ಅಜ್ಜಿಯೊಂದಿಗಿನ ಆ ಮುಸ್ಸಂಜೆ….

ದಿನಾಲೂ ಮುಸ್ಸಂಜೆ ಹೊತ್ತಲ್ಲಿ ಕುಳಿತು ಸತ್ಯವಾನ ಸಾವಿತ್ರಿ ಹಾಡು, ಸುಧಾಮ ಚರಿತ್ರೆ ಹಾಗೂ ಕೆಲವು ಶ್ಲೋಕಗಳನ್ನು ತಪ್ಪದೇ ಹೇಳುತ್ತಿದ್ದ ಅಜ್ಜಿ ಇಂದು ಯಾಕೊ ಬರೇ ಶ್ಲೋಕ, ಸುಧಾಮ ಚರಿತ್ರೆ ಹೇಳಿ ನನಗೆ ಪ್ರಿಯವಾದ ಸತ್ಯವಾನ ಸಾವಿತ್ರಿ ಹಾಡು ಹೇಳದೇ ಸುಮ್ಮನೆ ಕುಳಿತಿದ್ದಳು. ಆದರೆ ದಿನಾ ಆಕೆಯ ಪಕ್ಕ ಕುಳಿತು ಕೇಳುತ್ತಿದ್ದ ನಾನು ಸುಮ್ಮನೆ ಕೂರಲಾರದೆ

“ಅಜ್ಜಿ ಸಾವಿತ್ರಿ ಹಾಡು ಯಾಕೆ ಹೇಳಿಲ್ಲ ಹೇಳಜ್ಜಿ” ………ಅಂತ ರಾಗ ತೆಗೆದೆ.

“ಇಲ್ಲಾ ಮಗಳೆ ಇವತ್ತು ಸಾಕು ನಾಳೆ ಹೇಳ್ತೀನಿ” ಅಂದ ಅಜ್ಜಿಯ ಮುಖ ಯಾಕೋ ಮಂಕಾಗಿರುವಂತೆ ಭಾಸವಾಯಿತು. ಅಜ್ಜಿ ಏನೋ ಚಿಂತೆಯಲ್ಲಿದ್ದು ಅದನ್ನು ನನ್ನಿಂದ ಮರೆಮಾಚುತ್ತಿದ್ದಂತೆ ಮನಸ್ಸಿಗೆ ಅನ್ನಿಸಿತು.

ಅಜ್ಜಿ ಏನಾಯ್ತಜ್ಜಿ? ಹುಶಾರಿಲ್ವಾ? ಯಾರದ್ರು ಏನಾದ್ರೂ ಅಂದ್ರಾ? ಯಾಕಜ್ಜಿ ಒಂಥರಾ ಇದ್ದೀಯಾ? ನನ್ನ ಅನುಮಾನ ಪರಿಹರಿಸಿಕೊಳ್ಳಲು ನಾಲ್ಕಾರು ಪ್ರಶ್ನೆಗಳನ್ನು ಒಟ್ಟಿಗೆ ಅಜ್ಜಿಯತ್ತ ಎಸೆದೆ.

“ಇಲ್ಲ ಪುಟ್ಟಾ ನಾನು ಹುಶಾರಾಗೆ ಇದೀನಿ, ಯಾರೂ ಏನೂ ಅಂದಿಲ್ಲ” …..ಮತ್ತೆ ಅಜ್ಜಿಯಿಂದ ತಪ್ಪಿಸಿಕೊಳ್ಳೊ ಉತ್ತರ.

ಏನೊ ಆಗಿದ್ದಂತೂ ನಿಜ, ಅಜ್ಜಿ ದಿನದ ಹಾಗಿಲ್ಲ ಅಂತ ಯೋಚನೆ ಮಾಡ್ತಾ ಇರುವಾಗ ಇಂದು ಅಜ್ಜನ ತಿಥಿ ಅಂತ ನೆನಪಿಗೆ ಬಂತು.
ಅಜ್ಜನ ಜ್ನಾಪಕ ಬಂತಾ ಅಜ್ಜಿ? ನೀ ಅಜ್ಜನ್ನ ಮಿಸ್ ಮಾಡ್ಕೋತಿದೀಯಾ? ಅದಕ್ಕೆ ಬೇಜಾರಾ? ನನ್ನ ಪ್ರಶ್ನೆ……

ಒಂದು ನಿಮಿಷ ಮೌನದಲ್ಲಿದ್ದ ಅಜ್ಜಿ ನಿಧಾನವಾಗಿ “ಹೂಂ ಜ್ನಾಪಕ ಬಂತು ಪುಟ್ಟಾ” ಅಂತ ಉತ್ತರಿಸಿದಳು

ಅಜ್ಜ ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ರಾ ಅಜ್ಜಿ?
ಈ ಪ್ರಶ್ನೆ ಅಜ್ಜಿಯನ್ನು ತುಂಬಾ ಇಕ್ಕಟ್ಟಿಗೆ ಸಿಲುಕಿಸಿದಂತೆ ತೋರಿತು, ಅಜ್ಜಿ ಏನು ಉತ್ತರಿಸಲೆಂದು ಗೊಂದಲದಲ್ಲಿದ್ದಂತೆ ಅನ್ನಿಸಿತು….

“ಈ ನಿಜವಾದ ಪ್ರೀತಿ ಪ್ರೇಮ ಯಾವುದೂ ನನಗೆ ತಿಳೀಲೇ ಇಲ್ಲ ಮಗಳೆ.”….

ಯಾಕಜ್ಜಿ? ಅಜ್ಜ ನಿನ್ನನ್ನ ಪ್ರೀತಿಸ್ತಾ ಇರ್ಲಿಲ್ವಾ? ನೀನು ಅಜ್ಜನ್ನ ಪ್ರೀತಿಸ್ತಾ ಇರ್ಲಿಲ್ವಾ?

“ಆ ಕಾಲ ಇಂದಿನಂತಲ್ಲ ಪುಟ್ಟಾ, ಪ್ರೀತಿ ಪ್ರೇಮ ಮಾಡಿ ನಮ್ಮ ಮದುವೆ ಆಗಿರ್ಲಿಲ್ಲ. ಮದುವೆ ಆಗುವಾಗ ನನಗಿನ್ನೂ ಹನ್ನೊಂದು ವರ್ಷ. ನಿಮ್ಮಜ್ಜನಿಗೆ ನಲವತ್ತೆರಡು. ನಮ್ಮ ಮನೆಯಲ್ಲಿ ತುಂಬಾ ಬಡತನ, ಸಾಲದ್ದಕ್ಕ ಮೂರು ಜನ ಹೆಣ್ಣು ಮಕ್ಕಳು ಬೇರೆ. ಹಾಗೂ ಹೀಗೂ ಸಂಸಾರ ಸಾಗಿಸುತ್ತಿದ್ದ ನಮ್ಮಪ್ಪನಿಗೆ ಮದುವೆ ಮಾಡಿ ಮುಗಿಸುವುದೆ ಕಷ್ಟವಾಗಿತ್ತು.
ನಿಮ್ಮಜ್ಜನಿಗೋ ಆಗಲೇ ಎರಡು ಸಾರಿ ಮದುವೆಯಾಗಿತ್ತು. ಹೆರಿಗೆಯ ಸಮಯದಲ್ಲಿ ಮೊದಲನೆಯ ಪತ್ನಿ ತೀರಿಕೊಂಡರೆ, ಯಾವುದೋ ರೋಗದಿಂದ ಮದುವೆಯಾದ ಕೆಲ ವರ್ಷಗಳಲ್ಲಿ ಎರಡನೆಯ ಪತ್ನಿ ತೀರಿಕೊಂಡಿದ್ದಳು. ಮನೆಯನ್ನು ನೋಡಿಕೊಳ್ಳೊದಕ್ಕೆ ಹೆಣ್ಣೊಂದು ಬೇಕಿತ್ತು, ನಿಮ್ಮ ತಾತನ ತಾಯಿ ತನಗೆ ತಿಳಿದ ಕೆಲವು ಕಡೆ ಹುಡುಗಿ ಹುಡುಕಲು ತಿಳಿಸಿದ್ದರು. ನನ್ನ ತಂದೆಯ ಕಷ್ಟ ತಿಳಿದ ಒಬ್ಬರು ಮನೆಯ ಹಿರಿ ಮಗಳಾದ ನನಗೆ ಈ ಸಂಬಂಧದ ಪ್ರಸ್ತಾಪ ನೀಡಿದ್ದರು. ಮದುವೆಯ ಖರ್ಚೆಲ್ಲ ಗಂಡಿನ ಕಡೆಯದು, ಊಟಕ್ಕೇನೂ ಕೊರತೆಯಿಲ್ಲ, ತಕ್ಕ ಮಟ್ಟಿಗೆ ಅನುಕೂಲ ಉಳ್ಳವರು ಎಂಬ ಕಾರಣಕ್ಕೆ ನಮ್ಮ ತಂದೆ ತಾಯಿನೂ ಈ ಮದುವೆಗೆ ಒಪ್ಪಿದ್ದರು”

ನೀನೂ ಒಪ್ಕೊಂಬಿಟ್ಯಾ ಅಜ್ಜಿ? ಬೇಡಾ ಅನ್ನಲಿಲ್ವಾ? ಅಜ್ಜಿ ಮಾತು ಮುಗಿಸುತ್ತಲೇ ನನ್ನ ಪ್ರಶ್ನೆ ಕಾದಿತ್ತು..

“ನನ್ನನ್ನು ಯಾರು ಕೇಳೊರು ಮಗಳೆ, ನಾನು ಅತ್ತೆ, ಕರೆದೆ, ಹಠ ಹಿಡಿದೆ ಯಾವುದಕ್ಕೂ ಯಾರೂ ಜಗ್ಗಲಿಲ್ಲ.ಈ ಮದುವೆಗೆ ಒಪ್ಕೋ ಸುಮ್ನೆ ಮುಂದೆ ಎಲ್ಲಾ ಒಳ್ಳೇದಾಗತ್ತೆ ಅಂತ ಅಮ್ಮನ ತಿಳುವಳಿಕೆಯ ಮಾತು. ಮನೆಯ ಪರಿಸ್ಥಿತಿಯ ಅರಿವಿದ್ದ ನಾನು ಅಳುತ್ತಲೇ ನಿಮ್ಮಜ್ಜನ ಮೂರನೇ ಮಡದಿಯಾಗಿ ಹಸೆಮಣೆ ಏರಬೇಕಾಯ್ತು”
“ಛೆ ಪಾಪ ..ನೀನು ಅಷ್ಟು ವಯಸ್ಸಾದ ಅಜ್ಜನ ಮೂರನೆ ಹೆಂಡತಿ ಆಗೇ ಬಿಟ್ಯಲ್ಲಾ ಅಜ್ಜಿ”…

“ಹೂಂ ಪುಟ್ಟಾ, ಈ ಮನೆಗೆ ಬಂದೆ, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಹೋದೆ, ಪ್ರೀತಿ ಪ್ರೇಮ ಅರಿಯುವ ಮುನ್ನವೇ ೬ ಮಕ್ಕಳೂ ಆದವು. ಈ ರೀತಿ ೧೫ ವರ್ಷ ನಿಮ್ಮಜ್ಜನೊಂದಿಗೆ ಕಳೆದಿದ್ದೆ. ಅಷ್ಟರಲ್ಲಿ ಯಾವುದೋ ಖಾಯಿಲೆ ಅವರನ್ನು ತಿನ್ನೋಕೆ ಶುರು ಮಾಡ್ತು. ಯಾವ ಔಷಧ ಮದ್ದಿಗೂ ಗುಣವಾಗದೇ ವರ್ಷದಲ್ಲೇ ನಿಮ್ಮಜ್ಜ ತೀರಿಕೊಂಡರು”

ಅಯ್ಯೊ ಅಷ್ಟು ಬೇಗಾನಾ? ನೀನಿನ್ನೂ ಚಿಕ್ಕೋಳಲ್ವಾ ಅಜ್ಜಿ? ಜೊತೆಗೆ ಅಷ್ಟೊಂದು ಮಕ್ಕಳು ಬೇರೆ…ಏನು ಮಾಡಿದೆ ಅಜ್ಜಿ?

“ಮಾಡೋದೇನು ಪುಟ್ಟಾ, ಕರ್ತವ್ಯ ಇತ್ತಲ್ಲ..ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿದೆ, ಗದ್ದೆ ತೋಟದಲ್ಲಿ ದುಡಿದೆ, ಬಂದ ಫಸಲಿನಲ್ಲಿ ಊಟ ಖರ್ಚು ನಿಭಾಯಿಸಿದೆ. ಹೇಗೋ ಆ ದಿನಗಳು ಕಳೆದವು. ಎಲ್ಲಾ ಮಕ್ಕಳು ಬೆಳೆದವು, ವಿದ್ಯೆ ಕಲಿತು, ತಮ್ಮ ಕಾಲಮೇಲೆ ನಿಂತು, ಮದುವೆಯಾಗಿ ಈಗ ನೀವೆಲ್ಲ ಹುಟ್ಟಿದ್ದೀರಾ”….

ಹಾಗಾದ್ರೆ ನಿಂಗೆ ಅಜ್ಜನಿಗೆ ಪ್ರೀತಿ ಮಾಡೋಕೆ ಆಗ್ಲೇ ಇಲ್ವಾ ಅಜ್ಜಿ?

“ಎಲ್ಲಿ ಪ್ರೀತಿ ಮಗಳೆ? ಒಲ್ಲದ ಗಂಡಿನೊಂದಿಗೆ ಮದುವೆ, ಎಲ್ಲ ಅರಿಯುವ ಮುನ್ನವೆ ಮಕ್ಕಳು, ಸಂಸಾರ. ತಿಳುವಳಿಕೆ ಬರುವ ವಯಸ್ಸಿನಲ್ಲಿ ಪ್ರೀತಿಸೊ ಮನುಷ್ಯನೇ ಇಲ್ಲವಲ್ಲ…ಆಗ ಕರ್ತವ್ಯವನ್ನೇ ಪ್ರೀತಿಸಿದೆ ಅಷ್ಟೆ”……

ಆಗ ನಾನು ಯೋಚನೆಗೆ ಬಿದ್ದೆ. ಅಜ್ಜಿಗೆ ಈಗ ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಅಳಿಯಂದಿರು ಅಂತಾ ಪ್ರೀತಿಸೊ ದೊಡ್ಡ ಪರಿವಾರವೇ ಇದೆ, ಆದ್ರೆ ಪತಿ, ಪತ್ನಿಯ ನಡುವಿನ ಆ ಪ್ರೀತಿ ಯಾವತ್ತೂ ಸಿಕ್ಕೇ ಇಲ್ವಾ? ಅವಳು ಕೂಡಾ ಅದನ್ನು ಕೊಡೋಕೆ ಅವಕಾಶವೇ ಆಗಿಲ್ವಾ? ಆಗಿನ ಅವಳ ಜೀವನವನ್ನು, ಈಗಿನ ನಮ್ಮ ಜೀವನದ ಜೊತೆ ತುಲನೆ ಮಾಡಿ ಅಜ್ಜಿಯ ಮುಖವನ್ನೇ ಒಮ್ಮೆ ದಿಟ್ಟಿಸಿ ನೋಡಿದೆ.
ಪ್ರೀತಿ – ಪ್ರೇಮ ಹೆಪ್ಪುಗಟ್ಟಿ ನಿಂತಂತೆ ತೋರಿತು ಮುಸ್ಸಂಜೆಯ ಮಬ್ಬು ಬೆಳಕಲ್ಲಿ…………………..

( ನನ್ನಜ್ಜಿಯ ನೈಜ ಕಥೆಯಲ್ಲ )

Published in: on ಜೂನ್ 17, 2010 at 2:31 AM  Comments (7)  

ಜಾರದಿರು ಹನಿಯಾಗಿ ಮುಗ್ದ ಸವಿ ನಗುವೆ….

ಜಾರದಿರು ಕಂಬನಿಯೆ
ನಕ್ಷತ್ರದಂಚಿಂದ
ತುಳುಕದಿರು ಉಕ್ಕಿದಾ
ಕೊಳವಾಗಿ ನೀ

ಕೋಟಿ ಮೀರಿದ ಬೆಲೆಯ
ಕಿರುನಗೆಯ ಮುಚ್ಚಿಟ್ಟು
ಬಾರದಿರು ಓಡೋಡಿ
ಕಣ್ಣಂಚಲಿ

ತಂಗಾಳಿ ಕಾದಿಹುದು
ಮುಂಗುರುಳ ತೀಡಲು
ಚಂದಿರನು ತಪಿಸಿದನು
ಕೇಕೆಗಾಗಿ

ಹಾಡುತಿಹುದು ಜೋಗುಳ
ಪಶು ಪಕ್ಷಿಸಂಕುಲ
ನಿನ್ನೊಂದು ನಸುನಗೆಯ
ಕುಡಿನೋಟಕೆ

ಜಾರಿ ಬಿದ್ದು ಚಿಪ್ಪಿನೊಳು
ಮುತ್ತಾಗದೀ ಹನಿ
ಮುಚ್ಚಿಟ್ಟೊಡೆ ಅರಳುವುದು ಹೂವಾಗಿ
ತುಟಿಯಂಚಲಿ

ಹೂವಿಂದ ಹೂ ಬಿರಿದು
ನಗೆಯಿಂದ ನಗೆ ಹರಡಿ
ಪಸರಿಸಲಿ ಎಲ್ಲೆಡೆ
ಸಂತೋಷದಾ ಹೊನಲಾಗಿ

Published in: on ಜೂನ್ 9, 2010 at 2:42 AM  Comments (4)  

ತುಮುಲ

ಅದ್ಯಾವ ವಸ್ತುವಿನಿಂದ ಮಾದಿದ್ದಾನೊ ದೇವ್ರು ಈ ಮನಸ್ಸನ್ನ, ಎಷ್ಟು ಮೄದು, ಎಷ್ಟು ಸೂಕ್ಶ್ಮ ಅಂತೀರ, ಒಂದು ವಿಷಯ ಇದರ ಒಳಗೆ ಹೊಕ್ಕಿದ್ರೆ ಸಾಕು, ಹುಳದ ಹಾಗೆ ಕೊರೆಯುತ್ತಲೇ ಹೊಗುತ್ತೆ. ಮೈಗೆ ಆದ ಗಾಯ ಮಾಸಿದರೂ ಮನಸ್ಸಿಗಾದ ಗಾಯ ಮಾಸದು. ಸಂತೋಷದ ಕ್ಶಣಗಳು ನೆನಪಿನಲ್ಲಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಸಮಯ ಕಷ್ಟದ, ದುಃಖದ ಕ್ಷಣಗಳು ನೆನಪಿನಲ್ಲಿರುತ್ತವೆ. ಇದು ಎಲ್ಲರಲ್ಲಿರುವ ಸಾಮಾನ್ಯ ಗುಣವಾದರೂ ಕೆಲವರಲ್ಲಿ ಇಂತಹ ಕಹಿ ಘಟನೆಗಳನ್ನು ಮರೆಯುವ ಅಥವಾ ತೊರೆಯುವ ಗುಣ ಹೆಚ್ಚಿದ್ದರೆ ಇನ್ನು ಕೆಲವರಲ್ಲಿ ಅದೇ ಅದೇ ವಿಷಯಗಳು ಮನಸ್ಸಿನಲ್ಲಿ ಮನೆ ಮಾಡಿ ಕುಳಿತುಕೊಂಡುಬಿಡುತ್ತವೆ. ಇಂತಹ ಜನರಲ್ಲಿ ಒಳ್ಳೆಯ ಉದಾಹರಣೆ ಎಂದರೆ ನಾನು. ನಡೆದ ಕಹಿ ಘಟನೆಗಳು, ಕಹಿ ಉಂಟುಮಾಡಿದ ಜನರು, ಅವರ ದುಃಖಕ್ಕೆ, ಕಷ್ಟಕ್ಕೆ, ಸಮಯಕ್ಕೆ ಮಾತ್ರ ನಮ್ಮಿಂದ ಉಪಯೋಗ ಪಡೆದುನಮ್ಮ ಕಷ್ಟಕಾಲದಲ್ಲಿ ಮುಖ ತಿರುಗಿಸುವ ಬಂಧುಗಳಿ, ಮಿತ್ರರು, ಕೆಲವು ಕಟು ಮಾತುಗಳು, ಅನುಭವಿಸಿದ ಕೆಲವು ಕಷ್ಟದ ದಿನಗಳು ಇವುಗಳನ್ನು ಎಷ್ಟು ಮರೆಯಬೇಕೆಂದು ಅಂದುಕೊಂಡರೂ ಮರಳಿ ಮರಳಿ ಬಂದು ಕಾಡುತ್ತವೆ. ಮುಂದೆಯೂ ಇಂತಹ ಘಟನೆಗಳು ನಡೆಯಬಹುದು ಎಂದು ಮನಸ್ಸು ಹೆದರುತ್ತದೆ, ಕಳವಳಗೊಳ್ಳುತ್ತದೆ. ರಾತ್ರಿ ಮಲಗಿದಾಗ, ಉುಟ ಮಾಡುತ್ತಿರುವಾಗ, ಪ್ರಯಾಣಿಸುತ್ತಿರುವಾಗ,ಕುಳಿತಾಗ, ನಿಂತಾಗ ಯಾವಾಗ ಬೇಕಾದರೂ ಕರೆಯದೇ ಬರುವ ಅತಿಥಿಯಂತೆ ಒಕ್ಕರಿಸಿಬಿಡುತ್ತದೆ.

ಅದೇ ನನ್ನ ಪತಿ ಇದಕ್ಕೆ ವ್ಯತಿರಿಕ್ತ. ಆದದ್ದಾಯಿತು ಮರೆತುಬಿಡಬೇಕು ಎನ್ನುವ ವ್ಯಕ್ತಿ. ನಮ್ಮ ಕಷ್ಟದ ಸಮಯಕ್ಕಾಗದೆ ಮುಖ ತಿರುಗಿಸಿದವರಿಗೂ ಸಹ ಅವರ ಕಷ್ಟಕಾಗುವ ಗುಣ. ಕಹಿ ಮಾತುಗಳು, ಘಟನೆಗಳನ್ನು ಹಿಂದೆ ಬಿಟ್ಟು ಮುಂದೆ ನಡೆಯಬೇಕು ಎನ್ನುವ ಸ್ವಭಾವ. ಇದೆ ವಿಷಯಕ್ಕೆ ನಮ್ಮಿಬ್ಬರಲ್ಲಿ ಎಷ್ಟೋ ಬಾರಿ ವಾದ ವಿವಾದ, ವಿಚಾರ ವಿಮರ್ಶೆಗಳಾಗಿವೆ. ಆದರೂ ಇಂದಿನವರೆಗೂ ಅದಕ್ಕೊಂದು ಪೂರ್ಣವಿರಾಮ ನೀಡಲಾಗಲಿಲ್ಲ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು, ನಮಗೆ ನೋವು ನೀಡಿದವರಿಗೂ ಪ್ರೀತಿ ತೋರಿಸು, ಅವರ ಕಷ್ಟಕಾಗು ಎನ್ನುವುದು ನನ್ನವರ ತತ್ವವಾದರೆ, ನನ್ನ ತತ್ವ ಇದಕ್ಕೆ ಸ್ವಲ್ಪ ವಿರುಧ್ಧ. ಎಲ್ಲ ಕಹಿಯನ್ನು ಮರೆತು ನೆಮ್ಮದಿಯಿಂದ ಇರಬೇಕು, ಹಿಂದೆ ನಡೆದದ್ದನ್ನು ನೆನಪಿಸಿಕೊಂಡು ವ್ಯಥೆ ಪಡಬಾರದು ಎಂಬ ಮಾತುಗಳನ್ನು ಒಪ್ಪುತ್ತೇನೆ ಮತ್ತು ನಾನು ಕೂಡ ಪಾಲಿಸಲು ಯತ್ನಿಸುತ್ತೇನಾದರೂ, ನೀ ನನಗಿದ್ದಾರೆ ನಾ ನಿನಗೆ, ನಿನ್ನಿಂದ ನನಗೆ ನೋವುಂಟಾಗುವುದಿದ್ದರೆ ನಾನು ನಿನ್ನಿಂದ ದೂರವೇ ಉಳಿಯುತ್ತೇನೆ, ಪ್ರೀತಿ ಇರಲಿ, ಕಾಳಜಿ ಇರಲಿ, ಸಂಬಂಧವಿರಲಿ, ಸ್ನೇಹವಿರಲಿ ಎಲ್ಲವೂ ಎರಡು ಕಡೆಯಿಂದಲೂ ಇರಬೇಕು. ಒಂದೇ ಕಡೆಯಿಂದ ಕೊಡುವ ಒಂದು ಕೈ ಚಪ್ಪಾಳೆ ಆಗಬಾರದು ಎನ್ನುವುದು ನನ್ನ ಪಾಲಿಸಿ. ಸ್ನೇಹ, ಪ್ರೀತಿ, ಕರ್ತವ್ಯ ಎಲ್ಲವನ್ನು ನನ್ನ ಕಡೆಯಿಂದ ಸಾಧ್ಯವಾದಷ್ಟು ನೀಡುತ್ತೇನಾದರೂ ಎದುರಿನವರಿಂದಲೂ ಅದನ್ನೇ ಬಯಸುತ್ತೇನೆ. ಇದೆ ವಿಷಯಕ್ಕೆ ಎಷ್ಟೋ ಬಾರಿ ಮನ ನೊಂದಿದ್ದು ಇದೆ. ಈ ರೀತಿ ಬಯಸದೇ ತನ್ನ ಕೈಲಾದದ್ದನ್ನು ನೀಡುವ ನನ್ನವರು ಕೆಲವೊಮ್ಮೆ ನನ್ನ ಕಣ್ಣಿಗೆ ತ್ಯಾಗಿಯಂತೆ, ವಿರಾಗಿಯಂತೆ ಕಂಡಿದ್ದು ಇದೆ…ಇವೆಲ್ಲ ತುಮುಲ, ತಳಮಳಗಳ ಜೊತೆಗೆ ಆಗಾಗ ಸಂತೋಷದ ಕ್ಷಣಗಳು ಮಿಂಚಿನಂತೆ ಬಂದು, ನಕ್ಷತ್ರದಂತೆ ಮಿನುಗಿ ಹೋಗುತ್ತಿರುತ್ತವೆ. ಕೆಲವು ಸಂತೋಷದ ಕ್ಷಣಗಳಲ್ಲಿ ಈ ಸಮಯ ಹೀಗೆ ಇರಬಾರದೇ ಎನ್ನಿಸಿದರೆ, ದುಃಖದ ಸಂದರ್ಭದಲ್ಲಿ ಈ ಸಮಯ ಯಾವಾಗ ಕಳೆಯುವುದೋ ಎನ್ನಿಸಿಬಿಡುತ್ತದೆ, ಸುಖದಲ್ಲಿ ನನ್ನಷ್ಟು ಸುಖಿ ಬೆರಳೆಣಿಕೆಯಷ್ಟು ಎನ್ನಿಸಿದರೆ ಕಷ್ಟದಲ್ಲಿ ನನ್ನಷ್ಟು ಅಸುಖಿ ಪ್ರಪಂಚದಲ್ಲಿ ಯಾರೂ ಇಲ್ಲ ಎಂಬ ಭಾವನೆ. ಜೀವನವೆಂದರೆ ಇದೇ ಏನು? ಮನಸ್ಸೆಂದರೆ ಹೀಗೇ ಏನು? ಎಲ್ಲರಿಗೂ ಹೀಗೆ ಆಗುತ್ತಾ? ಆಗಬೇಕಾ? ಅನ್ನಿಸುತ್ತಾ? ಅನ್ನಿಸಬೇಕಾ? ಎಷ್ಟೊಂದು ಪ್ರಶ್ನೆಗಳು ಮನದಲ್ಲಿ….ಉತ್ತರ?

Published in: on ಏಪ್ರಿಲ್ 29, 2010 at 4:54 AM  Comments (5)  

ಮರು ಹುಟ್ಟು

ಬ್ಲಾಗ್ ಬರೀದೆ ಹತ್ರ ಹತ್ರ ಒಂದು ವರ್ಷ ಅಯ್ತು. ಮಧ್ಯದಲ್ಲಿ ಕೆಲವು ಖಾಸಗಿ ತಾಪತ್ರಯಗಳು ಮನಸ್ಸನ್ನು ಶಾಂತವಾಗಿರುವುದಕ್ಕೆ ಬಿಡ್ತಾ ಇರಲಿಲ್ಲ. ಈ ಮನಸ್ಸೆ ಹೀಗೆ ಕಣ್ರಿ, ಒಂದು ಸಾರಿ ಚಂಚಲತೆಯನ್ನು ಕಲಿತುಕೊಂಡು ಬಿಟ್ರೆ ಹುಚ್ಚು ಕುದುರೆಯ ಹಾಗೆ ಅಲೆಯುತ್ತಲೇ ಇರುತ್ತೆ. ನಾನು ಬರೀಬೇಕು ಅನ್ನೊ ಅಸೆ ಏನೊ ಇತ್ತು, ಜೊತೆಗೆ ನಿಮ್ಮ ಹತ್ರ ಹಂಚಿಕೊಳ್ಳೊ ವಿಷಯಾನೂ ಇತ್ತು, ಆದ್ರೆ ಮನಸ್ಸನ್ನು ಮಾತ್ರ ಒಂದು ಕಡೆ ನಿಲ್ಲಿಸಿ ಬರಹದತ್ತ ಗಮನ ಹರಿಸೋಕೆ ಆಗ್ತಾನೆ ಇರ್ಲಿಲ್ಲ. ಸ್ನೇಹಿತ, ಸ್ನೇಹಿತೆಯರೆಲ್ಲ ಯಾಕೆ ಬರೀತಾ ಇಲ್ಲ ಅಂತ ಕೇಳೋಕೆ ಶುರು ಮಾಡಿದ್ರು, ನನ್ನ ಪತಿ ಕೂಡ ಯಾಕೆ ನಿನ್ನ ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯ? ಬರಿ ಬರಿ ಅಂತ ಹೇಳ್ತಾನೆ ಇದ್ರು. ಅಂತೂ ಇವತ್ತು ಬರೀಲೇ ಬೇಕು ಅಂತ ಗಟ್ಟಿ ಮನಸ್ಸು ಮಾಡಿ ಕೂತುಬಿಟ್ಟಿದ್ದೀನಿ. ಮನಸ್ಸಿನಾಳದಲ್ಲಿ ಅವಿತಿಟ್ಟುಕೊಂಡಿದ್ದ ಎಷ್ಟೋ ವಿಷಯಗಳು ನನ್ನ ಬಗ್ಗೆ ಬರಿ, ನನ್ನ ಬಗ್ಗೆ ಬರಿ ಅಂತ ಪೈಪೋಟಿ ಮಾಡ್ತಾ ಇವೆ. ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಹೊಸ ಉತ್ಸಾಹದೊಂದಿಗೆ ಬ್ಲಾಗನ್ನು ಮರು ಪ್ರಾರಂಭ ಮಾಡ್ತಾ ಇದೀನಿ. ಮೊದಲಿನ ಹಾಗೆ ಬನ್ನಿ, ಓದಿ, ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ.

Published in: on ಏಪ್ರಿಲ್ 29, 2010 at 3:27 AM  Comments (1)  

ಗಜಮುಖ ಗಣಪಾ

ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು…

ಹಬ್ಬ ಬಂತು, ಹಬ್ಬ ಬಂತು ಅಂತ ಹಬ್ಬದ ತಯಾರಿ ಮಾಡಿ ಮುಗಿಸೋ ಹೊತ್ತಿಗೆ ಹಬ್ಬ ಮುಗಿದೆ ಹೋಯ್ತು ನೋಡಿ, ನೋಡ್ತಾ ನೋಡ್ತಾ ನಮ್ಮ ಗಣೇಶನ ಹಬ್ಬ ಮುಗಿದು 5 ದಿನ ಕಳೆದೆ ಹೋಯ್ತು. ನಮ್ಮ ಮನೆಯ ಹಬ್ಬದ ಸಮಾಚಾರವನ್ನು ಸ್ನೇಹಿತರಾದ ನಿಮ್ಮೆಲ್ಲರೊಂದಿಗೂ ಹಂಚಿಕೊಳ್ಳೋಣ, ತಮಗೆಲ್ಲರಿಗೂ ತಡವಾದರೂ ಪರವಾಗಿಲ್ಲ ಸಂದೇಶ ತಿಳಿಸೋಣ ಅಂತ ಬರೀತಾ ಇದೀನಿ. ನೀವೆಲ್ಲರೂ ಹಬ್ಬ ಚೆನ್ನಾಗೆ ಅಚರಿಸಿರ್ತೀರ. ನಾವು ಕೂಡ ಹಬ್ಬದ ಆನಂದ, ಮತ್ತು ಭಕ್ಷ್ಯ ಗಳನ್ನು ಸವಿಯೋದಕ್ಕೆ ಕೆಲವು ಸ್ನೇಹಿತರನ್ನು ಮನೆಗೆ ಕರೆದು, ಅವರೊಂದಿಗೆ ಜೊತೆಗೂಡಿ ಹಬ್ಬದ ಆಚರಣೆ ಮಾಡಿದ್ವಿ. ನಮ್ಮ ಮನೆಗೆ ಬಂದು ಹರಸಿ, ಸಂತಸವನ್ನು ನೀಡಿದ ವಿಘ್ನ ವಿನಾಶಕ ವಿನಾಯಕ, ತಮಗೆಲ್ಲರಿಗೂ ಕೂಡ ಒಳ್ಳೆಯದನ್ನು ಮಾಡಲಿ.

ಬನವಾಸಿಯ ಅರ್ಧ ಗಣಪತಿ
1

ಪ್ರಥಮಮ್ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್
ತ್ರತೀಯಂ ಕೃಷ್ಣಪಿಂಗಾಕ್ಷಂ ಗಜವಕ್ಟ್ರಮ್ ಚತುರ್ಥಕಮ್
ಲಂಬೋದರಮ್ ಪಂಚಾಮಮ್ ಚ ಶಷ್ಟಮ್ ವಿಕತಮೆವಚ
ಸಪ್ತಮಮ್ ವಿಘ್ನರಾಜೇಂದ್ರಮ್ ಧೂಮ್ರವರ್ಣಂ ತಥಾಶ್ಟಕಮ್
ನವಮಮ್ ಬಾಲಚಂದ್ರಮ್ ಚ ದಶಮಾಮ್ ತು ವಿನಾಯಕಮ್
ಏಕಾದಶಮ್ ಗಣಪತಿಮ್ ದ್ವಾದಶಮ್ ತು ಗಜಾನನಮ್
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಾಹ ಪಠೆನ್ನರಹ
ನ ಚ ವಿಘ್ನ ಭಯಂ ಹರಮ್ ತಸ್ಯ ಸಿದ್ಧಿ ಕರಮ್ ಪ್ರಭೊ

ನಮ್ಮ ಮನೆಯ ಗಣೇಶ ಚೌತಿ
Ganesh chaturthi

Published in: on ಆಗಷ್ಟ್ 28, 2009 at 2:30 AM  Comments (9)  

ಬದುಕಿನ ಮುಖಗಳು

ಬದುಕಿನ ಮುಖಗಳ ಪರಿಚಯವನ್ನು ಕೆಲವೊಮ್ಮೆ ನಮ್ಮ ಜೀವನದ ಸಣ್ಣ ಸಣ್ಣ ಘಟನೆಗಳು ಮಾಡಿ ಕೊಡುತ್ತವೆ. ಅಂಥದ್ದೇ ಒಂದು ಪುಟ್ಟ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..

ಮೊನ್ನೆ ಮೊನ್ನೆ ನಾವು ಮನೆ ಚೇಂಜ್ ಮಾಡಿದಾಗ ಶಿಫ್ಟಿಂಗ್ ಕಷ್ಟಕ್ಕಿಂತ ನಮಗೆ ಎದುರಾಗಿದ್ದು ಉುಟದ ಚಿಂತೆ. ಮನೆಯ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ, ಹೊಸ ಮನೆಗೆ ತಂದು ಬಿಚ್ಚಿ ಜೋಡಿಸುವ ತನಕ ನಾವು ಅಡುಗೆ ಮಾಡುವಂತಿಲ್ಲ. ಬೇಗ ಹೊಟೆಲ್ ಗೆ ಹೋಗಿ ಉುಟ ಮಾಡಿಕೊಂಡು ಬಂದುಬಿಡೋಣ ಅಂದ್ರೆ, ಮನೆಯಿಂದ ಅರ್ಧ ಗಂಟೆ ಪ್ರಯಾಣ ಮಾಡಿದ್ರೆ ಮಾತ್ರ ನಮ್ಮ ಸಸ್ಯಾಹಾರದ ಹೊಟೆಲ್ ಸಿಗುತ್ತೆ. ಹೋಗ್ಲಿ ಮನೆಗೆ ಪಾರ್ಸಲ್ ತರಿಸೋಣ ಅಂದ್ರೆ ಇಬ್ಬರಿಗೆ ತರಿಸುವ ಉುಟದ ಹಣಕ್ಕಿಂತ ಮನೆಗೆ ತಂದುಕೊಡುವ ಖರ್ಚೆ ಹೆಚ್ಚಾದಂತೆ ತೋರಿತು. ಮನೆಯ ಹತ್ತಿರ ಇರುವ food court ಎಂಬಲ್ಲಿ ಚೀನೀಯರ, ಮಲೈ ಜನರ ಮಾಂಸದ ಉುಟದ ಭಂಡಾರ. ಅಲ್ಲೇ ಇರುವ ಇನ್ನೊಂದು ಚಿಕ್ಕ ಇಂಡಿಯನ್ ಮುಸ್ಲಿಮ್ ಕ್ಯಾಂಟೀನ್ ನಲ್ಲಿ ಸಿಗುವುದು ಕೂಡ ಮಾಂಸದ ಉುಟವೇ…ಎಣ್ಣೆಯಲ್ಲಿ ಅದ್ದಿದನ್ತಹ ಪ್ಲೇನ್ ಪರಾಟ ಮತ್ತು ದಾಲ್ ಇದು ಮಾತ್ರ ಅಲ್ಲಿ ಸಿಗುವ ಮಾಂಸವಿಲ್ಲದ ಉುಟ.

ಮನೆ ಶಿಫ್ಟ್ ಮಾಡಿ ಜೋಡಿಸುವುದೋ ಅಥವಾ 3 ಹೊತ್ತು ಅರ್ಧ ಗಂಟೆ ಪ್ರಯಾಣ ಮಾಡಿ ಉುಟ ಮಾಡಿಕೊಂಡು ಮತ್ತೆ ಅರ್ಧ ಗಂಟೆ ಪ್ರಯಾಣ ಮಾಡಿ ಮನೆ ತಲುಪುವುದೋ ಅನ್ನುವ ಸಮಸ್ಯೆ. ಹೀಗೆ ಉುಟದ ಚಿಂತೆ ಮಾಡಿಕೊಂಡು ಕುಳಿತಾಗ ಅನೇಕ ಯೋಚನೆಗಳು, ನೆನಪುಗಳು ತಲೆಯಲ್ಲಿ ಸುಳಿದಾಡಿದವು.

ನಾವು ನಮ್ಮ ಉುರಲ್ಲಿದ್ದರೆ ಯಾರಾದರೂ ನೆಂಟರು, ಇಷ್ಟರು, ಸ್ನೇಹಿತರು ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೀತಾ ಇದ್ರು, ಇಲ್ಲ ಅಂದರು ಅಲ್ಲಿ ಸಸ್ಯಾಹಾರಿ ಹೋಟೆಲ್‍ಗಳಿಗಂತು ಬರವಿಲ್ಲ.. ಇಲ್ಲೂ ಕೂಡ ಯಾರಾದರೂ ನಮ್ಮ ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೆಯ ಬಾರದೇ ಅಂತ ಅನ್ನಿಸಿದ್ದು ಸುಳ್ಳಲ್ಲ. ನಾನು ಮೊದಲು ಉುರಲ್ಲಿದ್ದಾಗ ಎಷ್ಟೊಂದು ಜನರ ಮನೆಗೆ ಉುಟಕ್ಕೆ ಹೋಗುವುದನ್ನು ಬೇಕೆಂದೇ ತಪ್ಪಿಸಿಕೊಂಡಿದ್ದೆ. ಅಪ್ಪ, ಅಮ್ಮ ನೀವು ಹೋಗಿಬನ್ನಿ ನಾನು ಬರೋದಿಲ್ಲ, ಮನೆಯಲ್ಲೇ ಇರ್ತೇನೆ ಅಂತ ಬೇಕಷ್ಟು ಸರಿ ಅಂದಿದ್ದೆ. ಅಕ್ಕ ಪಕ್ಕದ ಮನೆಗಳಲ್ಲಿ ವಿಶೇಷವಿದ್ದಾಗ, ಮನೆಗೆ ಬಂದು ಕರೆದು ಹೋದರು ಸಹ ಯಾರು ಹೋಗ್ತಾರೆ ಅಂತ ಬಹಳಷ್ಟು ಸಲ ಮನೆಯಲ್ಲೇ ಉಳಿದಿದ್ದೆ. ಈಗ ಅವರೆಲ್ಲರ ನೆನಪು ಕಣ್ಣ ಮುಂದೆ ಬಂತು. ಉುರಲ್ಲಿ ಇದ್ದಾಗ, ಕರೆದಾಗ ಹೋಗಿಲ್ಲ. ಈಗ ಹೋಗಬಹುದಿತ್ತು ಆದರೆ ಯಾರು ಕರೆಯುತ್ತಿಲ್ಲ … ಇವೇ ಅಲ್ಲವೇ ಜೀವನದ ಚಿಕ್ಕ ಪುಟ್ಟ ಬದಲಾವಣೆಯ ಮುಖಗಳು?

ಆಮೇಲೆ ಬೇರೆ ದಾರಿಯಿಲ್ಲವಾದ್ದರಿಂದ ಒಂದು ಹೊತ್ತು ಪರಾಟ, ಇನ್ನೊಂದು ಹೊತ್ತು ಅರ್ಧ ಗಂಟೆ ಪ್ರಯಾಣ, ಇನ್ನೊಂದು ಹೊತ್ತು ಮನೆಯಲ್ಲಿ ಕಾರ್ನ್‌ಫ್ಲೇಕ್ಸ್ ತಿಂದು 2 ದಿನ ಕಳೆಯಿತು. ಮೂರನೆಯ ದಿನ ಮನೆಯಲ್ಲಿ ಅಡುಗೆ ಮಾಡಿದಾಗ, ಅದನ್ನು ಉುಟ ಮಾಡುವಾಗ ಏನೋ ಸಂಭ್ರಮ, ಯಾವುದೋ ಸಂತೋಷ…ಬಣ್ಣಿಸಲಾಗದು…….

Published in: on ಆಗಷ್ಟ್ 28, 2009 at 1:57 AM  Comments (6)  

ಚುಟುಕಗಳು

ಎಲೆಯ ಮೇಲಿನ ನೀರು

ಆಗ ತಾನೇ ಬಂದು ನಿಂತಿತ್ತು ಮಳೆ
ಎಲೆಗಳಿಂದ ತೊಟ್ಟಿಕ್ಕುತ್ತಿತ್ತು ಒಂದೊಂದೇ ಹನಿ
ತನಗೆ ನೀರುಣಿಸಿ ತಂಪಾಗಿಸಿದ್ದಕ್ಕಾಗಿ ಬಂದ ಆನಂದ ಭಾಷ್ಪವೋ
ತನ್ನ ಅನುಮತಿ ಇಲ್ಲದೇ ತೋಯಿಸಿ ಚಳಿ ಹುಟ್ಟಿಸಿದ್ದಕ್ಕಾಗಿ ಬಂದ ಕಣ್ಣೀರೋ
ನಾನರಿಯದಾದೆ

ಸೋನೆ ಮಳೆ

ಸೋನೆ ಮಳೆ ಸಣ್ಣದಾಗಿ ಸುರಿಯುತ್ತಿದ್ದರು
ಅದರ ಆನಂದವನ್ನು ಅನುಭವಿಸಲು ನನ್ನಿಂದಾಗುತ್ತಿಲ್ಲ
ಸೋನೆ ಮಳೆಯಲ್ಲೇ ಮರೆಯಾದ ಇನಿಯನ ನೆನಪು
ಮನದಲ್ಲಿ ಇನ್ನೂ ಕಾಡುತ್ತಿದೆಯಲ್ಲ

ಹೊಸ ಚಪ್ಪಲ್

ಹೊಸದಾಗಿ ಕೊಂಡ ಚಪ್ಪಲ್ ಕಚ್ಚುತ್ತಿತ್ತು ಕಾಲು
ತನ್ನನ್ನು ಮೆಟ್ಟಿ, ಉರುತುಂಬಾ ಸುತ್ತಿ ಸವೆಸಿದ್ದಕ್ಕಾಗಿ ಕೋಪವೇನೋ

ಪ್ರೀತಿಯ ನಾಟಕ

ನೀನು ಸ್ವಲ್ಪ ದಿನ ಉರಲ್ಲಿಲ್ಲವಲ್ಲ ಎಂಬ ಬೇಸರಕ್ಕಿಂತ
ಮತ್ತೆ ತಿರುಗಿಬರುವೆಯಲ್ಲ ಎಂಬ ಬೇಜಾರೆ ಹೆಚ್ಚು
ತಿರುಗಿ ಬಂದರು ತೊಂದರೆಯಿಲ್ಲ ಮತ್ತೆ ಅದೇ ಪ್ರೀತಿಯ
ನಾಟಕವಾಡಬೇಕಲ್ಲ ಎಂಬ ಭಯ ಅದಕ್ಕೂ ಹೆಚ್ಚು

ಬಂಧಿ

ನಿನ್ನನ್ನು ಬಂಧಿಸಲೆಂದು ಹಣೆದ ಪ್ರೀತಿಯ ಬಲೆಯಲ್ಲಿ
ನಿನ್ನೊಂದಿಗೆ ನಾನು ಸಿಲುಕಿಕೊಂಡೆನಲ್ಲ
ಇದರಲ್ಲಿ ಬಂಧಿಸಿದವರಾರು ಬಂಧಿ ಯಾರು ಎಂದೇ ತಿಳಿಯದಾಯಿತಲ್ಲ

ಮಂಚ

ಮಲಗುವ ಮಂಚ ಕರ ಕರ ಎಂದು ಸದ್ದು ಮಾಡುತ್ತಿತ್ತು
ನನ್ನುನ್ನು ಹೊರಲಾರದ ಕಷ್ಟಕ್ಕೋ, ತಿಗಣೆಗಳ ಕಾಟ ಕ್ಕೊ
ತನ್ನ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸುತ್ತಿತ್ತು

Published in: on ಮೇ 6, 2009 at 9:36 AM  Comments (7)  

ಮಗು

ಮನೆಯಲ್ಲಿರುವವರು ನಾವಿಬ್ಬರೇ
ಆದರೆ ನಮಗಿಬ್ಬರಿಗೂ ಒಂದೊಂದು ಮಗುವಿದೆ
ನನಗೆ ನನ್ನ ಮಗುವಿನ ಮೇಲೆ ಅತ್ಯಂತ ಪ್ರೀತಿ
ನನ್ನವರಿಗೆ ಅವರ ಮಗುವಿನ ಮೇಲೆ ಅಪಾರ ಮಮತೆ

ತನ್ನ ಮರಿ ಹೊನ್ನ ಮರಿ ಎಂಬಂತೆ
ನನ್ನ ಮಗುವೆ ನನಗೆ ಎಲ್ಲರಿಗಿಂತ ಆಕರ್ಷಕ
ನನ್ನವರಿಗೆ ಅವರ ಮಗುವೆ ಬಲು ಸುಂದರ
ಒಟ್ಟಾರೆ ಎರಡು ಮಕ್ಕಳು ಚೆನ್ನವೇ

ನನ್ನ ಮಗು ತುಸು ದೊಡ್ಡದು
ಶಾಂತ ಸ್ವಭಾವ, ಹಠ, ತೀಟೆ ಬಹಳ ಕಮ್ಮಿ
ಅದು ಬೇಕು ಇದು ಬೇಕು ಎಂಬ ಹಠವಿಲ್ಲ
ಇಸೆಕ್ರೀಂ, ಚಾಕ್ಲೇಟ್ ಬೇಕೆಂದು ಎಂದೂ ಕಾಡಿಲ್ಲ

ನನ್ನವರ ಮಗುವೊ ತುಸು ಚಿಕ್ಕದು
ಶುದ್ದ ತಲೆ ಹರಟೆ, ಆಟ, ತೀಟೆ ಎಲ್ಲ ಜಾಸ್ತಿ
ಬೇರೆ ವಸ್ತುಗಳು ಬೇಕೆಂಬ ರಗಳೆ ಇಲ್ಲದೇ ಇದ್ರು
ಇಸೆಕ್ರೀಂಗಾಗಿ ಯಾವಾಗ್ಲೂ ಕಾಟ

ನನ್ನ ಮಗು ಬಹು ಬೇಗ ದುಃಖ ಪಡುವುದಿಲ್ಲ
ಅತಿಯಾದ ಸಂತೋಷವನ್ನು ವ್ಯಕ್ತಪಡಿಸುವುದಿಲ್ಲ
ಅಸಮಾಧಾನ, ಸಿಟ್ಟು, ಎಲ್ಲ ಬಹಳ ಕಮ್ಮಿ
ಸುಖ ದುಃಖ ಸಮೆಕ್ರತ್ವ ಎಂಬಂತೆ ಎಲ್ಲವೂ ಸಮಾನ ಅದಕ್ಕೆ

ನನ್ನವರ ಮಗುವಿಗೆ ಸ್ವಲ್ಪ ಬೇಜಾರಾದರೂ ದುಃಖ ಉಕ್ಕಿ ಬರುತ್ತದೆ
ಸಂತೋಷವಾದರೆ ಕುಣಿದು ಕುಪ್ಪಳಿಸುತ್ತದೆ
ಸಿಟ್ಟು ಬಂದರೆ ಅಸಮಾಧಾನವಾದರೆ ಗುಮ್ಮನೇ ಕುಳಿತಿರುತ್ತದೆ
ಎಲ್ಲ ಭಾವನೆಗಳನ್ನು ಬೇರೆ ಬೇರೆ ತರದಲ್ಲಿ ಅನುಭವಿಸುವ ಸ್ವಭಾವ ಅದಕ್ಕೆ

ನನ್ನ ಮಗು ಘಟನೆ ಕಹಿ ಇರಲಿ ಸಿಹಿ ಘಟನೆ ಇರಲಿ
ಎಲ್ಲವನ್ನು ಬೇಗ ಮರೆತುಬಿಡುತ್ತದೆ
ಯಾರ ಬಗೆಗೂ ಸಿಟ್ಟು ದ್ವೇಷ ಇಲ್ಲ
ಆದದ್ದು ಆಯಿತು ಎಂದು ಎಲ್ಲವನ್ನು ಮರೆತು ಬಿಡುವುದು ಈ ಮಗುವಿನ ಮನಸ್ಸು

ನನ್ನವರ ಮಗುವಿಗೆ ನೆನಪಿನ ಶಕ್ತಿ ಹೆಚ್ಚು
ಬಹಳ ಕಹಿ ಅಥವಾ ಬಹಳ ಸಿಹಿ ಘಟನೆಗಳನ್ನು ಬೇಗ ಮರೆಯುವುದಿಲ್ಲ
ದ್ವೇಷ ಸಾಧಿಸುವ ಸ್ವಭಾವ ಇಲ್ಲದೇ ಹೋದರು
ನೋವಿನ ಬರೆ, ಸಂತೋಷದ ಗೆರೆಗಳನ್ನು ಬೇಗ ಮರೆಯದು ಈ ಮಗುವಿನ ಹೃದಯ

ನನ್ನ ಮಗು ಮನೆಯಲ್ಲಿದ್ದರು ಅದರ ಪಾಡಿಗೆ ಅದು
ತನ್ನ ಲೋಕದಲ್ಲಿ, ತನ್ನ ಕೆಲಸದಲ್ಲಿ ಮುಳುಗಿರುತ್ತದೆ
ಅದನ್ನು ಸುಧಾರಿಸುವ ಕಷ್ಟ ಇಲ್ಲ, ಬುಧ್ಧಿ ಹೇಳುವ ಗೋಜ಼ಿಲ್ಲಾ
ತೀಟೆ ಮಾಡದೇ ಸುಮ್ಮನೇ ಕೂತಿರು ಎಂದು ಹೆದರಿಸುವ ಕೆಲಸವಿಲ್ಲ

ನಮ್ಮವರ ಮಗು ಅವರು ಮನಯಲ್ಲಿದ್ದರೆ ತೀಟೆ ಮಾಡುತ್ತಲೇ ಇರುತ್ತದೆ
ಅದರ ಕೆಲಸಗಳ ಮಧ್ಯ ನಮ್ಮವರಿಗೊಂದಿಷ್ಟು ಕಾಟ ಕೊಡುತ್ತಾ ಇರುತ್ತದೆ
ತರಲೆ ಮಕ್ಕಳಿಗಿರುವ ಎಲ್ಲ ಗುಣಗಳು, ಅಭ್ಯಾಸಗಳು ಇದಕ್ಕಿವೆ
ಕೆಲವೊಮ್ಮೆ ಸುಮ್ಮನೇ ಕೂರಿಸಲು ಗದರಿಸುವ, ಮುದ್ದಿನಿಂದ ಹೇಳುವ ಅವಶ್ಯಕತೆ ಇದೆ

ಹಬ್ಬ ಹರಿದಿನಗಳು, ಜನುಮದಿನಗಳಂತಹ ಸಂದರ್ಭಗಳಲ್ಲಿ
ತುಂಬಾ ಸಂಭ್ರಮ, ಸಡಗರ ವ್ಯಕ್ತಪಡಿಸುವುದು ನನ್ನವರ ಮಗು
ನನ್ನವರ ಮಗುವಿನ ಸಂತಸವನ್ನು ನೋಡಿ ಖುಷಿ ಪಡುವುದು ನನ್ನ ಮಗು
ನನ್ನ ಮಗು ಸನ್ಯಾಸಿಯಾಗಬೇಕಿತ್ತು ಎಂದು ಒಮ್ಮೊಮ್ಮೆ ನನ್ನ ತಮಾಷೆ

ಮಗು ಮಗು ಎಂದು ಹೇಳಿ ಮಗು ಯಾರೆಂದು ಹೇಳಬೇಕಲ್ಲ
ಮನೆಯಲ್ಲಿರುವ ಇಬ್ಬರಲ್ಲಿ ನನಗೆ ನನ್ನವರು ಮಗು
ನನ್ನವರಿಗೆ ನಾನೇ ಮಗು
ಈಗ ಹೇಳಿ ನಿಮಗ್ಯಾವ ಮಗು ಇಷ್ಟ ಎಂದು.

baby-2

Published in: on ಮೇ 6, 2009 at 4:14 AM  Comments (9)  

ಹೌಸ್ ವೈಫ್

ಚಿತ್ರಕಲೆ, ಸಂಗೀತ ಮುಂತಾದ ವಿಧ ವಿಧವಾದ ಕಲೆಗಳಂತೆಯೇ ಚೆನ್ನಾಗಿ, ರುಚಿಕಟ್ಟಾದ ಅಡುಗೆ ಮಾಡುವುದೂ ಒಂದು ಕಲೆ. ಜಗತ್ತಿನಲ್ಲಿ ಬಹಳಷ್ಟು ಜನ ಅಡುಗೆ ಮಾಡುತ್ತಾರೆ. ಆದರೆ ಎಲ್ಲರೂ ರುಚಿ ರುಚಿಯಾಗೇ ಮಾಡುತ್ತಾರೆ ಅಂತ ಏನಿಲ್ಲವಲ್ಲ. ರುಚಿಯಾಗಿ ಅಡುಗೆ ಮಾಡುವುದಕ್ಕೂ ತಾಳ್ಮೆ, ಪರಿಶ್ರಮ, ಶ್ರದ್ಧೆ, ಅನುಭವ ಎಲ್ಲ ಬೇಕು. ಅಡುಗೆ ಮಾಡುವುದು ಎಲ್ಲರೂ ಸ್ವಲ್ಪ ಮಟ್ಟಿಗಾದರೂ ಕಲಿಯುವಂತಹ ಒಂದು ಕಲೆ.

ಹೌಸ್ ವೈಫ್ ಅಂದ ತಕ್ಷಣ “ಓ ನೀನು ಕೆಲಸಕ್ಕೆ ಹೋಗ್ತಾ ಇಲ್ವಾ?” ಅಂತ ಮುಗೆಳೆಯುವವರೂ ಇದ್ದಾರೆ. ಹೌಸ್ ವೈಫ್ ಅಂದರೆ ಬರೇ ಮನೆಯಲ್ಲಿ ಅಡುಗೆ ಮಾಡಿಕೊಂಡು ಕುಳಿತಿರುವವರು ಅನ್ನುವ ಭಾವನೆ. ಕೆಲವರು ತಾವು ಮನೆಯಲ್ಲಿರುವವರು, ಹೊರಗೆ ಹೋಗಿ ಕೆಲಸ ಮಾಡೋರಲ್ಲ ಅಂತ ಹೇಳೋಕೆ ಹಿಂಜರಿತಾರೆ. ಅವರ ಬಗ್ಗೆನೆ ಅವರಿಗೆ ಕೀಳರಿಮೆ. ನಾನೇನು ಮಾಡುತ್ತಿಲ್ಲ, ಗಂಡನ ಹತ್ತಿರ ಹಣ ತೆಗೆದುಕೊಳ್ಳಬೇಕಲ್ಲ ಎಂಬ ಭಾವನೆ.

ಇಡೀ ದಿನ ಮನೆಯಲ್ಲಿದ್ದು, 3 ಹೊತ್ತು ರುಚಿಯಾದ ಅಡುಗೆ ಮಾಡಿ, ಗಂಡನ (ಮಕ್ಕಳಿದ್ದರೆ ಮಕ್ಕಳ) ಅವಶ್ಯಕತೆಗಳನ್ನು ನೋಡಿಕೊಂಡು, ಮನೆಯ ಸ್ವಚ್ಛತೆ ಮತ್ತು ಇತರ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುವುದು ಯಾವುದಕ್ಕೆ ಕಮ್ಮಿ ಹೇಳಿ? ನಾನು ಸಹ ಕೆಲವೊಮ್ಮೆ ಹೀಗೆ ಯೋಚಿಸುತ್ತಿದ್ದೆ. ನಾನು ಹೊರಗೆ ಹೋಗಿ ಹಣ ಸಂಪಾದಿಸಿಕೊಂಡು ಬಂದರೆ ಮಾತ್ರ ಗೌರವ,ಇಲ್ಲವಾದರೆ ನಾನು ಏನು ಮಾಡುತ್ತಿಲ್ಲ, ನನ್ನವರ ಮೇಲೆ ಹೊರೆಯಾಗಿದ್ದೇನೆ ಅಂತೆಲ್ಲಾ ಯೋಚಿಸುತ್ತಿದ್ದೆ. ಆದರೆ ನನ್ನ ಈ ಯೋಚನೆಯನ್ನು ತಿಳಿದ ನನ್ನವರು ಹೇಳಿದ ಮಾತು ಇದು. ” ಮನೆಯಲ್ಲಿದ್ದು ನನ್ನ ಅವಶ್ಯಕತೆಗಳನ್ನೆಲ್ಲ ನೋಡಿಕೊಂಡು, ಮನೆಯ ಆಗು ಹೋಗುಗಳನ್ನು ನೋಡಿಕೊಂಡು ನನಗೆ ಹೊರಗೆ ದುಡಿಯುವ ಶಕ್ತಿ ಕೊಡುವವಳು ನೀನು. ನೀನು ನನ್ನ ಮೇಲೆ ಹೊರೆಯಾಗಿಲ್ಲ. ನಿನ್ನ ಪ್ರೋತ್ಸಾಹ ಇದ್ದಾರೆ ಮಾತ್ರ ನಾನು ಏನನ್ನಾದರೂ ಮಾಡಲು ಸಾಧ್ಯ. ನೀನು ಮನೆಯಲ್ಲಿ ದುಡಿಯುತ್ತೀಯ, ನಾನು ಹೊರಗೆ ಅಷ್ಟೇ. ನಾನು ದುಡಿಯುವುದರಲ್ಲಿ ನಿನಗೂ ನನ್ನಷ್ಟೇ ಹಕ್ಕಿದೆ” ಅಂತ ತಿಳಿಸಿ ಹೇಳಿದರು. ನನಗೂ ಅದು ನಿಜ ಅನ್ನಿಸಿತು. ಆಗಿನಿಂದ ನಾನು ನನ್ನ ವಿಚಾರಧಾರೆಯನ್ನು ಬದಲಾಯಿಸಿಕೊಂಡಿದ್ದೇನೆ. ನನ್ನ ಹಾಗೆ ಯೋಚಿಸುವವರು ಬಹಳಷ್ಟು ಜನ ಇದ್ದಾರೆ. ನೀವು ಕೂಡ ನಿಮ್ಮ ವಿಚಾರಧಾರೆಯನ್ನು ಬದಲಾಯಿಸಿಕೊಳ್ಳಿ. ಹೊರಗೆ ದುಡಿಯುವ ಮನಸ್ಸಿದ್ದರೆ, ಅನುಕೂಲವಿದ್ದರೆ ಹೊರಗೆ ಹೋಗಿ ಕೆಲಸ ಮಾಡಬಹುದು. ಇಲ್ಲವಾದರೆ ಮನೆಯ ಆಗು ಹೋಗುಗಳನ್ನು ಚೆನ್ನಾಗಿ ನಿಭಾಯಿಸಿ (ಸಂತೋಷದಿಂದ) ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ.

ನಾನು ಸಹ ವರ್ಷದ ಹಿಂದಷ್ಟೇ ಹೊಸದಾಗಿ ಗೃಹಿಣಿಯ ಪಟ್ಟವನ್ನು ಹೊಂದಿದವಾಳಾದ್ದರಿಂದ ಅಡಿಗೆಯಲ್ಲಿ ಅಷ್ಟೊಂದು ನುರಿತವಳಲ್ಲ. ಆದರೂ ನಾನು ಕಲಿತಂತಹ ಕೆಲವು ಅಡಿಗೆಗಳನ್ನು ಇಲ್ಲಿ ಹಾಕಿದ್ದ್ಡೇನೆ. ಒಮ್ಮೆ ಭೇಟಿ ಕೊಟ್ಟು ನೋಡಿ ತಮ್ಮ ಅಭಿಪ್ರಾಯ ತಿಳಿಸಿ.

ranjanah.blogspot.com

pic-12
pic-22

Published in: on ಮೇ 5, 2009 at 3:10 ಅಪರಾಹ್ನ  Comments (2)  

ಮನ ತುಂಬಿ ಬಂದ ಕ್ಷಣಗಳು

ನೋಡೇ ಯಾರು ಬಂದಿದ್ದಾರೆ ಅಂತ, ಮಾತಾಡ್ಸಿದೆಯ? ಏನು ತೊಗೋತಾರೆ ಅಂತ ಕೇಳಿದೆಯ ಅಂತ ಆತ ಆಕೆಯನ್ನು ಕೇಳಿದ. ಇದು ಯಾರು ಅಂತ ಗೊತ್ತಾಯ್ತಾ ಇಲ್ವಾ? ಅಂತ ಮನೆಗೆ ಬಂದವರನ್ನು ತೋರಿಸಿ ಕೇಳಿದಾಗಲು ಆಕೆಯಿಂದ ಯಾವುದೇ ಉತ್ತರವಿಲ್ಲ. ಓ ನಿನ್ನ ಉುಟದ ಟೈಮ್ ಆಯ್ತು ಅಲ್ವಾ, ಹಸಿವೆ ಆಗ್ತಿದೆಯೇನೋ ಅನ್ನುತ್ತಾ ಆತ ಹೋಗಿ ಆಕೆಯ ಆಹಾರವಾದ ತಿಳಿ ಗಂಜಿಯನ್ನು ತಂದು ಆಕೆಗೆ ತಿನ್ನಿಸತೊಡಗಿದ. ನಿಧಾನವಾಗಿ ಒಂದೊಂದೇ ಗುಟುಕು ಒಳಗೆ ಹೋಗುತ್ತಿತ್ತು. ಆಕೆ ಆತನ ಮಗುವಲ್ಲ, ಆದರೂ ಮಗುವಿನಂತೆಯೇ….ಆಕೆ ಆತನ ಪತ್ನಿ. ಈ ಜಗತ್ತಿನ ಪರಿವಿಯೆ ಇಲ್ಲದಂತೆ ಕೋಮಾವಸ್ಥೆಯಲ್ಲಿ ಮಲಗಿರುವ ಹೆಣ್ಣುಮಗಳು. ಹೇಳಿದ ಮಾತು ತಿಳಿಯುವುದೋ ಇಲ್ಲವೋ, ಪ್ರತ್ಯುತ್ತರ ಹೇಳಲಾಗದು, ಹಾಸಿಗೆಯಲ್ಲಿ ಮಲಗಿ ಅಲ್ಲಿ ಅತ್ತಿತ್ತ ತಿರುಗುವುದಕ್ಕೂ, ಅಲ್ಲಿಂದ ಏಳುವುದಕ್ಕೂ ಆಕೆಯಿಂದ ಆಗದು. ತೆಳ್ಳಗಿನ ಆಹಾರ ಬಾಯಿಗೆ ಕೊಟ್ಟರೆ ನಿಧಾನವಾಗಿ ಒಳಗೆ ಇಳಿಯುತ್ತದೆ ಅಷ್ಟೇ. ಯಾವುದೋ ಖಾಯಿಲೆಯಿಂದಾಗಿ ಆಕೆ ತನ್ನ 45-50 ವಯಸ್ಸಿನಲ್ಲಿ ಕೋಮಾವಸ್ತೆಯನ್ನು ತಲುಪಿದ್ದಳು. ವರ್ಷಗಟ್ಟಲೇ ಇದೆ ಸ್ಥಿತಿ. ಮಕ್ಕಳು ಮದುವೆಯಾಗಿ ಅವರವರ ಮನೆಯಲ್ಲಿದ್ದರು, ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಇದ್ದರೂ ಎಷ್ಟು ದಿನ ಯಾರು ಸೇವೆ ಮಾಡಬಲ್ಲರು? ವರ್ಷಗಟ್ಟಲೇ ಆದರೂ ಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ನಿನಗೂ ನೋಡಿಕೊಳ್ಳುವುದು ಕಷ್ಟ, ಆಕೆಗೂ ಅನುಭವಿಸುವುದು ಕಷ್ಟ, ಸುಮ್ಮನೇ ಏನಾದರೂ ವಿಷದ ವಸ್ತು ಕೊಡಿಸಿಬಿಡು ಅಥವಾ ಡಾಕ್ಟರ್ ಹತ್ತಿರ ಏನಾದರೂ ಇಂಜೆಕ್ಶನ್ ಕೊಡಿಸಿ ಸಾಯಿಸಿಬಿಡು ಅಂತ ನೆಂಟರು, ಸ್ನೇಹಿತರು ಕೆಲವರು ಆತನಿಗೆ ಹೇಳಿದರು. ಆದರೂ ಆತನಿಗೆ ಇಷ್ಟುವರ್ಷ ಜೊತೆಗೆ ಸಂಸಾರ ಮಾಡಿದ ಪತ್ನಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಧರ್ಮೇಚ, ಅರ್ಥೆಚ, ಕಾಮೆಚ, ನಾತಿಚರಾಮಿ ಎಂದು ನೀಡಿದ ವಚನವನ್ನು ಮರೆಯಲು ಸಾಧ್ಯವಿಲ್ಲ. ಇಷ್ಟುವರ್ಷ ಎಲ್ಲವನ್ನು ಹಂಚಿಕೊಂಡು ಬದುಕಿದ ಆಕೆಯ ಜೊತೆ ಬಿಡಲು ಆತನ ಮನಸ್ಸು ಒಪ್ಪದು. ಆಕೆ ಇರುವಷ್ಟು ದಿನ ಆಕೆಯ ಸೇವೆಯನ್ನು ನಾನು ಮಾಡುತ್ತೇನೆ, ಆಕೆಯನ್ನು ನೋಡಿದರೆ ಸಂಕಟವಾಗುತ್ತದೆ ಎನ್ನುತ್ತಾ ಆಕೆಯ ಪ್ರತಿಯೊಂದು ಕೆಲಸಗಳನ್ನುಮನಸ್ಸಿಟ್ಟು ಮಾಡುತ್ತಿದ್ದ. ಆಕೆ ಆತನ ಮಾತಿಗೆ ಸ್ಪಂದಿಸುತ್ತಾಳೇನೋ ಅನ್ನುವಂತೆ ಆಕೆಯೊಂದಿಗೆ ಮಾತನಾಡುತ್ತಿದ್ದ. ಮನೆಗೆ ಯಾರಾದರೂ ಹೋದರೆ ತೋರಿಸಿ ಗುರುತು ಸಿಕ್ಕಿತೆ ಎಂದು ಕೇಳುತ್ತಿದ್ದ. ಆ ದಿನ ಆತ ” ಇದು ಯಾರು ಎಂತ ಗೊತ್ತಾಯ್ತಾ “ಅಂತ ತೋರಿಸಿದ್ದು ನನ್ನನ್ನು. ವರದಕ್ಷಿಣೆಗಾಗಿ, ಸಣ್ಣಪುಟ್ಟ ಜಗಳಗಳಿಗಾಗಿ ಸಾಯಿಸುವ, ಹೊಡೆದು ಬಡಿದು ಕಷ್ಟ ನೀಡುವ, ಡೈವರ್ಸ್ ಕೊಡುವ ವಿಷಯಗಳನ್ನು ಕೇಳಿದ್ದೆ. ಆದರೆ ಮಗುವಿನಂತೆ ಪತ್ನಿಯ ಸೇವೆ ಮಾಡುವ, ಪ್ರೀತಿಸುವ, ಕಾಳಜಿ ತೋರಿಸುವ ಉದಾತ್ತ ಮನಸ್ಸಿನ ಮನುಷ್ಯನನ್ನು ಕಂಡು ಮನಸ್ಸು ಮತ್ತು ಕಣ್ಣು ಎರಡೂ ತುಂಬಿಬಂದವು. ಆ ಹೆಣ್ಣುಮಗಳು ಅಂತಹ ಸ್ಥಿತಿಯಲ್ಲಿ ಮಲಗಿದ್ದರು ಆಕೆ ಪುಣ್ಯವಂತೆ ಅನ್ನಿಸಿತು.

ಆ ಮನೆಯ ಗೃಹಿಣಿ, ಆಕೆಯ ಪತಿ, ಒಬ್ಬ ಕೆಲಸದವಳು, ಒಬ್ಬ ನರ್ಸ್, ಒಬ್ಬ ಅತಿಥಿ. ಆ ಸಮಯದಲ್ಲಿ ಮನೆಯಲ್ಲಿದ್ದವರು ಈ 5 ಜನ. ಆ ದಂಪತಿಗಳ ಮಗ ಮತ್ತು ಸೊಸೆ ಎಲ್ಲೋ ಹೊರಗೆ ಹೋಗಿದ್ದರೆಂದು ತೋರುತ್ತದೆ. ಆ ಮನೆಯ ಗೃಹಿಣಿಯ ವಯಸ್ಸು ಒಂದು 60-65 ರ ಮಧ್ಯದಲ್ಲಿ ಇರಬಹುದು.ಗಂಟಲಲ್ಲೊಂದು ತೂತು, ಅಲ್ಲೊಂದು ಚಿಕ್ಕ ಕೊಳವೆಯಂತದ್ದು, ತಲೆಯಲ್ಲಿ ಕೂದಲಿಲ್ಲ, ತಲೆಗೊಂದು ಕರ್ಚಿಪ್ ಕಟ್ಟಿದ್ದಳು. ದೇಹ ಮೊದಲಿನಂತೆ ದಷ್ಟ ಪುಷ್ಟವಾಗಿರಲಿಲ್ಲ, ಕೃಶವಾಗಿತ್ತು, ಮುಖದ ಕಾಂತಿ ಕಳೆಗುಂದಿತ್ತು. ಮಾತನಾಡಲು ಧ್ವನಿ ಹೊರಡುತ್ತಿರಲಿಲ್ಲ. ಆಕೆ ಒಬ್ಬ ಕ್ಯಾನ್ಸರ್ ಪೆಶೆಂಟ್. ಆಕೆಗೆ ಆಗಿದ್ದು ಗಂಟಲಿನ ಕ್ಯಾನ್ಸರ್. ಆದರೂ ಸನ್ನೆಗಳ ಮೂಲಕ ಎಲ್ಲ ಕುಶಲವೇ ಎಂಬಂತೆ ಬಂದ ಅತಿಥಿಯನ್ನು ವಿಚಾರಿಸಿಕೊಂಡು, ಮನೆಯಲ್ಲೆಲ್ಲ ಹೇಗಿದ್ದಾರೆ, ಚಹಾ ತೆಗೆದುಕೊಳ್ಳುತ್ತೀಯಾ ಎಂದು ಒಂದು ಪೇಪರಿನಲ್ಲಿ ಬರೆದು ವಿಚಾರಿಸಿದಾಗ ಈಗ ಏನು ಬೇಡ ಎಂದು ಅತಿಥಿಯ ಉತ್ತರ. ಪೇಪರಿನಲ್ಲಿ ಬರೆದು ತೋರಿಸುವ ಮಾತುಕತೆ ಸ್ವಲ್ಪ ಹೊತ್ತು ಮುಂದುವರಿಯಿತು. ನಂತರ ಈಗ ಬಂದೆ ನೀವು ಮಾತಾಡುತ್ತೀರಿ ಎಂದು ಅತಿಥಿ ಮತ್ತು ಆಕೆಯ ಪತಿಯನ್ನು ಮಾತನಾಡಲು ಬಿಟ್ಟು ಎದ್ದು ಹೋದಳು. 10 ನಿಮಿಷವಾದರೂ ಬರದಿದ್ದಾಗ ಹೋಗಿ ಮಲಗಿಕೊಂಡರಾ ಎಂದು ಅತಿಥಿ ಆಕೆಯ ಪತಿಯನ್ನು ಕೇಳಿದಾಗ, ಟೀ ತರೋಕೆ ಹೋಗಿರಬಹುದು,ಒಳಗೆ ಕೆಲಸದವಳು ಇದ್ದಾಳೆ ಎಂಬ ಉತ್ತರ ಆಕೆಯ ಪತಿಯಿಂದ. ಹೀಗಂದ ಸ್ವಲ್ಪ ಹೊತ್ತಿನಲ್ಲಿ ಕೆಲಸದವಳ ಜೊತೆ ಹೊರಗೆ ಬಂದ ಆಕೆಯ ಕೈಯಲ್ಲಿ ಒಂದು ಟೀ ಕಪ್, ಕೆಲಸದವಳ ಕೈಯಲ್ಲಿ ಒಂದು ಪ್ಲೇಟ್ ಪುರಿ ಭಾಜಿ, ಒಂದು ಸ್ವೀಟ್. ಬೇಡ ಎಂದರು ಒತ್ತಾಯಮಾಡಿ ಅತಿಥಿಗೆ ಅದೆಲ್ಲವನ್ನೂ ಕೊಟ್ಟಳು. ಅಷ್ಟು ಹೊತ್ತಿನವರೆಗೂ ಈಕೆ ಎದ್ದು ಗಟ್ಟಿಯಾಗಿ ಓಡಾಡುತ್ತಾಳೋ ಇಲ್ಲವೋ ಎಂದು ಆಕೆಯ ಕುಶಲೋಪರಿ ವಿಚಾರಿಸಿಕೊಂಡು ಹೋಗಲು ಬಂದ ಅತಿಥಿ ಯೋಚಿಸುತ್ತಿದ್ದರೆ, ಆಕೆಯ ಈ ಅತಿಥಿ ಸತ್ಕಾರ ನೋಡಿ ಮಾತೇ ಹೊರಡುತ್ತಿರಲಿಲ್ಲ. ಅಂದು ಅವರ ಮನೆಗೆ ಹೋದ ಅತಿಥಿ ಬೇರೆ ಯಾರು ಅಲ್ಲ, ಅದು ನಾನೇ. ಮನೆಗೆ ಅತಿಥಿಗಳು ಏಕಾದರೂ ಬರುತ್ತಾರೋ ಎಂದು ಯೋಚಿಸುವ ಈ ಕಾಲದಲ್ಲಿ ಇಂತಹ ಸ್ಥಿತಿಯಲ್ಲೂ ಅತಿಥಿ ಸತ್ಕಾರ ಮಾಡುವ ಗೃಹಿಣಿಯನ್ನು ನೋಡಿ ಹೃದಯ ಭಾರವಾಯಿತು. ಆಕೆ ಕುಳಿತಲ್ಲಿಂದಲೇ ಕೆಲಸದವಲಿಗೆ ಒಂದು ಕಪ್ ಚಹಾ ಮಾಡಿಕೊಂಡು ಬಾ ಎಂದು ತಿಳಿಸಿದ್ದರು ಆಗುತ್ತಿತ್ತು. ಆದರೆ ತಾನೇ ಎದ್ದು ಹೋಗಿ ಮಾಡಿಕೊಂಡು ( ಮಾಡಿಸಿಕೊಂಡು) ಬಂದ ಆಕೆಗೆ ಮನಸ್ಸು ಹ್ಯಾಟ್ಸ್ ಆಫ್ ಎಂದಿತು.

ಇವೆರಡು ನನ್ನ ಕಣ್ಮುಂದೆ ನಡೆದ ಘಟನೆಗಳು. ಪ್ರಪಂಚದಲ್ಲಿ ಎಲ್ಲ ರೀತಿಯ ಜನರೂ ಇರುತ್ತಾರೆ. ಎಸ್ಟೋ ಸರಿ ನಮಗೆ ಇಂತಹ ಜನರ ಮನಸ್ಸಿನ ಜನರ ಭೇಟಿಯಾಗುತ್ತದೆ. ಎಲ್ಲರಿಗೂ ಇಂತಹ ಬೇರೆ ಬೇರೆ ಅನುಭವವಾಗಿರಬಹುದು. ಕೆಲವರಿಗೆ ಅದು ಜ್ಞಾಪಕವಿರುತ್ತದೆ, ಇನ್ನೂ ಕೆಲವರಿಗೆ ಮರೆತು ಹೋಗುತ್ತದೆ. ಈ ಇಬ್ಬರು ಉನ್ನತ ಮನಸ್ಸಿನ ಜನರ ಭೇಟಿಯ ನೆನಪು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣವೆಂದು ಅನ್ನಿಸಿತು………..ಬರೆದಿದ್ದೇನೆ……………

Published in: on ಏಪ್ರಿಲ್ 14, 2009 at 8:36 AM  Comments (10)