ಅಜ್ಜಿಯೊಂದಿಗಿನ ಆ ಮುಸ್ಸಂಜೆ….

ದಿನಾಲೂ ಮುಸ್ಸಂಜೆ ಹೊತ್ತಲ್ಲಿ ಕುಳಿತು ಸತ್ಯವಾನ ಸಾವಿತ್ರಿ ಹಾಡು, ಸುಧಾಮ ಚರಿತ್ರೆ ಹಾಗೂ ಕೆಲವು ಶ್ಲೋಕಗಳನ್ನು ತಪ್ಪದೇ ಹೇಳುತ್ತಿದ್ದ ಅಜ್ಜಿ ಇಂದು ಯಾಕೊ ಬರೇ ಶ್ಲೋಕ, ಸುಧಾಮ ಚರಿತ್ರೆ ಹೇಳಿ ನನಗೆ ಪ್ರಿಯವಾದ ಸತ್ಯವಾನ ಸಾವಿತ್ರಿ ಹಾಡು ಹೇಳದೇ ಸುಮ್ಮನೆ ಕುಳಿತಿದ್ದಳು. ಆದರೆ ದಿನಾ ಆಕೆಯ ಪಕ್ಕ ಕುಳಿತು ಕೇಳುತ್ತಿದ್ದ ನಾನು ಸುಮ್ಮನೆ ಕೂರಲಾರದೆ

“ಅಜ್ಜಿ ಸಾವಿತ್ರಿ ಹಾಡು ಯಾಕೆ ಹೇಳಿಲ್ಲ ಹೇಳಜ್ಜಿ” ………ಅಂತ ರಾಗ ತೆಗೆದೆ.

“ಇಲ್ಲಾ ಮಗಳೆ ಇವತ್ತು ಸಾಕು ನಾಳೆ ಹೇಳ್ತೀನಿ” ಅಂದ ಅಜ್ಜಿಯ ಮುಖ ಯಾಕೋ ಮಂಕಾಗಿರುವಂತೆ ಭಾಸವಾಯಿತು. ಅಜ್ಜಿ ಏನೋ ಚಿಂತೆಯಲ್ಲಿದ್ದು ಅದನ್ನು ನನ್ನಿಂದ ಮರೆಮಾಚುತ್ತಿದ್ದಂತೆ ಮನಸ್ಸಿಗೆ ಅನ್ನಿಸಿತು.

ಅಜ್ಜಿ ಏನಾಯ್ತಜ್ಜಿ? ಹುಶಾರಿಲ್ವಾ? ಯಾರದ್ರು ಏನಾದ್ರೂ ಅಂದ್ರಾ? ಯಾಕಜ್ಜಿ ಒಂಥರಾ ಇದ್ದೀಯಾ? ನನ್ನ ಅನುಮಾನ ಪರಿಹರಿಸಿಕೊಳ್ಳಲು ನಾಲ್ಕಾರು ಪ್ರಶ್ನೆಗಳನ್ನು ಒಟ್ಟಿಗೆ ಅಜ್ಜಿಯತ್ತ ಎಸೆದೆ.

“ಇಲ್ಲ ಪುಟ್ಟಾ ನಾನು ಹುಶಾರಾಗೆ ಇದೀನಿ, ಯಾರೂ ಏನೂ ಅಂದಿಲ್ಲ” …..ಮತ್ತೆ ಅಜ್ಜಿಯಿಂದ ತಪ್ಪಿಸಿಕೊಳ್ಳೊ ಉತ್ತರ.

ಏನೊ ಆಗಿದ್ದಂತೂ ನಿಜ, ಅಜ್ಜಿ ದಿನದ ಹಾಗಿಲ್ಲ ಅಂತ ಯೋಚನೆ ಮಾಡ್ತಾ ಇರುವಾಗ ಇಂದು ಅಜ್ಜನ ತಿಥಿ ಅಂತ ನೆನಪಿಗೆ ಬಂತು.
ಅಜ್ಜನ ಜ್ನಾಪಕ ಬಂತಾ ಅಜ್ಜಿ? ನೀ ಅಜ್ಜನ್ನ ಮಿಸ್ ಮಾಡ್ಕೋತಿದೀಯಾ? ಅದಕ್ಕೆ ಬೇಜಾರಾ? ನನ್ನ ಪ್ರಶ್ನೆ……

ಒಂದು ನಿಮಿಷ ಮೌನದಲ್ಲಿದ್ದ ಅಜ್ಜಿ ನಿಧಾನವಾಗಿ “ಹೂಂ ಜ್ನಾಪಕ ಬಂತು ಪುಟ್ಟಾ” ಅಂತ ಉತ್ತರಿಸಿದಳು

ಅಜ್ಜ ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ರಾ ಅಜ್ಜಿ?
ಈ ಪ್ರಶ್ನೆ ಅಜ್ಜಿಯನ್ನು ತುಂಬಾ ಇಕ್ಕಟ್ಟಿಗೆ ಸಿಲುಕಿಸಿದಂತೆ ತೋರಿತು, ಅಜ್ಜಿ ಏನು ಉತ್ತರಿಸಲೆಂದು ಗೊಂದಲದಲ್ಲಿದ್ದಂತೆ ಅನ್ನಿಸಿತು….

“ಈ ನಿಜವಾದ ಪ್ರೀತಿ ಪ್ರೇಮ ಯಾವುದೂ ನನಗೆ ತಿಳೀಲೇ ಇಲ್ಲ ಮಗಳೆ.”….

ಯಾಕಜ್ಜಿ? ಅಜ್ಜ ನಿನ್ನನ್ನ ಪ್ರೀತಿಸ್ತಾ ಇರ್ಲಿಲ್ವಾ? ನೀನು ಅಜ್ಜನ್ನ ಪ್ರೀತಿಸ್ತಾ ಇರ್ಲಿಲ್ವಾ?

“ಆ ಕಾಲ ಇಂದಿನಂತಲ್ಲ ಪುಟ್ಟಾ, ಪ್ರೀತಿ ಪ್ರೇಮ ಮಾಡಿ ನಮ್ಮ ಮದುವೆ ಆಗಿರ್ಲಿಲ್ಲ. ಮದುವೆ ಆಗುವಾಗ ನನಗಿನ್ನೂ ಹನ್ನೊಂದು ವರ್ಷ. ನಿಮ್ಮಜ್ಜನಿಗೆ ನಲವತ್ತೆರಡು. ನಮ್ಮ ಮನೆಯಲ್ಲಿ ತುಂಬಾ ಬಡತನ, ಸಾಲದ್ದಕ್ಕ ಮೂರು ಜನ ಹೆಣ್ಣು ಮಕ್ಕಳು ಬೇರೆ. ಹಾಗೂ ಹೀಗೂ ಸಂಸಾರ ಸಾಗಿಸುತ್ತಿದ್ದ ನಮ್ಮಪ್ಪನಿಗೆ ಮದುವೆ ಮಾಡಿ ಮುಗಿಸುವುದೆ ಕಷ್ಟವಾಗಿತ್ತು.
ನಿಮ್ಮಜ್ಜನಿಗೋ ಆಗಲೇ ಎರಡು ಸಾರಿ ಮದುವೆಯಾಗಿತ್ತು. ಹೆರಿಗೆಯ ಸಮಯದಲ್ಲಿ ಮೊದಲನೆಯ ಪತ್ನಿ ತೀರಿಕೊಂಡರೆ, ಯಾವುದೋ ರೋಗದಿಂದ ಮದುವೆಯಾದ ಕೆಲ ವರ್ಷಗಳಲ್ಲಿ ಎರಡನೆಯ ಪತ್ನಿ ತೀರಿಕೊಂಡಿದ್ದಳು. ಮನೆಯನ್ನು ನೋಡಿಕೊಳ್ಳೊದಕ್ಕೆ ಹೆಣ್ಣೊಂದು ಬೇಕಿತ್ತು, ನಿಮ್ಮ ತಾತನ ತಾಯಿ ತನಗೆ ತಿಳಿದ ಕೆಲವು ಕಡೆ ಹುಡುಗಿ ಹುಡುಕಲು ತಿಳಿಸಿದ್ದರು. ನನ್ನ ತಂದೆಯ ಕಷ್ಟ ತಿಳಿದ ಒಬ್ಬರು ಮನೆಯ ಹಿರಿ ಮಗಳಾದ ನನಗೆ ಈ ಸಂಬಂಧದ ಪ್ರಸ್ತಾಪ ನೀಡಿದ್ದರು. ಮದುವೆಯ ಖರ್ಚೆಲ್ಲ ಗಂಡಿನ ಕಡೆಯದು, ಊಟಕ್ಕೇನೂ ಕೊರತೆಯಿಲ್ಲ, ತಕ್ಕ ಮಟ್ಟಿಗೆ ಅನುಕೂಲ ಉಳ್ಳವರು ಎಂಬ ಕಾರಣಕ್ಕೆ ನಮ್ಮ ತಂದೆ ತಾಯಿನೂ ಈ ಮದುವೆಗೆ ಒಪ್ಪಿದ್ದರು”

ನೀನೂ ಒಪ್ಕೊಂಬಿಟ್ಯಾ ಅಜ್ಜಿ? ಬೇಡಾ ಅನ್ನಲಿಲ್ವಾ? ಅಜ್ಜಿ ಮಾತು ಮುಗಿಸುತ್ತಲೇ ನನ್ನ ಪ್ರಶ್ನೆ ಕಾದಿತ್ತು..

“ನನ್ನನ್ನು ಯಾರು ಕೇಳೊರು ಮಗಳೆ, ನಾನು ಅತ್ತೆ, ಕರೆದೆ, ಹಠ ಹಿಡಿದೆ ಯಾವುದಕ್ಕೂ ಯಾರೂ ಜಗ್ಗಲಿಲ್ಲ.ಈ ಮದುವೆಗೆ ಒಪ್ಕೋ ಸುಮ್ನೆ ಮುಂದೆ ಎಲ್ಲಾ ಒಳ್ಳೇದಾಗತ್ತೆ ಅಂತ ಅಮ್ಮನ ತಿಳುವಳಿಕೆಯ ಮಾತು. ಮನೆಯ ಪರಿಸ್ಥಿತಿಯ ಅರಿವಿದ್ದ ನಾನು ಅಳುತ್ತಲೇ ನಿಮ್ಮಜ್ಜನ ಮೂರನೇ ಮಡದಿಯಾಗಿ ಹಸೆಮಣೆ ಏರಬೇಕಾಯ್ತು”
“ಛೆ ಪಾಪ ..ನೀನು ಅಷ್ಟು ವಯಸ್ಸಾದ ಅಜ್ಜನ ಮೂರನೆ ಹೆಂಡತಿ ಆಗೇ ಬಿಟ್ಯಲ್ಲಾ ಅಜ್ಜಿ”…

“ಹೂಂ ಪುಟ್ಟಾ, ಈ ಮನೆಗೆ ಬಂದೆ, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಹೋದೆ, ಪ್ರೀತಿ ಪ್ರೇಮ ಅರಿಯುವ ಮುನ್ನವೇ ೬ ಮಕ್ಕಳೂ ಆದವು. ಈ ರೀತಿ ೧೫ ವರ್ಷ ನಿಮ್ಮಜ್ಜನೊಂದಿಗೆ ಕಳೆದಿದ್ದೆ. ಅಷ್ಟರಲ್ಲಿ ಯಾವುದೋ ಖಾಯಿಲೆ ಅವರನ್ನು ತಿನ್ನೋಕೆ ಶುರು ಮಾಡ್ತು. ಯಾವ ಔಷಧ ಮದ್ದಿಗೂ ಗುಣವಾಗದೇ ವರ್ಷದಲ್ಲೇ ನಿಮ್ಮಜ್ಜ ತೀರಿಕೊಂಡರು”

ಅಯ್ಯೊ ಅಷ್ಟು ಬೇಗಾನಾ? ನೀನಿನ್ನೂ ಚಿಕ್ಕೋಳಲ್ವಾ ಅಜ್ಜಿ? ಜೊತೆಗೆ ಅಷ್ಟೊಂದು ಮಕ್ಕಳು ಬೇರೆ…ಏನು ಮಾಡಿದೆ ಅಜ್ಜಿ?

“ಮಾಡೋದೇನು ಪುಟ್ಟಾ, ಕರ್ತವ್ಯ ಇತ್ತಲ್ಲ..ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿದೆ, ಗದ್ದೆ ತೋಟದಲ್ಲಿ ದುಡಿದೆ, ಬಂದ ಫಸಲಿನಲ್ಲಿ ಊಟ ಖರ್ಚು ನಿಭಾಯಿಸಿದೆ. ಹೇಗೋ ಆ ದಿನಗಳು ಕಳೆದವು. ಎಲ್ಲಾ ಮಕ್ಕಳು ಬೆಳೆದವು, ವಿದ್ಯೆ ಕಲಿತು, ತಮ್ಮ ಕಾಲಮೇಲೆ ನಿಂತು, ಮದುವೆಯಾಗಿ ಈಗ ನೀವೆಲ್ಲ ಹುಟ್ಟಿದ್ದೀರಾ”….

ಹಾಗಾದ್ರೆ ನಿಂಗೆ ಅಜ್ಜನಿಗೆ ಪ್ರೀತಿ ಮಾಡೋಕೆ ಆಗ್ಲೇ ಇಲ್ವಾ ಅಜ್ಜಿ?

“ಎಲ್ಲಿ ಪ್ರೀತಿ ಮಗಳೆ? ಒಲ್ಲದ ಗಂಡಿನೊಂದಿಗೆ ಮದುವೆ, ಎಲ್ಲ ಅರಿಯುವ ಮುನ್ನವೆ ಮಕ್ಕಳು, ಸಂಸಾರ. ತಿಳುವಳಿಕೆ ಬರುವ ವಯಸ್ಸಿನಲ್ಲಿ ಪ್ರೀತಿಸೊ ಮನುಷ್ಯನೇ ಇಲ್ಲವಲ್ಲ…ಆಗ ಕರ್ತವ್ಯವನ್ನೇ ಪ್ರೀತಿಸಿದೆ ಅಷ್ಟೆ”……

ಆಗ ನಾನು ಯೋಚನೆಗೆ ಬಿದ್ದೆ. ಅಜ್ಜಿಗೆ ಈಗ ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಅಳಿಯಂದಿರು ಅಂತಾ ಪ್ರೀತಿಸೊ ದೊಡ್ಡ ಪರಿವಾರವೇ ಇದೆ, ಆದ್ರೆ ಪತಿ, ಪತ್ನಿಯ ನಡುವಿನ ಆ ಪ್ರೀತಿ ಯಾವತ್ತೂ ಸಿಕ್ಕೇ ಇಲ್ವಾ? ಅವಳು ಕೂಡಾ ಅದನ್ನು ಕೊಡೋಕೆ ಅವಕಾಶವೇ ಆಗಿಲ್ವಾ? ಆಗಿನ ಅವಳ ಜೀವನವನ್ನು, ಈಗಿನ ನಮ್ಮ ಜೀವನದ ಜೊತೆ ತುಲನೆ ಮಾಡಿ ಅಜ್ಜಿಯ ಮುಖವನ್ನೇ ಒಮ್ಮೆ ದಿಟ್ಟಿಸಿ ನೋಡಿದೆ.
ಪ್ರೀತಿ – ಪ್ರೇಮ ಹೆಪ್ಪುಗಟ್ಟಿ ನಿಂತಂತೆ ತೋರಿತು ಮುಸ್ಸಂಜೆಯ ಮಬ್ಬು ಬೆಳಕಲ್ಲಿ…………………..

( ನನ್ನಜ್ಜಿಯ ನೈಜ ಕಥೆಯಲ್ಲ )

Published in: on ಜೂನ್ 17, 2010 at 2:31 AM  Comments (7)  

ಓ ನನ್ನ ಪ್ರೇಮವೇ…

ನೀ ಮರವಾಗಿ ಆಸರೆ ನೀಡೆ
ನಾ ಲತೆಯಾಗಿ ಬಳಸಿ ನಿಲ್ಲುವೆ ನಿನ್ನ

ನೀ ಸಾಗರವಾಗಿ ನನ್ನ ನಿನ್ನೊಳು ಹುದುಗಿಸಿಕೊಳ್ಳೆ
ನಾ ನದಿಯಾಗಿ ಓಡೋಡಿ ಬರುವೆ ನಿನ್ನ ಸೇರಲು

ನೀ ಮುನ್ನಡೆಯೆ ದಾರಿ ದೀಪವಾಗಿ
ನಾ ಬರುವೆ ನಿನ್ನ ಹೆಜ್ಜೆ ಗುರುತಾಗಿ

ನೀ ದುಂಬಿಯಾಗಿ ಅಲೆಯುತಿರೆ
ನಾ ಕಾಯುತಿಹೆ ಹೂವಾಗಿ ಮಕರಂದ ನೀಡಲು

ನೀ ಹನಿಯಾಗಿ ವರ್ಷಧಾರೆಯಾಗಿ ಸುರಿಯುತಿರೆ
ನಾ ಕಾಯುತಿಹೆ ಭುವಿಯಾಗಿ ನಿನ್ನ ಹೀರಲು

ನೀ ನನ್ನ ಹಿತವಾಗಿ ನೋವು ನಲಿವೇ ಆಗಿ ಜೊತೆಯಿರಲು
ನಾ ಬರುವೆ ಕೈ ಹಿಡಿದು ಬಾಳಾಗಿ ಬಂಧುವಾಗಿ

Published in: on ಜೂನ್ 9, 2010 at 2:53 AM  Comments (8)  

ಜಾರದಿರು ಹನಿಯಾಗಿ ಮುಗ್ದ ಸವಿ ನಗುವೆ….

ಜಾರದಿರು ಕಂಬನಿಯೆ
ನಕ್ಷತ್ರದಂಚಿಂದ
ತುಳುಕದಿರು ಉಕ್ಕಿದಾ
ಕೊಳವಾಗಿ ನೀ

ಕೋಟಿ ಮೀರಿದ ಬೆಲೆಯ
ಕಿರುನಗೆಯ ಮುಚ್ಚಿಟ್ಟು
ಬಾರದಿರು ಓಡೋಡಿ
ಕಣ್ಣಂಚಲಿ

ತಂಗಾಳಿ ಕಾದಿಹುದು
ಮುಂಗುರುಳ ತೀಡಲು
ಚಂದಿರನು ತಪಿಸಿದನು
ಕೇಕೆಗಾಗಿ

ಹಾಡುತಿಹುದು ಜೋಗುಳ
ಪಶು ಪಕ್ಷಿಸಂಕುಲ
ನಿನ್ನೊಂದು ನಸುನಗೆಯ
ಕುಡಿನೋಟಕೆ

ಜಾರಿ ಬಿದ್ದು ಚಿಪ್ಪಿನೊಳು
ಮುತ್ತಾಗದೀ ಹನಿ
ಮುಚ್ಚಿಟ್ಟೊಡೆ ಅರಳುವುದು ಹೂವಾಗಿ
ತುಟಿಯಂಚಲಿ

ಹೂವಿಂದ ಹೂ ಬಿರಿದು
ನಗೆಯಿಂದ ನಗೆ ಹರಡಿ
ಪಸರಿಸಲಿ ಎಲ್ಲೆಡೆ
ಸಂತೋಷದಾ ಹೊನಲಾಗಿ

Published in: on ಜೂನ್ 9, 2010 at 2:42 AM  Comments (4)  

ಪ್ರೀತಿ ಇಲ್ಲದ ಮೇಲೆ……

ಒಬ್ಬೊಬ್ಬರೂ ಒಂದೊಂದು ರೀತಿಯಾಗಿ ಪ್ರೀತಿಯ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. ಆದರೆ ವಾಸ್ತವದಲ್ಲಿ ನಿಜವಾದ ಪ್ರೀತಿ ಎಂದರೇನು? ಅದು ಹೇಗಿರುತ್ತದೆ? ಎಲ್ಲಿ ಹುಟ್ಟುತ್ತದೆ? ಮನಸಲ್ಲಾ? ಹೃದಯದಲ್ಲಾ?, ಬುದ್ಧಿಯಲ್ಲಾ? ತಿಳಿದಿಲ್ಲ. ಯಾವಾಗ ಬರುತ್ತದೆ, ಯಾರ ಮೇಲೆ ಬರುತ್ತದೆ ಅರಿತಿಲ್ಲ. ಆದರೆ ಇಷ್ಟು ಮಾತ್ರ ಅರಿತಿದ್ದೇನೆ..ಪ್ರೀತಿ ಇಲ್ಲದೆ ಬದುಕಿಲ್ಲ….

ಅಮ್ಮನ ಮಮತೆ, ಮಡಿಲು, ಕೈತುತ್ತು
ಅಪ್ಪನ ವಾತ್ಸಲ್ಯ, ಬೆರಳಿನ ಆಧಾರ, ಹೊತ್ತ ಹೆಗಲು
ಸಹೋದರ ಸಹೋದರಿಯರು ತೋರಿದ ಕಾಳಜಿ, ಆಟವಾಡಿದ, ಕಿತ್ತಾಡಿದ ಕ್ಷಣಗಳು
ಸ್ನೇಹಿತ ಸ್ನೇಹಿತೆಯರ ಸ್ನೇಹ, ಕಷ್ಟಕಾಲದ ಜೊತೆ
ಪ್ರಿಯತಮ ಪ್ರೇಯಸಿಯರ ನಡುವಿನ ರೋಮಾಂಚನ, ಸಂತೋಷದ ಘಳಿಗೆಗಳು ಇವೆಲ್ಲವೂ ಪ್ರೀತಿಯೇ.

ಒಂದು ವಸ್ತುವಿನ ಬಗ್ಗೆ ಇರುವ ಮಮಕಾರ, ಅದು ದೊರಕಿದಾಗ ಸಿಗುವ ಆನಂದ, ಸಾಕಿದ ಒಂದು ಪ್ರಾಣಿಯ ಜೊತೆಗಿನ ಬಂಧ, ಅದು ತೋರುವ ವಿಶ್ವಾಸವೂ ಕೂಡ ನನ್ನ ದೃಷ್ಟಿಯಲ್ಲಿ ಪ್ರೀತಿಯೇ. ಆದರೆ ಇವೆಲ್ಲ ಪ್ರೀತಿಯ ಬೇರೆ ಬೇರೆ ಮುಖಗಳು, ಎಲ್ಲವೂ ಬೇರೆ ಬೇರೆ, ಅದರ ಅನುಭವವೂ ಬೇರೆ, ಆನಂದವೂ ಬೇರೆ ಅಲ್ಲವೆ?

ಆದರೆ ಪತಿ ಪತ್ನಿಯರ ನಡುವಿನ ಪ್ರೀತಿಯನ್ನು ವಿಶೇಷ ವಾಗಿ ವರ್ಣಿಸುತ್ತಾರೆ… ಎರಡು ಜೀವಗಳು ಬೇರೆ ಬೇರೆ ಪರಿಸರದಲ್ಲಿ ಹುಟ್ಟಿ, ಬೆಳೆದು ತದನಂತರ ಒಂದು ಬಂಧನದಲ್ಲಿ ಬೆಸೆದು ಜೀವನಪೂರ್ತಿ ಒಂದಾಗಿ ಕಳೆಯುತ್ತಾರಲ್ಲಾ ಅದಕ್ಕಾಗಿಯೇ ಇರಬೇಕು ಈ ಸಂಬಂಧಕ್ಕೆ ಪ್ರೀತಿಯಲ್ಲಿ ವಿಶೇಷ ಸ್ಥಾನ.

ಇಬ್ಬರ ಸ್ವಭಾವವೂ ಬೇರೆ, ಅಲೋಚನೆಗಳಲ್ಲೂ ಅಂತರ, ದಿನನಿತ್ಯದ ಅಭ್ಯಾಸಗಳಂತೂ ಸಂಪೂರ್ಣ ವಿರುಧ್ದ. ಆದರೂ ಒಬ್ಬರ ಸ್ವಭಾವ, ಅಭ್ಯಾಸ, ಆಲೋಚನೆಗಳನ್ನು ಸ್ವೀಕರಿಸಿ ಅದರೊಂದಿಗೆ ತಮ್ಮ ಅಸೆ, ಇಂಗಿತ, ಅಭಿಪ್ರಾಯಗಳನ್ನು ಜೋಡಿಸಿ, ಹೊಸದೆ ಆದ ಒಂದು ಲೋಕವನ್ನು ಕಟ್ಟಿಕೊಳ್ಳುವ ಕೆಲಸ ಅಷ್ಟು ಸುಲಭದ ಮಾತಲ್ಲ. ಆದರೆ ಈ ಪ್ರೀತಿ ಎಂಬ ಬೆಸುಗೆ ಇದೆಯಲ್ಲ ಅದು ಎಲ್ಲವನ್ನೂ ಸುಲಭ, ಸರಳ ಸಹಜವಾಗಿ ಪರಿವರ್ತಿಸಿಬಿಡುತ್ತದೆ.

ಎಷ್ಟೋ ಸಾರಿ ಭಿನ್ನ ಅಭಿಪ್ರಾಯಗಳಿಂದಾಗಿರಬಹುದು ಅಥವಾ ಇನ್ಯಾವುದೇ ಕಾರಣದಿಂದ ಜಗಳ, ಮಾತಿನ ಚಕಮಕಿ, ಒಬ್ಬರ ಮೇಲೆ ಇನ್ನೊಬ್ಬರ ಕೋಪ, ಅಸಹನೆ ಇವೆಲ್ಲ ಎಲ್ಲರ ಮನೆಯ ದೋಸೆಯೂ ತೂತು ಎಂಬಷ್ಟೆ ಸತ್ಯವಾದರೂ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಇವು ಕ್ಷಣಕಾಲ ಮಾತ್ರ. ಮತ್ತೆ ಇಬ್ಬರೂ ಒಂದೆ ಜೀವ. ಹುಟ್ಟಿದಾಗಿನಿಂದಲೂ ಒಟ್ಟಿಗೆ ಇದ್ದವರಂತೆ, ಮುಂದಿನ ಜನುಮಗಳಲ್ಲೂ ಒಟ್ಟಿಗೇ ಇರುವವರಂತೆ ಒಬ್ಬರಿಗೊಬ್ಬರು ಎಲ್ಲವನ್ನೂ ಹಂಚಿಕೊಂಡು, ಪರಸ್ಪರರ ಅವಶ್ಯಕತೆಗಳನ್ನು ಪೂರೈಸುತ್ತ, ವಿಶೇಷ ಮಮಕಾರ ವ್ಯಕ್ತಪಡಿಸುತ್ತ, ಒಂದೇ ಸೂರಿನಡಿ ಬದುಕುವುದಿದೆಯಲ್ಲ ಅದೇ ಏನು ಪ್ರೀತಿ ಅಂದರೆ?

ನಾನು ಎನ್ನುವುದು ಹೋಗಿ ನಾವು ಎಂದಾಗಿ, ನನಗಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ನಮಗಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಭಾವನೆ ಮೂಡಿ, ಬೇರೆ ಗಂಡಸರು ಸಲ್ಮಾನ್ ಖಾನ್ ನಂತೆ ಇದ್ದರೂ ನನ್ನ ಕಣ್ಣಿಗೆ ನನ್ನ ಗಂಡ ಯಾವ ಸೂಪರ್ ಸ್ಟಾರಿಗಿಂತ ಕಮ್ಮಿ ಇಲ್ಲ ಎಂಬ ಭಾವನೆ ಹೆಣ್ಣಿಗೆ ಬಂದು , ಬೇರೆ ಹೆಣ್ಣುಗಳು ಐಶ್ವರ್ಯ ರೈ ಅಂತೆ ಇದ್ದರೂ ನನ್ನ ಹೆಂಡತಿ ಯಾವ ಮಿಸ್ ಯೂನಿವರ್ಸಿಗಿಂತ ಏನು ಕಮ್ಮಿ ಎಂಬ ಭಾವ ಪತಿಗೆ ಮೂಡಿ, ಪರಸ್ಪರರಲ್ಲಿ ಗೌರವ ಹಾಗೂ ಇವನು ನನ್ನವನು, ಇವಳು ನನ್ನವಳು ಎಂಬ ಹೆಮ್ಮೆ ಇದ್ದೊಡೆ ಇದನ್ನೆ ಪ್ರೀತಿ ಎನ್ನುವರೆ?

ಎರಡು ಯುವ ಜೀವಗಳು ಹೊಳೆಯ ದಡದಲ್ಲಿ ಕೈಗೆ ಕೈ ಬೆಸೆದು ಚಂದಿರನ ನೋಡುತ್ತಾ ಪ್ರಪಂಚವನ್ನೆ ಮರೆತು ನಾಳೆಯ ಹೊಂಗನಸನ್ನು ಕಾಣುವುದಿದೆಯಲ್ಲ ಅದು ಪ್ರೀತಿಯೆ?

ಅರವತ್ತು ದಾಟಿದ ದಂಪತಿಗಳು ಒಂದು ದಿನವೂ ತಪ್ಪದೆ ಜೊತೆಯಾಗಿ ನಸುನಗುತ್ತಾ ಮಾತಾಡಿಕೊಂಡು ಒಬ್ಬರ ಊರುಗೋಲು ಇನ್ನೊಬ್ಬರಾಗಿ ಪಾರ್ಕ್ ಗೆ ವಾಕಿಂಗ್ ಬರುವುದಿದೆಯಲ್ಲ ಅದೂ ಪ್ರೀತಿಯೆ?

ಪರಸ್ಪರರು ಖಾಯಿಲೆ ಬಿದ್ದಾಗ ತನ್ನ ಜೀವವೇ ನೊಂದಿತೇನೊ ಎಂಬಂತೆ ಚಡಪಡಿಸುವುದಿದೆಯಲ್ಲ ಇದಲ್ಲವೆ ಪ್ರೀತಿ?

ಮದುವೆಯ ದಿನದಂದು ಮೇಣದ ಬತ್ತಿಯ ಬೆಳಕಲ್ಲಿ, ಪತಿ ಜತನದಿಂದ, ಆಸೆಯಿಂದ ತನಗಾಗಿ ಆರಿಸಿ ತಂದು ಉಡುಗೊರೆಯಾಗಿ ನೀಡಿದ ಸೀರೆ ಉಟ್ಟು ಪತ್ನಿ ತನ್ನ ಕೈಯಾರೆ, ಮನಸಾರೆ ತಯಾರಿಸಿ ವಾತ್ಸಲ್ಯಪೂರಿತವಾಗಿ ಬಡಿಸಿದ ಖಾದ್ಯವನ್ನು ಪತಿ ಪತ್ನಿ ಇಬ್ಬರೂ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಸವಿಯುವುದಿದೆಯಲ್ಲ ಪ್ರೀತಿಯ ಯಾವ ಮುಖವಿದು?

ಜೀವನದ ಪ್ರತಿ ನಿಮಿಷದಲಿ, ಪ್ರತಿ ಹೆಜ್ಜೆಗೆ ಪ್ರೀತಿಯ ಅನುಭವ, ಅನುಭೂತಿ ಪಡೆಯುವ ನಮಗೆ ಪ್ರೀತಿಯೆ ಇಲ್ಲದಿದ್ದೊಡೆ ಎಂತು ಎಂಬುದು ಊಹಿಸಿಕೊಳ್ಳಲೂ ಆಗದ ವಿಷ.
ಪ್ರೀತಿಯಿಲ್ಲದ ಬದುಕು, ನೀರಿಲ್ಲದ ನದಿಯಂತೆ, ಚಂದಿರನಿಲ್ಲದ ಬಾನಿನಂತೆ, ಹಸಿರಿಲ್ಲದ ಭೂಮಿಯಂತೆ ಜೀವಂತ ಶವ…….

ಇದರರ್ಥ ನನಗೆ ಬರೀ ಪ್ರೀತಿಯೊಂದೆ ಬದುಕು ಎಂದೇನಲ್ಲ, ಉಳಿದ ಅವಶ್ಯಕ ಸವಲತ್ತು, ಸಂದರ್ಭ, ವಾತಾವರಣದೊಂದಿಗೆ ಪ್ರೀತಿಯಿದ್ದೊಡೆ
ಶರೀರದಲ್ಲಿ ಪ್ರಾಣ ಸಂಚಾರವಾದಂತೆ, ಬಂಜರು ಭೂಮಿಯಲ್ಲಿ ಮಳೆ ಸುರಿದು ಹಸಿರು ಮೊಳೆತಂತೆ……ಇದು ನನ್ನ ಭಾವನೆ. ನಿಮ್ಮದು?

Published in: on ಜೂನ್ 4, 2010 at 3:38 AM  Comments (11)  

ಇಂದು ಅವಳಿಲ್ಲ


ಜೀವನದಲ್ಲಿ ಯಾವುದೂ ಗ್ಯಾರಂಟಿ ಇಲ್ಲ, ಇವತ್ತು ಇರೋರು ನಾಳೆ ಇರ್ತಾರೆ ಅನ್ನೋ ನಂಬಿಕೆ ಇಲ್ಲ, ಏನಪ್ಪಾ ಇದು ? ವಿರಾಗಿ ಥರಾ ಮಾತಾಡ್ತಾ ಇದಾಳೆ ಅಂತ ಅಂದುಕೊಳ್ಳಬೇಡಿ, ನಾನು ಹೀಗೆ ಅನ್ನೋದಕ್ಕೆ ಕಾರಣ ಇದೆ. ಮೊನ್ನೆ ಮೊನ್ನೆ ದೀಪಾವಳಿಯಲ್ಲಿ ಅವಳು ಎಷ್ಟು ಚೈತನ್ಯ ತುಂಬಿಕೊಂಡು ನಗು ನಗ್ತಾ ಇದ್ದಳು ಅನ್ನುತ್ತೀರಾ, ಯಾವುದೇ ರೋಗವಿಲ್ಲದೇ ಆರೋಗ್ಯವಾಗಿ ಇದ್ದಳು. ಸರಿಯಾಗಿ ಆಹಾರ ತೆಗೆದುಕೊಳ್ಳುತ್ತಾ ಇದ್ದಳು. ನೋಡುವುದಕ್ಕೂ ಬಹಳ ಸುಂದರವಾಗಿ ಕಾಣುತ್ತಿದ್ದಳು. ಅವಳ ಸೌಂದರ್ಯ ನೋಡಿ ಪಕ್ಕದಲ್ಲಿ ನಿಂತು ಫೋಟೋ ಬೇರೆ ತೆಗೆದುಕೂಂಡಿದ್ವಿ. ಆದರೆ ಇಷ್ಟು ಬೇಗ ಅವಳು ನಮ್ಮಿಂದ ದೂರ ಹೊರಟು ಹೋಗ್ತಾಳೆ ಅಂದುಕೊಂಡಿರಲಿಲ್ಲ. ಈ ಪ್ರಕೃತಿ ವಿಕೋಪಕ್ಕೆ ಅವಳು ಇಂದು ಬಲಿಯಾಗಿದ್ದಾಳೆ. ಗಿಡ ಮರಗಳು ಕಡಿಮೆಯಾಗಿ, ವಾಹನಗಳು ಹೆಚ್ಚಾಗಿ ವಾತಾವರಣದಲ್ಲಿ ಉಂಟಾದ ಅತಿಯಾದ ಉಷ್ಣತೆ, ಬಿಸಿಲಿಗೆ ಇಂದು ಅವಳು ಬಲಿಯಾಗಿದ್ದಾಳೆ, ತಂಪಾದ ನೀರೆರೆದರು ಕೂಡ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಅವಳು ಅಂದ್ರೆ ಯಾರು ಅಂತ ಪರಿಚಯನೇ ಮಾಡಿಕೊಡಲಿಲ್ಲ ನೋಡಿ. ಅವಳು ನಾನು ದಿನಾಲೂ ನೋಡಿ ಸಂತೋಷ ಪಡುವ ನಮ್ಮ ಮನೆಯ ಮುಂದಿನ ಹಸಿರಿನಿಂದ ನಳನಳಿಸುತ್ತಿದ್ದ ಬಳ್ಳಿ. ಇಂದು ಬರೀ ಅವಳ ಅಸ್ತಿಪಂಜರ ಇದೆ. ಸತ್ತಿರುವ ಅವಳನ್ನು ಕಿತ್ತೆಸೆಯುವ ತಯಾರಿ ನಡೆಯುತ್ತಿದೆ. ಇದನ್ನೆಲ್ಲ ನೋಡಿ ನನ್ನ ಮನಸ್ಸಿನಲ್ಲಿ ಏನೋ ಒಂದು ಕಳವಳ. ಮುಂದೊಂದು ದಿನ ಗಿಡಮರಗಳನ್ನಿ ಇಲ್ಲವಾಗಿಸಿದ ತಪ್ಪಿಗೆ ಪ್ರಕೃತಿಯ ಕೋಪಕ್ಕೆ ನಾವೇ ಬಲಿಯಾಗಬೇಕೇನೋ ಎನ್ನುವ ಚಿಂತೆ….

Published in: on ಏಪ್ರಿಲ್ 30, 2010 at 2:23 AM  Comments (4)  

ತುಮುಲ

ಅದ್ಯಾವ ವಸ್ತುವಿನಿಂದ ಮಾದಿದ್ದಾನೊ ದೇವ್ರು ಈ ಮನಸ್ಸನ್ನ, ಎಷ್ಟು ಮೄದು, ಎಷ್ಟು ಸೂಕ್ಶ್ಮ ಅಂತೀರ, ಒಂದು ವಿಷಯ ಇದರ ಒಳಗೆ ಹೊಕ್ಕಿದ್ರೆ ಸಾಕು, ಹುಳದ ಹಾಗೆ ಕೊರೆಯುತ್ತಲೇ ಹೊಗುತ್ತೆ. ಮೈಗೆ ಆದ ಗಾಯ ಮಾಸಿದರೂ ಮನಸ್ಸಿಗಾದ ಗಾಯ ಮಾಸದು. ಸಂತೋಷದ ಕ್ಶಣಗಳು ನೆನಪಿನಲ್ಲಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಸಮಯ ಕಷ್ಟದ, ದುಃಖದ ಕ್ಷಣಗಳು ನೆನಪಿನಲ್ಲಿರುತ್ತವೆ. ಇದು ಎಲ್ಲರಲ್ಲಿರುವ ಸಾಮಾನ್ಯ ಗುಣವಾದರೂ ಕೆಲವರಲ್ಲಿ ಇಂತಹ ಕಹಿ ಘಟನೆಗಳನ್ನು ಮರೆಯುವ ಅಥವಾ ತೊರೆಯುವ ಗುಣ ಹೆಚ್ಚಿದ್ದರೆ ಇನ್ನು ಕೆಲವರಲ್ಲಿ ಅದೇ ಅದೇ ವಿಷಯಗಳು ಮನಸ್ಸಿನಲ್ಲಿ ಮನೆ ಮಾಡಿ ಕುಳಿತುಕೊಂಡುಬಿಡುತ್ತವೆ. ಇಂತಹ ಜನರಲ್ಲಿ ಒಳ್ಳೆಯ ಉದಾಹರಣೆ ಎಂದರೆ ನಾನು. ನಡೆದ ಕಹಿ ಘಟನೆಗಳು, ಕಹಿ ಉಂಟುಮಾಡಿದ ಜನರು, ಅವರ ದುಃಖಕ್ಕೆ, ಕಷ್ಟಕ್ಕೆ, ಸಮಯಕ್ಕೆ ಮಾತ್ರ ನಮ್ಮಿಂದ ಉಪಯೋಗ ಪಡೆದುನಮ್ಮ ಕಷ್ಟಕಾಲದಲ್ಲಿ ಮುಖ ತಿರುಗಿಸುವ ಬಂಧುಗಳಿ, ಮಿತ್ರರು, ಕೆಲವು ಕಟು ಮಾತುಗಳು, ಅನುಭವಿಸಿದ ಕೆಲವು ಕಷ್ಟದ ದಿನಗಳು ಇವುಗಳನ್ನು ಎಷ್ಟು ಮರೆಯಬೇಕೆಂದು ಅಂದುಕೊಂಡರೂ ಮರಳಿ ಮರಳಿ ಬಂದು ಕಾಡುತ್ತವೆ. ಮುಂದೆಯೂ ಇಂತಹ ಘಟನೆಗಳು ನಡೆಯಬಹುದು ಎಂದು ಮನಸ್ಸು ಹೆದರುತ್ತದೆ, ಕಳವಳಗೊಳ್ಳುತ್ತದೆ. ರಾತ್ರಿ ಮಲಗಿದಾಗ, ಉುಟ ಮಾಡುತ್ತಿರುವಾಗ, ಪ್ರಯಾಣಿಸುತ್ತಿರುವಾಗ,ಕುಳಿತಾಗ, ನಿಂತಾಗ ಯಾವಾಗ ಬೇಕಾದರೂ ಕರೆಯದೇ ಬರುವ ಅತಿಥಿಯಂತೆ ಒಕ್ಕರಿಸಿಬಿಡುತ್ತದೆ.

ಅದೇ ನನ್ನ ಪತಿ ಇದಕ್ಕೆ ವ್ಯತಿರಿಕ್ತ. ಆದದ್ದಾಯಿತು ಮರೆತುಬಿಡಬೇಕು ಎನ್ನುವ ವ್ಯಕ್ತಿ. ನಮ್ಮ ಕಷ್ಟದ ಸಮಯಕ್ಕಾಗದೆ ಮುಖ ತಿರುಗಿಸಿದವರಿಗೂ ಸಹ ಅವರ ಕಷ್ಟಕಾಗುವ ಗುಣ. ಕಹಿ ಮಾತುಗಳು, ಘಟನೆಗಳನ್ನು ಹಿಂದೆ ಬಿಟ್ಟು ಮುಂದೆ ನಡೆಯಬೇಕು ಎನ್ನುವ ಸ್ವಭಾವ. ಇದೆ ವಿಷಯಕ್ಕೆ ನಮ್ಮಿಬ್ಬರಲ್ಲಿ ಎಷ್ಟೋ ಬಾರಿ ವಾದ ವಿವಾದ, ವಿಚಾರ ವಿಮರ್ಶೆಗಳಾಗಿವೆ. ಆದರೂ ಇಂದಿನವರೆಗೂ ಅದಕ್ಕೊಂದು ಪೂರ್ಣವಿರಾಮ ನೀಡಲಾಗಲಿಲ್ಲ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು, ನಮಗೆ ನೋವು ನೀಡಿದವರಿಗೂ ಪ್ರೀತಿ ತೋರಿಸು, ಅವರ ಕಷ್ಟಕಾಗು ಎನ್ನುವುದು ನನ್ನವರ ತತ್ವವಾದರೆ, ನನ್ನ ತತ್ವ ಇದಕ್ಕೆ ಸ್ವಲ್ಪ ವಿರುಧ್ಧ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು ಎಂಬ ಮಾತುಗಳನ್ನು ಒಪ್ಪುತ್ತೇನೆ ಮತ್ತು ನಾನು ಕೂಡ ಪಾಲಿಸಲು ಯತ್ನಿಸುತ್ತೇನಾದರೂ, ನೀ ನನಗಿದ್ದಾರೆ ನಾ ನಿನಗೆ, ನಿನ್ನಿಂದ ನನಗೆ ನೋವುಂಟಾಗುವುದಿದ್ದರೆ ನಾನು ನಿನ್ನಿಂದ ದೂರವೇ ಉಳಿಯುತ್ತೇನೆ, ಪ್ರೀತಿ ಇರಲಿ, ಕಾಳಜಿ ಇರಲಿ, ಸಂಬಂಧವಿರಲಿ, ಸ್ನೇಹವಿರಲಿ ಎಲ್ಲವೂ ಎರಡು ಕಡೆಯಿಂದಲೂ ಇರಬೇಕು. ಒಂದೇ ಕಡೆಯಿಂದ ಕೊಡುವ ಒಂದು ಕೈ ಚಪ್ಪಾಳೆ ಆಗಬಾರದು ಎನ್ನುವುದು ನನ್ನ ಪಾಲಿಸಿ. ಸ್ನೇಹ, ಪ್ರೀತಿ, ಕರ್ತವ್ಯ ಎಲ್ಲವನ್ನು ನನ್ನ ಕಡೆಯಿಂದ ಸಾಧ್ಯವಾದಷ್ಟು ನೀಡುತ್ತೇನಾದರೂ ಎದುರಿನವರಿಂದಲೂ ಅದನ್ನೇ ಬಯಸುತ್ತೇನೆ. ಇದೆ ವಿಷಯಕ್ಕೆ ಎಷ್ಟೋ ಬಾರಿ ಮನ ನೊಂದಿದ್ದು ಇದೆ. ಈ ರೀತಿ ಬಯಸದೇ ತನ್ನ ಕೈಲಾದದ್ದನ್ನು ನೀಡುವ ನನ್ನವರು ಕೆಲವೊಮ್ಮೆ ನನ್ನ ಕಣ್ಣಿಗೆ ತ್ಯಾಗಿಯಂತೆ, ವಿರಾಗಿಯಂತೆ ಕಂಡಿದ್ದು ಇದೆ…ಇವೆಲ್ಲ ತುಮುಲ, ತಳಮಳಗಳ ಜೊತೆಗೆ ಆಗಾಗ ಸಂತೋಷದ ಕ್ಷಣಗಳು ಮಿಂಚಿನಂತೆ ಬಂದು, ನಕ್ಷತ್ರದಂತೆ ಮಿನುಗಿ ಹೋಗುತ್ತಿರುತ್ತವೆ. ಕೆಲವು ಸಂತೋಷದ ಕ್ಷಣಗಳಲ್ಲಿ ಈ ಸಮಯ ಹೀಗೆ ಇರಬಾರದೇ ಎನ್ನಿಸಿದರೆ, ದುಃಖದ ಸಂದರ್ಭದಲ್ಲಿ ಈ ಸಮಯ ಯಾವಾಗ ಕಳೆಯುವುದೋ ಎನ್ನಿಸಿಬಿಡುತ್ತದೆ, ಸುಖದಲ್ಲಿ ನನ್ನಷ್ಟು ಸುಖಿ ಬೆರಳೆಣಿಕೆಯಷ್ಟು ಎನ್ನಿಸಿದರೆ ಕಷ್ಟದಲ್ಲಿ ನನ್ನಷ್ಟು ಅಸುಖಿ ಪ್ರಪಂಚದಲ್ಲಿ ಯಾರೂ ಇಲ್ಲ ಎಂಬ ಭಾವನೆ. ಜೀವನವೆಂದರೆ ಇದೇ ಏನು? ಮನಸ್ಸೆಂದರೆ ಹೀಗೇ ಏನು? ಎಲ್ಲರಿಗೂ ಹೀಗೆ ಆಗುತ್ತಾ? ಆಗಬೇಕಾ? ಅನ್ನಿಸುತ್ತಾ? ಅನ್ನಿಸಬೇಕಾ? ಎಷ್ಟೊಂದು ಪ್ರಶ್ನೆಗಳು ಮನದಲ್ಲಿ….ಉತ್ತರ?

Published in: on ಏಪ್ರಿಲ್ 29, 2010 at 4:54 AM  Comments (5)  

ಮರು ಹುಟ್ಟು

ಬ್ಲಾಗ್ ಬರೀದೆ ಹತ್ರ ಹತ್ರ ಒಂದು ವರ್ಷ ಅಯ್ತು. ಮಧ್ಯದಲ್ಲಿ ಕೆಲವು ಖಾಸಗಿ ತಾಪತ್ರಯಗಳು ಮನಸ್ಸನ್ನು ಶಾಂತವಾಗಿರುವುದಕ್ಕೆ ಬಿಡ್ತಾ ಇರಲಿಲ್ಲ. ಈ ಮನಸ್ಸೆ ಹೀಗೆ ಕಣ್ರಿ, ಒಂದು ಸಾರಿ ಚಂಚಲತೆಯನ್ನು ಕಲಿತುಕೊಂಡು ಬಿಟ್ರೆ ಹುಚ್ಚು ಕುದುರೆಯ ಹಾಗೆ ಅಲೆಯುತ್ತಲೇ ಇರುತ್ತೆ. ನಾನು ಬರೀಬೇಕು ಅನ್ನೊ ಅಸೆ ಏನೊ ಇತ್ತು, ಜೊತೆಗೆ ನಿಮ್ಮ ಹತ್ರ ಹಂಚಿಕೊಳ್ಳೊ ವಿಷಯಾನೂ ಇತ್ತು, ಆದ್ರೆ ಮನಸ್ಸನ್ನು ಮಾತ್ರ ಒಂದು ಕಡೆ ನಿಲ್ಲಿಸಿ ಬರಹದತ್ತ ಗಮನ ಹರಿಸೋಕೆ ಆಗ್ತಾನೆ ಇರ್ಲಿಲ್ಲ. ಸ್ನೇಹಿತ, ಸ್ನೇಹಿತೆಯರೆಲ್ಲ ಯಾಕೆ ಬರೀತಾ ಇಲ್ಲ ಅಂತ ಕೇಳೋಕೆ ಶುರು ಮಾಡಿದ್ರು, ನನ್ನ ಪತಿ ಕೂಡ ಯಾಕೆ ನಿನ್ನ ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯ? ಬರಿ ಬರಿ ಅಂತ ಹೇಳ್ತಾನೆ ಇದ್ರು. ಅಂತೂ ಇವತ್ತು ಬರೀಲೇ ಬೇಕು ಅಂತ ಗಟ್ಟಿ ಮನಸ್ಸು ಮಾಡಿ ಕೂತುಬಿಟ್ಟಿದ್ದೀನಿ. ಮನಸ್ಸಿನಾಳದಲ್ಲಿ ಅವಿತಿಟ್ಟುಕೊಂಡಿದ್ದ ಎಷ್ಟೋ ವಿಷಯಗಳು ನನ್ನ ಬಗ್ಗೆ ಬರಿ, ನನ್ನ ಬಗ್ಗೆ ಬರಿ ಅಂತ ಪೈಪೋಟಿ ಮಾಡ್ತಾ ಇವೆ. ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಹೊಸ ಉತ್ಸಾಹದೊಂದಿಗೆ ಬ್ಲಾಗನ್ನು ಮರು ಪ್ರಾರಂಭ ಮಾಡ್ತಾ ಇದೀನಿ. ಮೊದಲಿನ ಹಾಗೆ ಬನ್ನಿ, ಓದಿ, ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ.

Published in: on ಏಪ್ರಿಲ್ 29, 2010 at 3:27 AM  Comments (1)  

ಗಜಮುಖ ಗಣಪಾ

ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು…

ಹಬ್ಬ ಬಂತು, ಹಬ್ಬ ಬಂತು ಅಂತ ಹಬ್ಬದ ತಯಾರಿ ಮಾಡಿ ಮುಗಿಸೋ ಹೊತ್ತಿಗೆ ಹಬ್ಬ ಮುಗಿದೆ ಹೋಯ್ತು ನೋಡಿ, ನೋಡ್ತಾ ನೋಡ್ತಾ ನಮ್ಮ ಗಣೇಶನ ಹಬ್ಬ ಮುಗಿದು 5 ದಿನ ಕಳೆದೆ ಹೋಯ್ತು. ನಮ್ಮ ಮನೆಯ ಹಬ್ಬದ ಸಮಾಚಾರವನ್ನು ಸ್ನೇಹಿತರಾದ ನಿಮ್ಮೆಲ್ಲರೊಂದಿಗೂ ಹಂಚಿಕೊಳ್ಳೋಣ, ತಮಗೆಲ್ಲರಿಗೂ ತಡವಾದರೂ ಪರವಾಗಿಲ್ಲ ಸಂದೇಶ ತಿಳಿಸೋಣ ಅಂತ ಬರೀತಾ ಇದೀನಿ. ನೀವೆಲ್ಲರೂ ಹಬ್ಬ ಚೆನ್ನಾಗೆ ಅಚರಿಸಿರ್ತೀರ. ನಾವು ಕೂಡ ಹಬ್ಬದ ಆನಂದ, ಮತ್ತು ಭಕ್ಷ್ಯ ಗಳನ್ನು ಸವಿಯೋದಕ್ಕೆ ಕೆಲವು ಸ್ನೇಹಿತರನ್ನು ಮನೆಗೆ ಕರೆದು, ಅವರೊಂದಿಗೆ ಜೊತೆಗೂಡಿ ಹಬ್ಬದ ಆಚರಣೆ ಮಾಡಿದ್ವಿ. ನಮ್ಮ ಮನೆಗೆ ಬಂದು ಹರಸಿ, ಸಂತಸವನ್ನು ನೀಡಿದ ವಿಘ್ನ ವಿನಾಶಕ ವಿನಾಯಕ, ತಮಗೆಲ್ಲರಿಗೂ ಕೂಡ ಒಳ್ಳೆಯದನ್ನು ಮಾಡಲಿ.

ಬನವಾಸಿಯ ಅರ್ಧ ಗಣಪತಿ
1

ಪ್ರಥಮಮ್ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್
ತ್ರತೀಯಂ ಕೃಷ್ಣಪಿಂಗಾಕ್ಷಂ ಗಜವಕ್ಟ್ರಮ್ ಚತುರ್ಥಕಮ್
ಲಂಬೋದರಮ್ ಪಂಚಾಮಮ್ ಚ ಶಷ್ಟಮ್ ವಿಕತಮೆವಚ
ಸಪ್ತಮಮ್ ವಿಘ್ನರಾಜೇಂದ್ರಮ್ ಧೂಮ್ರವರ್ಣಂ ತಥಾಶ್ಟಕಮ್
ನವಮಮ್ ಬಾಲಚಂದ್ರಮ್ ಚ ದಶಮಾಮ್ ತು ವಿನಾಯಕಮ್
ಏಕಾದಶಮ್ ಗಣಪತಿಮ್ ದ್ವಾದಶಮ್ ತು ಗಜಾನನಮ್
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಾಹ ಪಠೆನ್ನರಹ
ನ ಚ ವಿಘ್ನ ಭಯಂ ಹರಮ್ ತಸ್ಯ ಸಿದ್ಧಿ ಕರಮ್ ಪ್ರಭೊ

ನಮ್ಮ ಮನೆಯ ಗಣೇಶ ಚೌತಿ
Ganesh chaturthi

Published in: on ಆಗಷ್ಟ್ 28, 2009 at 2:30 AM  Comments (9)  

ಬದುಕಿನ ಮುಖಗಳು

ಬದುಕಿನ ಮುಖಗಳ ಪರಿಚಯವನ್ನು ಕೆಲವೊಮ್ಮೆ ನಮ್ಮ ಜೀವನದ ಸಣ್ಣ ಸಣ್ಣ ಘಟನೆಗಳು ಮಾಡಿ ಕೊಡುತ್ತವೆ. ಅಂಥದ್ದೇ ಒಂದು ಪುಟ್ಟ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..

ಮೊನ್ನೆ ಮೊನ್ನೆ ನಾವು ಮನೆ ಚೇಂಜ್ ಮಾಡಿದಾಗ ಶಿಫ್ಟಿಂಗ್ ಕಷ್ಟಕ್ಕಿಂತ ನಮಗೆ ಎದುರಾಗಿದ್ದು ಉುಟದ ಚಿಂತೆ. ಮನೆಯ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ, ಹೊಸ ಮನೆಗೆ ತಂದು ಬಿಚ್ಚಿ ಜೋಡಿಸುವ ತನಕ ನಾವು ಅಡುಗೆ ಮಾಡುವಂತಿಲ್ಲ. ಬೇಗ ಹೊಟೆಲ್ ಗೆ ಹೋಗಿ ಉುಟ ಮಾಡಿಕೊಂಡು ಬಂದುಬಿಡೋಣ ಅಂದ್ರೆ, ಮನೆಯಿಂದ ಅರ್ಧ ಗಂಟೆ ಪ್ರಯಾಣ ಮಾಡಿದ್ರೆ ಮಾತ್ರ ನಮ್ಮ ಸಸ್ಯಾಹಾರದ ಹೊಟೆಲ್ ಸಿಗುತ್ತೆ. ಹೋಗ್ಲಿ ಮನೆಗೆ ಪಾರ್ಸಲ್ ತರಿಸೋಣ ಅಂದ್ರೆ ಇಬ್ಬರಿಗೆ ತರಿಸುವ ಉುಟದ ಹಣಕ್ಕಿಂತ ಮನೆಗೆ ತಂದುಕೊಡುವ ಖರ್ಚೆ ಹೆಚ್ಚಾದಂತೆ ತೋರಿತು. ಮನೆಯ ಹತ್ತಿರ ಇರುವ food court ಎಂಬಲ್ಲಿ ಚೀನೀಯರ, ಮಲೈ ಜನರ ಮಾಂಸದ ಉುಟದ ಭಂಡಾರ. ಅಲ್ಲೇ ಇರುವ ಇನ್ನೊಂದು ಚಿಕ್ಕ ಇಂಡಿಯನ್ ಮುಸ್ಲಿಮ್ ಕ್ಯಾಂಟೀನ್ ನಲ್ಲಿ ಸಿಗುವುದು ಕೂಡ ಮಾಂಸದ ಉುಟವೇ…ಎಣ್ಣೆಯಲ್ಲಿ ಅದ್ದಿದನ್ತಹ ಪ್ಲೇನ್ ಪರಾಟ ಮತ್ತು ದಾಲ್ ಇದು ಮಾತ್ರ ಅಲ್ಲಿ ಸಿಗುವ ಮಾಂಸವಿಲ್ಲದ ಉುಟ.

ಮನೆ ಶಿಫ್ಟ್ ಮಾಡಿ ಜೋಡಿಸುವುದೋ ಅಥವಾ 3 ಹೊತ್ತು ಅರ್ಧ ಗಂಟೆ ಪ್ರಯಾಣ ಮಾಡಿ ಉುಟ ಮಾಡಿಕೊಂಡು ಮತ್ತೆ ಅರ್ಧ ಗಂಟೆ ಪ್ರಯಾಣ ಮಾಡಿ ಮನೆ ತಲುಪುವುದೋ ಅನ್ನುವ ಸಮಸ್ಯೆ. ಹೀಗೆ ಉುಟದ ಚಿಂತೆ ಮಾಡಿಕೊಂಡು ಕುಳಿತಾಗ ಅನೇಕ ಯೋಚನೆಗಳು, ನೆನಪುಗಳು ತಲೆಯಲ್ಲಿ ಸುಳಿದಾಡಿದವು.

ನಾವು ನಮ್ಮ ಉುರಲ್ಲಿದ್ದರೆ ಯಾರಾದರೂ ನೆಂಟರು, ಇಷ್ಟರು, ಸ್ನೇಹಿತರು ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೀತಾ ಇದ್ರು, ಇಲ್ಲ ಅಂದರು ಅಲ್ಲಿ ಸಸ್ಯಾಹಾರಿ ಹೋಟೆಲ್‍ಗಳಿಗಂತು ಬರವಿಲ್ಲ.. ಇಲ್ಲೂ ಕೂಡ ಯಾರಾದರೂ ನಮ್ಮ ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೆಯ ಬಾರದೇ ಅಂತ ಅನ್ನಿಸಿದ್ದು ಸುಳ್ಳಲ್ಲ. ನಾನು ಮೊದಲು ಉುರಲ್ಲಿದ್ದಾಗ ಎಷ್ಟೊಂದು ಜನರ ಮನೆಗೆ ಉುಟಕ್ಕೆ ಹೋಗುವುದನ್ನು ಬೇಕೆಂದೇ ತಪ್ಪಿಸಿಕೊಂಡಿದ್ದೆ. ಅಪ್ಪ, ಅಮ್ಮ ನೀವು ಹೋಗಿಬನ್ನಿ ನಾನು ಬರೋದಿಲ್ಲ, ಮನೆಯಲ್ಲೇ ಇರ್ತೇನೆ ಅಂತ ಬೇಕಷ್ಟು ಸರಿ ಅಂದಿದ್ದೆ. ಅಕ್ಕ ಪಕ್ಕದ ಮನೆಗಳಲ್ಲಿ ವಿಶೇಷವಿದ್ದಾಗ, ಮನೆಗೆ ಬಂದು ಕರೆದು ಹೋದರು ಸಹ ಯಾರು ಹೋಗ್ತಾರೆ ಅಂತ ಬಹಳಷ್ಟು ಸಲ ಮನೆಯಲ್ಲೇ ಉಳಿದಿದ್ದೆ. ಈಗ ಅವರೆಲ್ಲರ ನೆನಪು ಕಣ್ಣ ಮುಂದೆ ಬಂತು. ಉುರಲ್ಲಿ ಇದ್ದಾಗ, ಕರೆದಾಗ ಹೋಗಿಲ್ಲ. ಈಗ ಹೋಗಬಹುದಿತ್ತು ಆದರೆ ಯಾರು ಕರೆಯುತ್ತಿಲ್ಲ … ಇವೇ ಅಲ್ಲವೇ ಜೀವನದ ಚಿಕ್ಕ ಪುಟ್ಟ ಬದಲಾವಣೆಯ ಮುಖಗಳು?

ಆಮೇಲೆ ಬೇರೆ ದಾರಿಯಿಲ್ಲವಾದ್ದರಿಂದ ಒಂದು ಹೊತ್ತು ಪರಾಟ, ಇನ್ನೊಂದು ಹೊತ್ತು ಅರ್ಧ ಗಂಟೆ ಪ್ರಯಾಣ, ಇನ್ನೊಂದು ಹೊತ್ತು ಮನೆಯಲ್ಲಿ ಕಾರ್ನ್‌ಫ್ಲೇಕ್ಸ್ ತಿಂದು 2 ದಿನ ಕಳೆಯಿತು. ಮೂರನೆಯ ದಿನ ಮನೆಯಲ್ಲಿ ಅಡುಗೆ ಮಾಡಿದಾಗ, ಅದನ್ನು ಉುಟ ಮಾಡುವಾಗ ಏನೋ ಸಂಭ್ರಮ, ಯಾವುದೋ ಸಂತೋಷ…ಬಣ್ಣಿಸಲಾಗದು…….

Published in: on ಆಗಷ್ಟ್ 28, 2009 at 1:57 AM  Comments (6)  

ಒಳ್ಳೆಯತನ

ಒಂದು ಉೂರು, ಅಲ್ಲೊಂದು ಕುಡಿಯುವ ನೀರಿನ ಬಾವಿ, ಬಾವಿಯ ಬಳಿ ಒಂದು ಹುತ್ತ, ಹುತ್ತದಲ್ಲಿ ಒಂದು ಹಾವಿನ ವಾಸ. ಹಾವು ಆ ಉರಿನವರಿಗೆ ಯಾರಿಗೂ ಆ ಕಡೆಗೆ ಸುಳಿಯಾಲು ಬಿಡುತ್ತಿರಲಿಲ್ಲ. ಅಪ್ಪಿ ತಪ್ಪಿ ಬಂದರೆ ಕಚ್ಚುತ್ತಿತ್ತು. ಉೂರಿನವರು ಅದರ ಉಪದ್ರವ ತಡೆಯಲಾರದೇ ಬೇಸತ್ತಿದ್ದರು. ಅಷ್ಟರಲ್ಲಿ ಒಬ್ಬ ಸನ್ಯಾಸಿ ಆ ಉುರಿಗೆ ಆಗಮಿಸಿದ. ಆತನನ್ನು ನೋಡಲು ಹೋದ ಉೂರಿನ ಜನರು ಹಾವು ನೀಡುತ್ತಿರುವ ಕಷ್ಟವನ್ನು ಹೇಳಿಕೊಂಡರು. ಅದನ್ನು ಕೇಳಿದ ಸನ್ಯಾಸಿ, ಉರಿನ ಜನ ನಿಲ್ಲು ಎಂದರು ಕೇಳದೇ, ಬಾವಿಯ ಬಳಿ ಹೋದ. ಆತನನ್ನು ನೋಡಿದ ಹಾವು ಹೆದರಿಸುತ್ತಾ ಕಚ್ಚಲು ಬಂತು. ಸ್ವಲ್ಪವೂ ಧೃತಿಗೆಡದ ಸನ್ಯಾಸಿ ಆ ಹಾವನ್ನು ಎದುರಿಸಿ ನಿಂತು ಅದಕ್ಕೆ ” ಇಷ್ಟು ಜನಕ್ಕೆ ಕಷ್ಟ ನೀಡಿ ನೀನು ಏನು ಪಡೆಯುವೆ, ನೀನು ಕೆಟ್ಟದ್ದು ಮಾಡಿದರೆ ಅದರ ಫಲವು ಕೆಟ್ಟದ್ದೇ ಆಗುವುದು, ನೀನು ಇಲ್ಲಿ ಇರುವೆ ಎಂಬ ಕಾರಣಕ್ಕಾಗಿ ಜನರನ್ನು ಬಾವಿಯ ಕಡೆ ಬರದಂತೆ ತಡೆಯುವುದು ಸರಿಯಲ್ಲ. ಅವರ ಪಾಡಿಗೆ ಅವರು ಬರಲಿ, ನಿನ್ನ ಪಾಡಿಗೆ ನೀನು ಬದುಕು, ಕಚ್ಚಬೇಡ, ಹಿಂಸೆಯನ್ನು ಬಿಟ್ಟುಬಿಡು” ಎಂದು ಹೇಳಿದ. ಸನ್ಯಾಸಿಯ ಮಾತನ್ನು ಕೇಳಿದ ಹಾವು ಮನಃ ಪರಿವರ್ತನೆ ಹೊಂದಿ, ಆತ ನುಡಿದಂತೆ ಇರುವೆನೆಂದು ಮಾತು ಕೊಟ್ಟಿತು. ಸನ್ಯಾಸಿ ಬೇರೊಂದು ಉುರಿಗೆ ಹೊರಟು ಹೋದ.

ಇತ್ತ ಹಾವು ಸನ್ಯಾಸಿಗೆ ಕೊಟ್ಟ ಮಾತಿನಂತೆ ಹಿಂಸೆಯನ್ನು ಬಿಟ್ಟು ಬಿಟ್ಟಿತು. ಆಹಾರಕ್ಕಾಗಿಯೂ ಪ್ರಾಣಿಗಳ ಬೇಟೆಯಾಡುವುದನ್ನು ನಿಲ್ಲಿಸಿತು. ಅಲ್ಲಿ ಇಲ್ಲಿ ಬಿದ್ದಿರುವ, ಸಿಕ್ಕಿದ ಆಹಾರ ತಿನ್ನುತ್ತಿತ್ತು. ಜನರಿಗೆ ಕಚ್ಚುತ್ಟಿರಲಿಲ್ಲ, ಹೆದರಿಸುತ್ತಿರಲಿಲ್ಲ. ಸ್ವಲ್ಪ ದಿನ ಮೊದಲಿನ ಭಯದಲ್ಲೇ ಇದ್ದ ಜನ, ಸ್ವಲ್ಪ ದಿನಗಳ ನಂತರ ಏನೂ ಮಾಡದ ಹಾವಿಗೆ ಹೆದರುವುದನ್ನು ನಿಲ್ಲಿಸಿದರು. ಬಾವಿಗೆ ನೀರು ತರಲು ಹೋಗಲಾರಂಭಿಸಿದರು. ಮಕ್ಕಳು ಹಾವಿನ ಸಮೀಪದಲ್ಲೇ ಆಡಲಾರಂಭಿಸಿದರು. ದಷ್ಟ ಪುಷ್ಟವಾಗಿದ್ದ ಹಾವು, ಬೇಟೆಯಾಡುವುದನ್ನು ಬಿಟ್ಟು ಸರಿಯಾದ ಆಹಾರ ಸಿಗದೆ ಕೃಶವಾಯಿತು. ದಿನ ಕಳೆದಂತೆ ಮಕ್ಕಳು ಹಾವನ್ನು ಉಪಯೋಗಿಸಿಕೊಂಡು ಆಟವಾಡತೊಡಗಿದರು. ಹಾವು ದಾರಿಯಲ್ಲಿ ಮಲಗಿದ್ದರೆ ಎತ್ತಿ ಬದಿಗೆ ಬಿಸಾಡಿ ಮುಂದೆ ಹೋಗುತ್ತಿದ್ದರು ಜನ. ಹೀಗೆ ಒಂದು ದಿನ ಆ ಬಾವಿಯ ಹಗ್ಗ ತುಂಡಾಯಿತು. ನೀರು ಎಳೆಯಲು ಹಗ್ಗ ಗಿಡ್ದವಾದ ಕಾರಣ ಬದಿಯಲ್ಲೇ ಮಲಗಿದ್ದ ಹಾವನ್ನು ಹಗ್ಗದ ಜೊತೆ ಗಂಟು ಹಾಕಿ ನೀರೆಳೆಯಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ಬೇರೆ ಉುರಿಗೆ ಹೋದ ಸನ್ಯಾಸಿ ಮರಳಿ ಆ ಉುರಿಗೆ ಬಂದು, ಹಾವನ್ನು ನೋಡಲು ಬಾವಿಯ ಸಮೀಪ ಹೋದ. ಹಾವಿನ ಸ್ಥಿತಿ ನೋಡಿ ಆತನಿಗೆ ಪಸ್ಚಾತ್ತಾಪವಾಯಿತು. ಜನರಿಂದ ಹಾವನ್ನು ಬಿಡಿಸಿ, ಇದೇನು ನಿನ್ನ ಪರಿಸ್ಥಿತಿ ಎಂದು ಕೇಳಿದ. ಹಾವು ಹೇಳಿತು ” ತಾವು ನನಗೆ ಹಿಂಸೆ ಮಾಡಬೇಡ ಎಂದಿರಿ, ನಾನು ಬೇಟೆಯಾಡುವುದನ್ನು ನಿಲ್ಲಿಸಿದೆ. ಆಹಾರ ಸರಿಯಾಗಿ ದೊರಕಲಿಲ್ಲ. ನಾನು ಏನೂ ಮಾಡದ ಕಾರಣ ಜನರಲ್ಲಿ ನನ್ನ ಮೇಲಿನ ಭಯ ಹೊರಟು ಹೋಯಿತು. ಅವರು ನನ್ನನ್ನು ಹೀಗೆ ಹಿಂಸಿಸುತ್ತಿದ್ದಾರೆ ಎಂದಿತು. ಅದನ್ನು ಕೇಳಿದ ಸನ್ಯಾಸಿ ” ನಾನು ನಿನಗೆ ಕಚ್ಚಬೇಡ ಎಂದೆನೆ ಹೊರತು ಬುಸ್ ಎನ್ನಬೇಡ ಎಂದೇನಾ? ನಿನ್ನ ರಕ್ಷಣೆಗಾಗಿ ನಿನಗೆ ಅವಶ್ಯಕವಾಗಿ ಬೇಕಾಗುವ ಆಹಾರವನ್ನು ತಿನ್ನ ಬೇಡ ಎಂದೇನಾ? ಕಚ್ಚಬೇಡ ಎಂದೆ ಇದರರ್ಥ ಹೆದರಿಸಬೇಡ ಎಂದಲ್ಲ. ಒಳ್ಳೆಯವನಾಗು ಆದರೆ ಅತಿಯಾಗಿ ಒಳ್ಳೆಯವನಾಗಬೇಡ. ಜಗತ್ತಿನಲ್ಲಿ ಬದುಕುವುದು ಅಸಾಧ್ಯವಾಗುತ್ತದೆ ” ಎಂದ. ಹಾವು ಆತನ ಮಾತಿನ ಅರ್ಥ ತಿಳಿದು ಅದರಂತೆಯೇ ತನ್ನ ಜೀವನ ಸಾಗಿಸಿತು.

ಈ ಕಥೆಯ ಸಾರಾಂಶ ಏನೆಂದರೆ ಒಳ್ಳೆಯತನ ಬೇಕು ಆದರೆ ಅತಿಯಾದ ಒಳ್ಳೆಯತನ ಬೇಡ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಈ ಮಾತು ಅಕ್ಷರಶಹ ನಿಜ ಎಂದು ಅನ್ನಿಸುತ್ತದೆ. ಹಿಂದೆ ತ್ರೇತಾಯುಗದ ರಾಮನ ಕಾಲದಲ್ಲಿ ಎಷ್ಟು ಒಳ್ಳೆಯತನ ಇದ್ದರು ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ಎಷ್ಟು ಬೇಕೋ ಅಷ್ಟು ಒಳ್ಳೆಯತನ ಇದ್ದರೆ ಸಾಕು. ನಾವು ಅತಿಯಾಗಿ ಒಳ್ಳೆಯವರಾಗಿದ್ದರೆ ನಮ್ಮ ಸುತ್ತಲಿನವರು ಒಳ್ಳೆಯವರಿರುತ್ತಾರೆ ಎಂದೇನಿಲ್ಲವಲ್ಲ. ನಾವು ಬಹಳ ಒಳ್ಳೆಯವರಾಗಿದ್ದರೆ ಅದರಿಂದ ತಮ್ಮ ಉಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಇದರಿಂದ ನಮ್ಮ ಜೀವನ ನಡೆಸುವುದು ದುಸ್ತರವಾಗುತ್ತದೆ. ಅತಿಯಾದ ಒಳ್ಳೆಯ ಗುಣ ಹೊಂದಿ ಇತರರಿಗೆ ಒಳ್ಳೆಯದನ್ನು ಮಾಡುತ್ತಲೇ ಜೀವನ ಸಾಗಿಸುತ್ತೇನೆ ಎನ್ನುವವರು ಸನ್ಯಾಸಿಯಾಗಿ ಜೀವನ ಸಾಗಿಸುವುದೇ ಸರಿ ಎನ್ನುವಂತಾಗಿಬಿಡುತ್ತದೆ.

ಇವಳ ಹಿಂದಿನ ಬರಹದಲ್ಲಷ್ಟೇ ಹೇಳಿದ್ದಳು ಇತರರಿಗೆ ಸಹಾಯ ಮಾಡಿ ಎಂದು, ಇಲ್ಲಿ ಹೀಗೆ ಹೇಳುತ್ತಿದ್ದಾಳೆ ಅಂತ ಗೊಂದಲಗೊಳ್ಳಬೇಡಿ. ನಾನಲ್ಲಿ ಹೇಳಿದ್ದು ನಿಮ್ಮ ಕೈಲಿರುವ ಹಣದಲ್ಲಿ ಸ್ವಲ್ಪ ಸಹಾಯ ಮಾಡಿ ಎಂದು. ಕೈಲಿರುವ ಎಲ್ಲ ಹಣವನ್ನು ನೀಡಿ ಎಂದು ಅಲ್ಲ. ಅದರರ್ಥ ಒಳ್ಳೆಯತನ ಬೇಕು (ಅತಿಯಾದ ಒಳ್ಳೆಯತನ ಬೇಡ) ಎಂದು. ಕಚ್ಚುವ ಹಾವಾಗಬೇಡಿ, ಅದರಂತೆಯೇ ಅತ್ಯಂತ ಸಾತ್ವಿಕವಾಗಿ ಕಷ್ಟ ಪಡುವ ಹಾವು ಆಗಬೇಡಿ. ಬುಸ್ ಎನ್ನುವ ಹಾವಾಗಿ. ಇಂದಿನ ಜಗತ್ತಿನಲ್ಲಿ ಹಾಗೆ ಬದುಕುವುದೇ ಸರಿ. ನಮ್ಮ ಅತಿಯಾದ ಒಳ್ಳೆಯತನ ಉಪಯೋಗಿಸಿಕೊಂಡು, ಜೊತೆಗೆ ಮೇಲಿಂದ ಒಂದು ಕಲ್ಲು ಎಂಬಂತೆ ನಮ್ಮನ್ನು ಕೆಳಗೆ ದೂಡುವ ಜನರಿಗೇನು ಕೊರತೆಯಿಲ್ಲ. ನಮ್ಮ ಒಳ್ಳೆಯತನದ ಭುಜವನ್ನೇ ಮೆಟ್ಟಿಲಾಗಿಸಿಕೊಂಡು ಮೇಲೆ ಹತ್ತಿದಮೇಲೆ ನಮ್ಮನ್ನು ಒದ್ದು ಹೋಗುವವರು ಇದ್ದಾರೆ. ನಾವು ಮಾತ್ರ ಇದ್ದಲ್ಲೇ ಇರುತ್ತೇವೆ. ಕಾರಣ ನಮ್ಮ ಅತಿಯಾದ ಒಳ್ಳೆಯತನ. ಆದ್ದರಿಂದ ಬದುಕಲು “ಕೆಟ್ತತನ ಬೇಡವೇ ಬೇಡ, ಒಳ್ಳೆಯತನ ಬೇಕು, ಅತಿಯಾದ ಒಳ್ಳೆಯತನ ಬೇಡ”
“Don’t ever be bad, be good, don’t be too good”

Published in: on ಜೂನ್ 1, 2009 at 2:49 ಅಪರಾಹ್ನ  Comments (2)