ಒಳ್ಳೆಯತನ

ಒಂದು ಉೂರು, ಅಲ್ಲೊಂದು ಕುಡಿಯುವ ನೀರಿನ ಬಾವಿ, ಬಾವಿಯ ಬಳಿ ಒಂದು ಹುತ್ತ, ಹುತ್ತದಲ್ಲಿ ಒಂದು ಹಾವಿನ ವಾಸ. ಹಾವು ಆ ಉರಿನವರಿಗೆ ಯಾರಿಗೂ ಆ ಕಡೆಗೆ ಸುಳಿಯಾಲು ಬಿಡುತ್ತಿರಲಿಲ್ಲ. ಅಪ್ಪಿ ತಪ್ಪಿ ಬಂದರೆ ಕಚ್ಚುತ್ತಿತ್ತು. ಉೂರಿನವರು ಅದರ ಉಪದ್ರವ ತಡೆಯಲಾರದೇ ಬೇಸತ್ತಿದ್ದರು. ಅಷ್ಟರಲ್ಲಿ ಒಬ್ಬ ಸನ್ಯಾಸಿ ಆ ಉುರಿಗೆ ಆಗಮಿಸಿದ. ಆತನನ್ನು ನೋಡಲು ಹೋದ ಉೂರಿನ ಜನರು ಹಾವು ನೀಡುತ್ತಿರುವ ಕಷ್ಟವನ್ನು ಹೇಳಿಕೊಂಡರು. ಅದನ್ನು ಕೇಳಿದ ಸನ್ಯಾಸಿ, ಉರಿನ ಜನ ನಿಲ್ಲು ಎಂದರು ಕೇಳದೇ, ಬಾವಿಯ ಬಳಿ ಹೋದ. ಆತನನ್ನು ನೋಡಿದ ಹಾವು ಹೆದರಿಸುತ್ತಾ ಕಚ್ಚಲು ಬಂತು. ಸ್ವಲ್ಪವೂ ಧೃತಿಗೆಡದ ಸನ್ಯಾಸಿ ಆ ಹಾವನ್ನು ಎದುರಿಸಿ ನಿಂತು ಅದಕ್ಕೆ ” ಇಷ್ಟು ಜನಕ್ಕೆ ಕಷ್ಟ ನೀಡಿ ನೀನು ಏನು ಪಡೆಯುವೆ, ನೀನು ಕೆಟ್ಟದ್ದು ಮಾಡಿದರೆ ಅದರ ಫಲವು ಕೆಟ್ಟದ್ದೇ ಆಗುವುದು, ನೀನು ಇಲ್ಲಿ ಇರುವೆ ಎಂಬ ಕಾರಣಕ್ಕಾಗಿ ಜನರನ್ನು ಬಾವಿಯ ಕಡೆ ಬರದಂತೆ ತಡೆಯುವುದು ಸರಿಯಲ್ಲ. ಅವರ ಪಾಡಿಗೆ ಅವರು ಬರಲಿ, ನಿನ್ನ ಪಾಡಿಗೆ ನೀನು ಬದುಕು, ಕಚ್ಚಬೇಡ, ಹಿಂಸೆಯನ್ನು ಬಿಟ್ಟುಬಿಡು” ಎಂದು ಹೇಳಿದ. ಸನ್ಯಾಸಿಯ ಮಾತನ್ನು ಕೇಳಿದ ಹಾವು ಮನಃ ಪರಿವರ್ತನೆ ಹೊಂದಿ, ಆತ ನುಡಿದಂತೆ ಇರುವೆನೆಂದು ಮಾತು ಕೊಟ್ಟಿತು. ಸನ್ಯಾಸಿ ಬೇರೊಂದು ಉುರಿಗೆ ಹೊರಟು ಹೋದ.

ಇತ್ತ ಹಾವು ಸನ್ಯಾಸಿಗೆ ಕೊಟ್ಟ ಮಾತಿನಂತೆ ಹಿಂಸೆಯನ್ನು ಬಿಟ್ಟು ಬಿಟ್ಟಿತು. ಆಹಾರಕ್ಕಾಗಿಯೂ ಪ್ರಾಣಿಗಳ ಬೇಟೆಯಾಡುವುದನ್ನು ನಿಲ್ಲಿಸಿತು. ಅಲ್ಲಿ ಇಲ್ಲಿ ಬಿದ್ದಿರುವ, ಸಿಕ್ಕಿದ ಆಹಾರ ತಿನ್ನುತ್ತಿತ್ತು. ಜನರಿಗೆ ಕಚ್ಚುತ್ಟಿರಲಿಲ್ಲ, ಹೆದರಿಸುತ್ತಿರಲಿಲ್ಲ. ಸ್ವಲ್ಪ ದಿನ ಮೊದಲಿನ ಭಯದಲ್ಲೇ ಇದ್ದ ಜನ, ಸ್ವಲ್ಪ ದಿನಗಳ ನಂತರ ಏನೂ ಮಾಡದ ಹಾವಿಗೆ ಹೆದರುವುದನ್ನು ನಿಲ್ಲಿಸಿದರು. ಬಾವಿಗೆ ನೀರು ತರಲು ಹೋಗಲಾರಂಭಿಸಿದರು. ಮಕ್ಕಳು ಹಾವಿನ ಸಮೀಪದಲ್ಲೇ ಆಡಲಾರಂಭಿಸಿದರು. ದಷ್ಟ ಪುಷ್ಟವಾಗಿದ್ದ ಹಾವು, ಬೇಟೆಯಾಡುವುದನ್ನು ಬಿಟ್ಟು ಸರಿಯಾದ ಆಹಾರ ಸಿಗದೆ ಕೃಶವಾಯಿತು. ದಿನ ಕಳೆದಂತೆ ಮಕ್ಕಳು ಹಾವನ್ನು ಉಪಯೋಗಿಸಿಕೊಂಡು ಆಟವಾಡತೊಡಗಿದರು. ಹಾವು ದಾರಿಯಲ್ಲಿ ಮಲಗಿದ್ದರೆ ಎತ್ತಿ ಬದಿಗೆ ಬಿಸಾಡಿ ಮುಂದೆ ಹೋಗುತ್ತಿದ್ದರು ಜನ. ಹೀಗೆ ಒಂದು ದಿನ ಆ ಬಾವಿಯ ಹಗ್ಗ ತುಂಡಾಯಿತು. ನೀರು ಎಳೆಯಲು ಹಗ್ಗ ಗಿಡ್ದವಾದ ಕಾರಣ ಬದಿಯಲ್ಲೇ ಮಲಗಿದ್ದ ಹಾವನ್ನು ಹಗ್ಗದ ಜೊತೆ ಗಂಟು ಹಾಕಿ ನೀರೆಳೆಯಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ಬೇರೆ ಉುರಿಗೆ ಹೋದ ಸನ್ಯಾಸಿ ಮರಳಿ ಆ ಉುರಿಗೆ ಬಂದು, ಹಾವನ್ನು ನೋಡಲು ಬಾವಿಯ ಸಮೀಪ ಹೋದ. ಹಾವಿನ ಸ್ಥಿತಿ ನೋಡಿ ಆತನಿಗೆ ಪಸ್ಚಾತ್ತಾಪವಾಯಿತು. ಜನರಿಂದ ಹಾವನ್ನು ಬಿಡಿಸಿ, ಇದೇನು ನಿನ್ನ ಪರಿಸ್ಥಿತಿ ಎಂದು ಕೇಳಿದ. ಹಾವು ಹೇಳಿತು ” ತಾವು ನನಗೆ ಹಿಂಸೆ ಮಾಡಬೇಡ ಎಂದಿರಿ, ನಾನು ಬೇಟೆಯಾಡುವುದನ್ನು ನಿಲ್ಲಿಸಿದೆ. ಆಹಾರ ಸರಿಯಾಗಿ ದೊರಕಲಿಲ್ಲ. ನಾನು ಏನೂ ಮಾಡದ ಕಾರಣ ಜನರಲ್ಲಿ ನನ್ನ ಮೇಲಿನ ಭಯ ಹೊರಟು ಹೋಯಿತು. ಅವರು ನನ್ನನ್ನು ಹೀಗೆ ಹಿಂಸಿಸುತ್ತಿದ್ದಾರೆ ಎಂದಿತು. ಅದನ್ನು ಕೇಳಿದ ಸನ್ಯಾಸಿ ” ನಾನು ನಿನಗೆ ಕಚ್ಚಬೇಡ ಎಂದೆನೆ ಹೊರತು ಬುಸ್ ಎನ್ನಬೇಡ ಎಂದೇನಾ? ನಿನ್ನ ರಕ್ಷಣೆಗಾಗಿ ನಿನಗೆ ಅವಶ್ಯಕವಾಗಿ ಬೇಕಾಗುವ ಆಹಾರವನ್ನು ತಿನ್ನ ಬೇಡ ಎಂದೇನಾ? ಕಚ್ಚಬೇಡ ಎಂದೆ ಇದರರ್ಥ ಹೆದರಿಸಬೇಡ ಎಂದಲ್ಲ. ಒಳ್ಳೆಯವನಾಗು ಆದರೆ ಅತಿಯಾಗಿ ಒಳ್ಳೆಯವನಾಗಬೇಡ. ಜಗತ್ತಿನಲ್ಲಿ ಬದುಕುವುದು ಅಸಾಧ್ಯವಾಗುತ್ತದೆ ” ಎಂದ. ಹಾವು ಆತನ ಮಾತಿನ ಅರ್ಥ ತಿಳಿದು ಅದರಂತೆಯೇ ತನ್ನ ಜೀವನ ಸಾಗಿಸಿತು.

ಈ ಕಥೆಯ ಸಾರಾಂಶ ಏನೆಂದರೆ ಒಳ್ಳೆಯತನ ಬೇಕು ಆದರೆ ಅತಿಯಾದ ಒಳ್ಳೆಯತನ ಬೇಡ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಈ ಮಾತು ಅಕ್ಷರಶಹ ನಿಜ ಎಂದು ಅನ್ನಿಸುತ್ತದೆ. ಹಿಂದೆ ತ್ರೇತಾಯುಗದ ರಾಮನ ಕಾಲದಲ್ಲಿ ಎಷ್ಟು ಒಳ್ಳೆಯತನ ಇದ್ದರು ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ಎಷ್ಟು ಬೇಕೋ ಅಷ್ಟು ಒಳ್ಳೆಯತನ ಇದ್ದರೆ ಸಾಕು. ನಾವು ಅತಿಯಾಗಿ ಒಳ್ಳೆಯವರಾಗಿದ್ದರೆ ನಮ್ಮ ಸುತ್ತಲಿನವರು ಒಳ್ಳೆಯವರಿರುತ್ತಾರೆ ಎಂದೇನಿಲ್ಲವಲ್ಲ. ನಾವು ಬಹಳ ಒಳ್ಳೆಯವರಾಗಿದ್ದರೆ ಅದರಿಂದ ತಮ್ಮ ಉಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಇದರಿಂದ ನಮ್ಮ ಜೀವನ ನಡೆಸುವುದು ದುಸ್ತರವಾಗುತ್ತದೆ. ಅತಿಯಾದ ಒಳ್ಳೆಯ ಗುಣ ಹೊಂದಿ ಇತರರಿಗೆ ಒಳ್ಳೆಯದನ್ನು ಮಾಡುತ್ತಲೇ ಜೀವನ ಸಾಗಿಸುತ್ತೇನೆ ಎನ್ನುವವರು ಸನ್ಯಾಸಿಯಾಗಿ ಜೀವನ ಸಾಗಿಸುವುದೇ ಸರಿ ಎನ್ನುವಂತಾಗಿಬಿಡುತ್ತದೆ.

ಇವಳ ಹಿಂದಿನ ಬರಹದಲ್ಲಷ್ಟೇ ಹೇಳಿದ್ದಳು ಇತರರಿಗೆ ಸಹಾಯ ಮಾಡಿ ಎಂದು, ಇಲ್ಲಿ ಹೀಗೆ ಹೇಳುತ್ತಿದ್ದಾಳೆ ಅಂತ ಗೊಂದಲಗೊಳ್ಳಬೇಡಿ. ನಾನಲ್ಲಿ ಹೇಳಿದ್ದು ನಿಮ್ಮ ಕೈಲಿರುವ ಹಣದಲ್ಲಿ ಸ್ವಲ್ಪ ಸಹಾಯ ಮಾಡಿ ಎಂದು. ಕೈಲಿರುವ ಎಲ್ಲ ಹಣವನ್ನು ನೀಡಿ ಎಂದು ಅಲ್ಲ. ಅದರರ್ಥ ಒಳ್ಳೆಯತನ ಬೇಕು (ಅತಿಯಾದ ಒಳ್ಳೆಯತನ ಬೇಡ) ಎಂದು. ಕಚ್ಚುವ ಹಾವಾಗಬೇಡಿ, ಅದರಂತೆಯೇ ಅತ್ಯಂತ ಸಾತ್ವಿಕವಾಗಿ ಕಷ್ಟ ಪಡುವ ಹಾವು ಆಗಬೇಡಿ. ಬುಸ್ ಎನ್ನುವ ಹಾವಾಗಿ. ಇಂದಿನ ಜಗತ್ತಿನಲ್ಲಿ ಹಾಗೆ ಬದುಕುವುದೇ ಸರಿ. ನಮ್ಮ ಅತಿಯಾದ ಒಳ್ಳೆಯತನ ಉಪಯೋಗಿಸಿಕೊಂಡು, ಜೊತೆಗೆ ಮೇಲಿಂದ ಒಂದು ಕಲ್ಲು ಎಂಬಂತೆ ನಮ್ಮನ್ನು ಕೆಳಗೆ ದೂಡುವ ಜನರಿಗೇನು ಕೊರತೆಯಿಲ್ಲ. ನಮ್ಮ ಒಳ್ಳೆಯತನದ ಭುಜವನ್ನೇ ಮೆಟ್ಟಿಲಾಗಿಸಿಕೊಂಡು ಮೇಲೆ ಹತ್ತಿದಮೇಲೆ ನಮ್ಮನ್ನು ಒದ್ದು ಹೋಗುವವರು ಇದ್ದಾರೆ. ನಾವು ಮಾತ್ರ ಇದ್ದಲ್ಲೇ ಇರುತ್ತೇವೆ. ಕಾರಣ ನಮ್ಮ ಅತಿಯಾದ ಒಳ್ಳೆಯತನ. ಆದ್ದರಿಂದ ಬದುಕಲು “ಕೆಟ್ತತನ ಬೇಡವೇ ಬೇಡ, ಒಳ್ಳೆಯತನ ಬೇಕು, ಅತಿಯಾದ ಒಳ್ಳೆಯತನ ಬೇಡ”
“Don’t ever be bad, be good, don’t be too good”

Published in: on ಜೂನ್ 1, 2009 at 2:49 ಅಪರಾಹ್ನ  Comments (2)  

ಸಹಾಯ ಮಾಡಿ

ಎಲ್ಲ ಸ್ನೇಹಿತ, ಸ್ನೇಹಿತೆಯರಲ್ಲೂ ನನ್ನದೊಂದು ವಿನಂತಿ. ಇದೇನಪ್ಪ ಮೊನ್ನೆ ಮೊನ್ನೆ ಬ್ಲಾಗ್ ಬರೆಯೋಕೆ ಬಂದವಳು ಆಗಲೇ ಒಂದು ಬೇಡಿಕೆ ತಗೊಂಡು ಬಂದುಬಿಟ್ಟಿದ್ದಾಳೆ ಅಂದುಕೊಳ್ಳಬೇಡಿ. ನನ್ನ ಮನಸ್ಸಿಗೆ ತೋಚಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಬಸ್ ಸ್ಟಾಂಡಿನಲ್ಲಿ, ರೈಲ್ವೇ ಸ್ಟೇಷನ್ನಿನಲ್ಲಿ, ಇಂತಹ ಇನ್ನೂ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರಿಗೆ, ಹೃದಯ ರೋಗಿಗಳಿಗೆ, ಕ್ಯಾನ್ಸರ್ ಪೀಡಿತರಿಗೆ, ಅನಾಥ ಮಕ್ಕಳಿಗೆ, ವೃಧ್ಧರಿಗೆ, ಇತ್ಯಾದಿ ಇತ್ಯಾದಿ ಸಮಸ್ಯೆಯಲ್ಲಿರುವವರಿಗೆ ಸಹಾಯ ಮಾಡಿ ಅಂತ ಕೆಲವರು ಹಣ ಕೇಳುತ್ತಿರುವುದನ್ನು ನೋಡಿರುತ್ತೀರಿ. ಕೆಲವೊಂದು ಸಂಸ್ಥೆಯವರು ಕೂಡ ಇಂತವರ ಸಹಾಯಕ್ಕಾಗಿ ದೇಣಿಗೆ ನೀಡಿ ಅಂತ ಕೇಳುತ್ತಿರುವುದನ್ನು ಕೂಡ ನೋಡಿರುತ್ತೀರಿ. ಅಥವಾ ಸ್ವತಹ ಅಂಗವಿಕಲರೆ ತಮ್ಮ ಹೊಟ್ಟೆಪಾಡಿಗಾಗಿ ಜನರ ಮುಂದೆ ಕೈ ಚಾಚುತ್ತಿರುವ ದೃಶ್ಯವೂ ಸಹ ನಿಮಗೆ ಹೊಸದಲ್ಲ. ಹೀಗೆ ಕೇಳುತ್ತಿರುವುದನ್ನು ನೋಡಿ ಬಹಳಷ್ಟು ಸಲ ” ಎಲ್ಲಿ ನೋಡಿದ್ರೂ ಹೀಗೆ ಹಣ ಕೇಳ್ತಾ ಇರ್ತಾರೆ, ಆ ಹಣ ತೊಗೊಂದು ಹೋಗಿ ಏನು ಮಾಡ್ತಾರೋ ಏನೋ, ನಾವೇಕೆ ನಮ್ಮ ಹಣವನ್ನು ಇವರಿಗೆ ಕೊಡಬೇಕು ” ಅಂತ ಅಂದುಕೊಳ್ತಾ ಇರ್ತೀವಿ. ದಯವಿಟ್ಟು ಹಾಗೆ ತಿಳ್ಕೊಬೇಡಿ. ಕಾರಣ ಹೇಳ್ತೀನಿ ಕೇಳಿ.

ಎಲ್ಲರೂ ಸುಳ್ಳು ಹೇಳಿಕೊಂಡು ಹಣ ಕೇಳುತ್ತಿರುವುದಿಲ್ಲ, ಆದರೆ ಅವರ ಮಧ್ಯೆ ಕುರಿಯ ಮಂದೆಯ ನಡುವೆ ತೊಳಗಳಂತೆ ಮೋಸಗಾರರು, ಸುಳ್ಳು ಹೇಳಿ ಹಣ ಕೇಳುವವರೂ ಕೂಡ ಖಂಡಿತ ಇದ್ದಾರೆ. ಆದ್ದರಿಂದ ಕೇಳುತ್ತಿರುವವರನ್ನು ಸರಿಯಾಗಿ ಗಮನಿಸಿ. ಅವರು ನಿಜವಾಗಿಯೂ ಕಷ್ಟದಲ್ಲಿರುವವರು ಅಥವಾ ನಿಜವಾಗಿಯೂ ಕಷ್ಟದಲ್ಲಿರುವವರಿಗಾಗೆ ಹಣ ಕೇಳುತ್ತಿರುವವರು ಅಂತ ನಿಮ್ಮ ಮನಸ್ಸು ಹೇಳುತ್ತಿದ್ದರೆ ಅಂತವರಿಗೆ ಸಹಾಯ ಮಾಡಿ. ಏಕೆಂದರೆ ಮೋಸಗಾರರಿಂದಾಗಿ ನಿಜವಾಗಲೂ ಕಷ್ಟದಲ್ಲಿರುವವರಿಗೆ ನೀಡುವ ಸಹಾಯ ನಿಂತುಹೋಗಬಾರದಲ್ಲ. ಹಣ ಕೇಳುತ್ತಿರುವವರನ್ನು ನೋಡಿ, ಅವರು ನಿಜ ಹೇಳುತ್ತಿದ್ದಾರೆ ಅನ್ನಿಸಿದರೆ ನಿಮ್ಮಲ್ಲಿರುವ ನೂರೋ ಇನೂರೋ ರೂಪಾಯಿಗಳಲ್ಲಿ ಒಂದು ರೂಪಾಯಿ ಕೊಡಿ ಸಾಕು. ಐಸ್ ಕ್ರೀಂ ತಿನ್ನುವುದಕ್ಕೋ, ಹೊಟೆಲ್ / ಸಿನಿಮಾ ಹೋಗುವುದಕ್ಕೋ, ದುಬಾರಿ ಬಟ್ಟೆ ಕೊಳ್ಳುವುದಕ್ಕೋ ಅಂತ ನೀವು ಖರ್ಚು ಮಾಡುವ ಹಣದಲ್ಲಿ ಒಂದೊಂದು ರೂಪಾಯಿ ಮಿಗಿಸಿ ಕೊಡಿ. ಅದರಲ್ಲಿ ಇನ್ಯಾರದೋ ಕಷ್ಟ ನೀಗುವುದಕ್ಕೆ ಸಹಾಯ ಮಾಡಿದಂತಾಗುತ್ತದೆ. ಹಸಿವಿನಲ್ಲಿರುವವರಿಗೆ ಆಹಾರ ನೀಡಿದಂತಾಗುತ್ತದೆ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಗಳಿಗೆ ಹೋಗಿ ದೇಣಿಗೆ ನೀಡುವುದು ಅಥವಾ ಕಷ್ಟದಲ್ಲಿರುವ ಒಬ್ಬೊಬ್ಬ ವ್ಯಕ್ತಿಗೆ ಸಂಪೂರ್ಣ ಸಹಾಯ ನೀಡಲು ಸಾಧ್ಯವಾಗದಿದ್ದರು, ಇದೊಂದು ಸಹಾಯ ಹಸ್ತ ನೀಡಲು ನಮ್ಮಿಂದ ಖಂಡಿತ ಸಾಧ್ಯ ಎನ್ನುವುದು ನನ್ನ ಭಾವನೆ. ಬಾಡುತ್ತಿರುವ ಗಿಡಕ್ಕೆ ನೀರೆರೆಯುವ, ಚಿಗುರಲು ಚಿಕ್ಕ ಸಹಾಯ ಮಾಡುವ ಈ ಕೆಲಸದಲ್ಲಿ ನೀವೆಲ್ಲರೂ ನನ್ನ ಜೊತೆಗಿದ್ದೀರಿ ಎಂದುಕೊಂಡಿದ್ದೇನೆ. ಏನಂತೀರಾ? ತಮ್ಮ ಅಭಿಪ್ರಾಯ ತಿಳಿಸಿ. ಸರಿ ಎಂದಾದರೆ ಇಂದಿನಿಂದಲೇ ಹೆಜ್ಜೆ ಇಡೋಣ ತಡ ಏಕೆ?

Published in: on ಜೂನ್ 1, 2009 at 1:14 ಅಪರಾಹ್ನ  Comments (5)