾಗಿ ಗುಡುಗಿದರೆ ಸಾಕು ಫೋನ್ ಕಟ್. ಇವೆಲ್ಲ ಎಂದು ಸರಿಹೋಗುತ್ತದೆಯೋ? ಇಲ್ಲಿಯ ಹಾಗೆ ಕರೆಂಟ್ ತೆಗೆಯುವ 3-4 ದಿನಗಳ ಮುಂಚೆಯೇ ತಿಳಿಸಿ ತೆಗೆಯುವ, ಯಾವಾಗಲು ಫೋನ್ ಸರಿಯಾಗಿರುವ ಕಾಲ ಯಾವಾಗ ಬರುವುದೋ ಅಂತ ಒಂದು ಕ್ಷಣ ಯೋಚಿಸಿದೆ.

ಹಾಗೆಯೇ ಮನಸ್ಸು ಮತ್ತು ಕಣ್ಣು ರಸ್ತೆಯ ಮೇಲೆ ಹರಿಯಿತು. ಇಲ್ಲಿ ರಸ್ತೆ ಮಾಡಿ ಬಹಳ ವರ್ಷಗಳ ವರೆಗೆ ಅದು ಕಿತ್ತು ಹೋಗುವುದಿಲ್ಲ. ಕಿತ್ತು ಹೋದಲ್ಲಿ ಅಥವಾ ಹಾಳಾದಲ್ಲಿ ಬಹಳ ಬೇಗನೆ ಅದನ್ನು ರಿಪೇರಿ ಮಾಡಿ ಸುಸ್ಥಿತಿಯಲ್ಲಿಡುತ್ತಾರೆ. ಅದೇ ನಮ್ಮ ಉೂರಿನ ರಸ್ತೆ………ಟಾರ್ ಹಾಕ್ತೀವಿ ಅಂತ ಜಲ್ಲಿ ಕಲ್ಲುಗಳನ್ನು ಹಾಕಿ 5-6 ವರ್ಷಗಳಾಯಿತು, ಇನ್ನೂ ಆ ರಸ್ತೆ ಟಾರ್ ಕಂಡಿಲ್ಲಾ. ಮೊದಲಿನ ಮಣ್ಣು ರಸ್ತೆಯಾದರೂ ಎಸ್ಟೋ ಚೆನ್ನಾಗಿತ್ತು ಆದರೆ ಈ ರಸ್ತೆಯ ಮೇಲೆ ನಡೆಯುವವರ ಅದಕ್ಕೂ ಹೆಚ್ಚಾಗಿ ವೇಹಿಕಲ್ ಓಡಿಸುವವರ ಪರಿಸ್ಥಿತಿ ಯಾರಿಗೂ ಬೇಡ. ಯಾರು ಯಾವಾಗ ಬಿದ್ದು ಬಿಡ್ತಾರೋ ಅನ್ನೋ ಭಯ. ಮೊದಲಿನ ಮಣ್ಣು ರಸ್ತೆ ಮಳೆಗಾಲದಲ್ಲಿ ಹಾಳಾದರೆ ಉೂರಿನವರೆಲ್ಲ ಸೇರಿ ಅದನ್ನು ರಿಪೇರಿ ಮಾಡಿ ಒಳ್ಳೆಯ ಸ್ಥಿತಿಯಲ್ಲಿಡುತ್ತಿದ್ದರು, ಈರೀತಿ ಜಲ್ಲಿ ಕಲ್ಲುಗಳು ರಸ್ತೆಯ ಮೇಲೆ ಎದ್ದು ನಿಲ್ಲುತ್ತಿರಲಿಲ್ಲ ಈ ಜಲ್ಲಿ ಕಲ್ಲುಗಳ ರಸ್ತೆ ರಿಪೇರಿ ಮಾಡುವುದು ಹೇಗೆ? ಪ್ರತಿ ವರ್ಷವೂ ಈವರ್ಷ ಟಾರ್ ಹ್ಾಕುತ್ತಾರೇನೋ ಅಂತ ಕಾಯೋದು. ಅದು ಯಾವಾಗ ಹಾಕುತ್ತಾರೋ, ಯಾವಾಗ ಈ ರಸ್ತೆಯಿಂದ ಮುಕ್ತಿಯೋ ಯಾರು ಬಲ್ಲರು!

ಎಸ್ಟು ಬೇಡ ಬೇಡ ಎಂದರು ಮನಸ್ಸ್ಸು ತುಲನೆಯನ್ನು ಆರಂಭಿಸಿ ಬಿಡುತ್ತದೆ. ಇಸ್ತೆಲ್ಲ ನಿಸರ್ಗಿಕ ಸಂಪನ್ಮೂಲಗಳು ಇರುವ ನಮ್ಮ ಹಳ್ಳಿಯಲ್ಲಿ, ನಾಡಿನಲ್ಲಿ, ದೇಶದಲ್ಲಿ ಇದೆ ರೀತಿಯ ವ್ಯವಸ್ತೆಗಳು ಇರಲಿ ಅಂತ ಅಶಿಸುತ್ತದೆ. ಅದರ ಕನಸ್ಸು ಕಾಣುತ್ತದೆ. ಆದರೆ ಅದೆಲ್ಲ ಸಾಧ್ಯವೇ? ಹೌದಾದರೆ ಹೇಗೆ? ಎಂದು? ಯಾವಾಗ?

ಯುಗಾದಿ

ಯುಗಾದಿ

ಸರ್ವರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಯುಗ ಯುಗಾದಿ ಕಳೆದರು
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ತಮಗೆಲ್ಲರಿಗೂ ಯುಗಾದಿಯ ಶುಭಾಶಯಗಳೊಂದಿಗೆ ನಮ್ಮ ಮನೆಯ ಯುಗಾದಿ ಹಬ್ಬದ ಒಂದು ಇಣುಕು ನೋಟ.

dscn12902

dscn12941

Published in: on ಏಪ್ರಿಲ್ 2, 2009 at 9:08 AM  Comments (2)