ಸಹಾಯ ಮಾಡಿ

ಎಲ್ಲ ಸ್ನೇಹಿತ, ಸ್ನೇಹಿತೆಯರಲ್ಲೂ ನನ್ನದೊಂದು ವಿನಂತಿ. ಇದೇನಪ್ಪ ಮೊನ್ನೆ ಮೊನ್ನೆ ಬ್ಲಾಗ್ ಬರೆಯೋಕೆ ಬಂದವಳು ಆಗಲೇ ಒಂದು ಬೇಡಿಕೆ ತಗೊಂಡು ಬಂದುಬಿಟ್ಟಿದ್ದಾಳೆ ಅಂದುಕೊಳ್ಳಬೇಡಿ. ನನ್ನ ಮನಸ್ಸಿಗೆ ತೋಚಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಬಸ್ ಸ್ಟಾಂಡಿನಲ್ಲಿ, ರೈಲ್ವೇ ಸ್ಟೇಷನ್ನಿನಲ್ಲಿ, ಇಂತಹ ಇನ್ನೂ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರಿಗೆ, ಹೃದಯ ರೋಗಿಗಳಿಗೆ, ಕ್ಯಾನ್ಸರ್ ಪೀಡಿತರಿಗೆ, ಅನಾಥ ಮಕ್ಕಳಿಗೆ, ವೃಧ್ಧರಿಗೆ, ಇತ್ಯಾದಿ ಇತ್ಯಾದಿ ಸಮಸ್ಯೆಯಲ್ಲಿರುವವರಿಗೆ ಸಹಾಯ ಮಾಡಿ ಅಂತ ಕೆಲವರು ಹಣ ಕೇಳುತ್ತಿರುವುದನ್ನು ನೋಡಿರುತ್ತೀರಿ. ಕೆಲವೊಂದು ಸಂಸ್ಥೆಯವರು ಕೂಡ ಇಂತವರ ಸಹಾಯಕ್ಕಾಗಿ ದೇಣಿಗೆ ನೀಡಿ ಅಂತ ಕೇಳುತ್ತಿರುವುದನ್ನು ಕೂಡ ನೋಡಿರುತ್ತೀರಿ. ಅಥವಾ ಸ್ವತಹ ಅಂಗವಿಕಲರೆ ತಮ್ಮ ಹೊಟ್ಟೆಪಾಡಿಗಾಗಿ ಜನರ ಮುಂದೆ ಕೈ ಚಾಚುತ್ತಿರುವ ದೃಶ್ಯವೂ ಸಹ ನಿಮಗೆ ಹೊಸದಲ್ಲ. ಹೀಗೆ ಕೇಳುತ್ತಿರುವುದನ್ನು ನೋಡಿ ಬಹಳಷ್ಟು ಸಲ ” ಎಲ್ಲಿ ನೋಡಿದ್ರೂ ಹೀಗೆ ಹಣ ಕೇಳ್ತಾ ಇರ್ತಾರೆ, ಆ ಹಣ ತೊಗೊಂದು ಹೋಗಿ ಏನು ಮಾಡ್ತಾರೋ ಏನೋ, ನಾವೇಕೆ ನಮ್ಮ ಹಣವನ್ನು ಇವರಿಗೆ ಕೊಡಬೇಕು ” ಅಂತ ಅಂದುಕೊಳ್ತಾ ಇರ್ತೀವಿ. ದಯವಿಟ್ಟು ಹಾಗೆ ತಿಳ್ಕೊಬೇಡಿ. ಕಾರಣ ಹೇಳ್ತೀನಿ ಕೇಳಿ.

ಎಲ್ಲರೂ ಸುಳ್ಳು ಹೇಳಿಕೊಂಡು ಹಣ ಕೇಳುತ್ತಿರುವುದಿಲ್ಲ, ಆದರೆ ಅವರ ಮಧ್ಯೆ ಕುರಿಯ ಮಂದೆಯ ನಡುವೆ ತೊಳಗಳಂತೆ ಮೋಸಗಾರರು, ಸುಳ್ಳು ಹೇಳಿ ಹಣ ಕೇಳುವವರೂ ಕೂಡ ಖಂಡಿತ ಇದ್ದಾರೆ. ಆದ್ದರಿಂದ ಕೇಳುತ್ತಿರುವವರನ್ನು ಸರಿಯಾಗಿ ಗಮನಿಸಿ. ಅವರು ನಿಜವಾಗಿಯೂ ಕಷ್ಟದಲ್ಲಿರುವವರು ಅಥವಾ ನಿಜವಾಗಿಯೂ ಕಷ್ಟದಲ್ಲಿರುವವರಿಗಾಗೆ ಹಣ ಕೇಳುತ್ತಿರುವವರು ಅಂತ ನಿಮ್ಮ ಮನಸ್ಸು ಹೇಳುತ್ತಿದ್ದರೆ ಅಂತವರಿಗೆ ಸಹಾಯ ಮಾಡಿ. ಏಕೆಂದರೆ ಮೋಸಗಾರರಿಂದಾಗಿ ನಿಜವಾಗಲೂ ಕಷ್ಟದಲ್ಲಿರುವವರಿಗೆ ನೀಡುವ ಸಹಾಯ ನಿಂತುಹೋಗಬಾರದಲ್ಲ. ಹಣ ಕೇಳುತ್ತಿರುವವರನ್ನು ನೋಡಿ, ಅವರು ನಿಜ ಹೇಳುತ್ತಿದ್ದಾರೆ ಅನ್ನಿಸಿದರೆ ನಿಮ್ಮಲ್ಲಿರುವ ನೂರೋ ಇನೂರೋ ರೂಪಾಯಿಗಳಲ್ಲಿ ಒಂದು ರೂಪಾಯಿ ಕೊಡಿ ಸಾಕು. ಐಸ್ ಕ್ರೀಂ ತಿನ್ನುವುದಕ್ಕೋ, ಹೊಟೆಲ್ / ಸಿನಿಮಾ ಹೋಗುವುದಕ್ಕೋ, ದುಬಾರಿ ಬಟ್ಟೆ ಕೊಳ್ಳುವುದಕ್ಕೋ ಅಂತ ನೀವು ಖರ್ಚು ಮಾಡುವ ಹಣದಲ್ಲಿ ಒಂದೊಂದು ರೂಪಾಯಿ ಮಿಗಿಸಿ ಕೊಡಿ. ಅದರಲ್ಲಿ ಇನ್ಯಾರದೋ ಕಷ್ಟ ನೀಗುವುದಕ್ಕೆ ಸಹಾಯ ಮಾಡಿದಂತಾಗುತ್ತದೆ. ಹಸಿವಿನಲ್ಲಿರುವವರಿಗೆ ಆಹಾರ ನೀಡಿದಂತಾಗುತ್ತದೆ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಗಳಿಗೆ ಹೋಗಿ ದೇಣಿಗೆ ನೀಡುವುದು ಅಥವಾ ಕಷ್ಟದಲ್ಲಿರುವ ಒಬ್ಬೊಬ್ಬ ವ್ಯಕ್ತಿಗೆ ಸಂಪೂರ್ಣ ಸಹಾಯ ನೀಡಲು ಸಾಧ್ಯವಾಗದಿದ್ದರು, ಇದೊಂದು ಸಹಾಯ ಹಸ್ತ ನೀಡಲು ನಮ್ಮಿಂದ ಖಂಡಿತ ಸಾಧ್ಯ ಎನ್ನುವುದು ನನ್ನ ಭಾವನೆ. ಬಾಡುತ್ತಿರುವ ಗಿಡಕ್ಕೆ ನೀರೆರೆಯುವ, ಚಿಗುರಲು ಚಿಕ್ಕ ಸಹಾಯ ಮಾಡುವ ಈ ಕೆಲಸದಲ್ಲಿ ನೀವೆಲ್ಲರೂ ನನ್ನ ಜೊತೆಗಿದ್ದೀರಿ ಎಂದುಕೊಂಡಿದ್ದೇನೆ. ಏನಂತೀರಾ? ತಮ್ಮ ಅಭಿಪ್ರಾಯ ತಿಳಿಸಿ. ಸರಿ ಎಂದಾದರೆ ಇಂದಿನಿಂದಲೇ ಹೆಜ್ಜೆ ಇಡೋಣ ತಡ ಏಕೆ?

Published in: on ಜೂನ್ 1, 2009 at 1:14 ಅಪರಾಹ್ನ  Comments (5)  

ನನ್ನ ಮನದ ಮತ್ತಷ್ಟು ಮಾತುಗಳು

ಹರುಕು ಬಟ್ಟೆ ಧರಿಸಿದವರೆಲ್ಲ ಬಿಕ್ಷುಕರಲ್ಲ, ಬಡವರೂ ಅಲ್ಲ
ಹಣವಂತರೂ ಧರಿಸುವರು ಹರುಕು ಬಟ್ಟೆ
ಹಣವಿಲ್ಲದೇ ಅಲ್ಲ ಫ್ಯಾಶನ್ಗಾಗಿ

ನಾನು ಹೃದಯದಿಂದ ಪ್ರೀತಿಸುತ್ತೇನೆ ಎಂದರೆ ನಂಬಿಬಿಡಬೇಡಿ
ಒಡೆದು, ಒಳಹೊಕ್ಕಿ ನೋಡಿದವರ್‍ಯಾರು ಅವರ ಹೃದಯದಲ್ಲಿ
ತೋರಿಸಲು ಅವರೇನು ಹಾರ್ಟ್ ಪೆಶೆಂಟ್ ಅಲ್ಲ
ನೋಡಲು ನೀವೇನೂ ಹಾರ್ಟ್ ಸ್ಪೆಶಲಿಸ್ಟ್ ಅಲ್ಲವಲ್ಲ

ಜೋರಾಗಿ ಹರಿಯುತ್ತಿರುವ ನೀರಿನಲ್ಲಿ ಬಿಟ್ಟ ಕಾಗದದ ದೋಣಿಯಂತೆ ನಮ್ಮ ಮನಸು
ಅತ್ತಿತ್ತ ಹೊಯ್ದಾಡುತ್ತಿರುವುದು, ಯಾವ ಭಾವನೆಗಳ ಅಳೆಯಲ್ಲಿ ಕೊಚ್ಚಿಕೊಂಡು ಹೋಗುವುದೋ
ಯಾವ ದುಃಖಕ್ಕೆ ಮುಳುಗುವುದೋ, ಯಾವ ಸಂತಸಕ್ಕೆ ತೇಲುವುದೋ ಬಲ್ಲವರಾರು

ಮನೆಯ ಕಸವನ್ನು ಗುಡಿಸಿ ಎಷ್ಟು ಚೊಕ್ಕವಾಗಿಟ್ಟುಕೊಂಡರೇನು ಪ್ರಯೋಜನ
ಮನದಲ್ಲಿ ಕಸದ ರಾಷಿಯೇ ತುಂಬಿರಲು

ದುಃಖ ಎಂಬುದು ಸಂತೋಷವನ್ನು ನುಂಗಿಹಾಕುತ್ತದೆ
ನಮ್ಮ ಮನಸ್ಸಿಗೆ ಶಾಂತತೆಯ ನೀರೆರೆದು, ತಾಳ್ಮೆಯ ಉುಟ ಉಣಿಸಿ
ಬಲಪಡಿಸಿ, ಭದ್ರಪಡಿಸಿ ದುಃಖವನ್ನು ಮೆಟ್ಟಿನಿಲ್ಲುವ ಶಕ್ತಿನೀಡಿ ಸಂತಸಕ್ಕೆ

Published in: on ಮೇ 26, 2009 at 3:03 AM  Comments (4)  

ಮತ್ತಷ್ಟು ಚುಟುಕಗಳು

ಬಣ್ಣದ ಬಟ್ಟೆ

ಏಯ್ ಬಣ್ಣ ಬಣ್ಣದ ಚಿಟ್ಟೆ
ನಿನ್ನಂತೆಬಟ್ಟೆ ಧರಿಸಲು ಆಸೆ ಪಟ್ಟೇ
ಖರೀದಿಸಿ ಕಿಸೆ ಖಾಲಿಯಾದಾಗ ಕಣ್ಣು ಕಣ್ಣು ಬಿಟ್ಟೆ

ಫ್ಲರ್ಟ್

ಹೂವಿಂದ ಹುವಿಗೆ ಹಾರುವ ದುಂಬಿ
ಇಂದು ಒಂದೇ ಹೂವಿನ ಮೇಲೆ ಸುಮ್ಮನೇ ಕುಳಿತಿದೆ ಏಕೋ
ಫ್ಲರ್ಟ್ ಮಾಡಿ ಸಾಕಾಯಿತೇನೋ.

ಕಲೆ

ಕಲೆಗಳಿಲ್ಲದ ಚಂದ್ರಮನೆಂದರೆ
ಮೋಡವೆಯಿಲ್ಲದ ಹರೆಯದ ಹೆಣ್ಣಿನ ಮೊಗದಂತೆ

ಸಂಬಳ

ನೀ ಬರುವ ದಾರಿ ಕಾಯುತ್ತಾ ಬಾಗಿಲಲ್ಲೇ ನಿಂತಿದ್ದೇನೆ
ಶಾಪಿಂಗ್, ಸುತ್ತಾಟ ಯಾವುದು ಇಲ್ಲದೇ
ನಿನ್ನ ಬಗೆಗಿನ ಕಾಳಜಿಗಲ್ಲದೇ ಹೋದರು
ನಿನ್ನ ಸಂಬಳದ ಮೇಲಿನ ಪ್ರೀತಿಗಾಗಿ

ಜುಟ್ಟು

ನಿನ್ನ ಜುಟ್ಟು ನನ್ನ ಕಯ್ಯಲ್ಲಿ ಎಂದು ಯಾರಾದರೂ ಹೇಳಿದರೆ ಕೋಪಿಸಿಕೊಳ್ಳಬೇಡ
ತಿಂಗಳಿಗೊಮ್ಮೆ ನಿನ್ನ ಜುಟ್ಟು ಹಜಾಮನ ಕಯ್ಯಲ್ಲೇ ತಾನೇ

Published in: on ಮೇ 8, 2009 at 11:03 AM  Comments (11)  

ಪ್ರೀತಿಯ ಆಳ

me6
ನಾನು ನಿನ್ನನ್ನು ಪ್ರೀತಿಸುತ್ತೇನೆ ರಬ್ಬರ್ ಬ್ಯಾಂಡಿನಷ್ಟು
ಆ ನೆಪದಲ್ಲಾದರೂ ದಿನವೂ ನೀನು ನನ್ನ ತಲೆಯೇರಿ ಕುಳಿತುಕೊಳ್ಳಬಹುದೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಣ್ಣ ಕಾಡಿಗೆಯಷ್ಟು
ಸದಾ ನೀ ನನ್ನ ನೋಟದಲ್ಲಿ, ಕಣ್ರೆಪ್ಪೆಯಲ್ಲಿ ಹುಡುಗಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಮೂಗುತಿಯಷ್ಟು
ನನ್ನ ಉಸಿರಿಗೂ ನಿನ್ನ ಸ್ಪರ್ಶದ ಅನುಭವವಾಗಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಿವಿ ಓಲೆಯಷ್ಟು
ನಿನ್ನ ಪಿಸು ದನಿ ನನ್ನ ಕಿವಿಯಲ್ಲಿ ಕೇಳುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಲಿಪಸ್ಟಿಕ್ ನಷ್ಟು
ನನ್ನ ಅಧರದ ಮೇಲೆ ಕುಳಿತು ಮಧುವನ್ನು ಹೀರುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕರಿಮಣಿಯಷ್ಟು
ಎಂದೆಂದೂ ನೀನು ನನ್ನ ಹೃದಯದ ಮೇಲೆ ಕುಳಿತು ಅದರ ಬಡಿತವಾಗಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನಾನು ಧರಿಸುವ ಬಟ್ಟೆಯಷ್ಟು
ಸದಾ ನಿನ್ನ ಸುಮಧುರ ಸ್ಪರ್ಶದ ಅನುಭವ ನನಗಾಗುತ್ತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕೈ ಬಳೆಯಷ್ಟು
ಸಂಗತಿಯಾಗಿ ನೀ ನನ್ನ ಕೈ ಹಿಡಿದು ಸಾಗು ಎಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಕಾಲ್ಗೆಜ್ಜೆಯಷ್ಟು
ನಿನ್ನ ಹೆಜ್ಜೆಯೊಂದಿಗೆ ನನ್ನ ಹೆಜ್ಜೆ ಬೆರೆಸಿ ಮುನ್ನಡೆಸು ಎಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನೀ ಕೊಟ್ಟ ಕೈ, ಕಾಲು ಉಂಗುರಗಳಷ್ಟು
ಒಂದೊಂದು ಬೆರಳುಗಳಲ್ಲೂ ನಿನ್ನ ಚೈತನ್ಯ ಬೆರೆತಿರಲೆಂದು

ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಹಣೆಯ ಬೊಟ್ಟಿನಷ್ಟು
ನೀ ಹಚ್ಚಿದ ಕುಂಕುಮ ಎಂದೆಂದೂ ನಾ ನಿನ್ನವಳೆಂದು ಸಾರಿ ಹೇಳಲೆಂದು

ಅರ್ಥವಾಯಿತೇ ಗೆಳೆಯ
ನನ್ನ ಪ್ರೀತಿಯ ಆಳ

(Dedicated to my sweet husband)

Published in: on ಮೇ 8, 2009 at 10:23 AM  Comments (8)  

ಚುಟುಕಗಳು

ಎಲೆಯ ಮೇಲಿನ ನೀರು

ಆಗ ತಾನೇ ಬಂದು ನಿಂತಿತ್ತು ಮಳೆ
ಎಲೆಗಳಿಂದ ತೊಟ್ಟಿಕ್ಕುತ್ತಿತ್ತು ಒಂದೊಂದೇ ಹನಿ
ತನಗೆ ನೀರುಣಿಸಿ ತಂಪಾಗಿಸಿದ್ದಕ್ಕಾಗಿ ಬಂದ ಆನಂದ ಭಾಷ್ಪವೋ
ತನ್ನ ಅನುಮತಿ ಇಲ್ಲದೇ ತೋಯಿಸಿ ಚಳಿ ಹುಟ್ಟಿಸಿದ್ದಕ್ಕಾಗಿ ಬಂದ ಕಣ್ಣೀರೋ
ನಾನರಿಯದಾದೆ

ಸೋನೆ ಮಳೆ

ಸೋನೆ ಮಳೆ ಸಣ್ಣದಾಗಿ ಸುರಿಯುತ್ತಿದ್ದರು
ಅದರ ಆನಂದವನ್ನು ಅನುಭವಿಸಲು ನನ್ನಿಂದಾಗುತ್ತಿಲ್ಲ
ಸೋನೆ ಮಳೆಯಲ್ಲೇ ಮರೆಯಾದ ಇನಿಯನ ನೆನಪು
ಮನದಲ್ಲಿ ಇನ್ನೂ ಕಾಡುತ್ತಿದೆಯಲ್ಲ

ಹೊಸ ಚಪ್ಪಲ್

ಹೊಸದಾಗಿ ಕೊಂಡ ಚಪ್ಪಲ್ ಕಚ್ಚುತ್ತಿತ್ತು ಕಾಲು
ತನ್ನನ್ನು ಮೆಟ್ಟಿ, ಉರುತುಂಬಾ ಸುತ್ತಿ ಸವೆಸಿದ್ದಕ್ಕಾಗಿ ಕೋಪವೇನೋ

ಪ್ರೀತಿಯ ನಾಟಕ

ನೀನು ಸ್ವಲ್ಪ ದಿನ ಉರಲ್ಲಿಲ್ಲವಲ್ಲ ಎಂಬ ಬೇಸರಕ್ಕಿಂತ
ಮತ್ತೆ ತಿರುಗಿಬರುವೆಯಲ್ಲ ಎಂಬ ಬೇಜಾರೆ ಹೆಚ್ಚು
ತಿರುಗಿ ಬಂದರು ತೊಂದರೆಯಿಲ್ಲ ಮತ್ತೆ ಅದೇ ಪ್ರೀತಿಯ
ನಾಟಕವಾಡಬೇಕಲ್ಲ ಎಂಬ ಭಯ ಅದಕ್ಕೂ ಹೆಚ್ಚು

ಬಂಧಿ

ನಿನ್ನನ್ನು ಬಂಧಿಸಲೆಂದು ಹಣೆದ ಪ್ರೀತಿಯ ಬಲೆಯಲ್ಲಿ
ನಿನ್ನೊಂದಿಗೆ ನಾನು ಸಿಲುಕಿಕೊಂಡೆನಲ್ಲ
ಇದರಲ್ಲಿ ಬಂಧಿಸಿದವರಾರು ಬಂಧಿ ಯಾರು ಎಂದೇ ತಿಳಿಯದಾಯಿತಲ್ಲ

ಮಂಚ

ಮಲಗುವ ಮಂಚ ಕರ ಕರ ಎಂದು ಸದ್ದು ಮಾಡುತ್ತಿತ್ತು
ನನ್ನುನ್ನು ಹೊರಲಾರದ ಕಷ್ಟಕ್ಕೋ, ತಿಗಣೆಗಳ ಕಾಟ ಕ್ಕೊ
ತನ್ನ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸುತ್ತಿತ್ತು

Published in: on ಮೇ 6, 2009 at 9:36 AM  Comments (7)  

ಮಗು

ಮನೆಯಲ್ಲಿರುವವರು ನಾವಿಬ್ಬರೇ
ಆದರೆ ನಮಗಿಬ್ಬರಿಗೂ ಒಂದೊಂದು ಮಗುವಿದೆ
ನನಗೆ ನನ್ನ ಮಗುವಿನ ಮೇಲೆ ಅತ್ಯಂತ ಪ್ರೀತಿ
ನನ್ನವರಿಗೆ ಅವರ ಮಗುವಿನ ಮೇಲೆ ಅಪಾರ ಮಮತೆ

ತನ್ನ ಮರಿ ಹೊನ್ನ ಮರಿ ಎಂಬಂತೆ
ನನ್ನ ಮಗುವೆ ನನಗೆ ಎಲ್ಲರಿಗಿಂತ ಆಕರ್ಷಕ
ನನ್ನವರಿಗೆ ಅವರ ಮಗುವೆ ಬಲು ಸುಂದರ
ಒಟ್ಟಾರೆ ಎರಡು ಮಕ್ಕಳು ಚೆನ್ನವೇ

ನನ್ನ ಮಗು ತುಸು ದೊಡ್ಡದು
ಶಾಂತ ಸ್ವಭಾವ, ಹಠ, ತೀಟೆ ಬಹಳ ಕಮ್ಮಿ
ಅದು ಬೇಕು ಇದು ಬೇಕು ಎಂಬ ಹಠವಿಲ್ಲ
ಇಸೆಕ್ರೀಂ, ಚಾಕ್ಲೇಟ್ ಬೇಕೆಂದು ಎಂದೂ ಕಾಡಿಲ್ಲ

ನನ್ನವರ ಮಗುವೊ ತುಸು ಚಿಕ್ಕದು
ಶುದ್ದ ತಲೆ ಹರಟೆ, ಆಟ, ತೀಟೆ ಎಲ್ಲ ಜಾಸ್ತಿ
ಬೇರೆ ವಸ್ತುಗಳು ಬೇಕೆಂಬ ರಗಳೆ ಇಲ್ಲದೇ ಇದ್ರು
ಇಸೆಕ್ರೀಂಗಾಗಿ ಯಾವಾಗ್ಲೂ ಕಾಟ

ನನ್ನ ಮಗು ಬಹು ಬೇಗ ದುಃಖ ಪಡುವುದಿಲ್ಲ
ಅತಿಯಾದ ಸಂತೋಷವನ್ನು ವ್ಯಕ್ತಪಡಿಸುವುದಿಲ್ಲ
ಅಸಮಾಧಾನ, ಸಿಟ್ಟು, ಎಲ್ಲ ಬಹಳ ಕಮ್ಮಿ
ಸುಖ ದುಃಖ ಸಮೆಕ್ರತ್ವ ಎಂಬಂತೆ ಎಲ್ಲವೂ ಸಮಾನ ಅದಕ್ಕೆ

ನನ್ನವರ ಮಗುವಿಗೆ ಸ್ವಲ್ಪ ಬೇಜಾರಾದರೂ ದುಃಖ ಉಕ್ಕಿ ಬರುತ್ತದೆ
ಸಂತೋಷವಾದರೆ ಕುಣಿದು ಕುಪ್ಪಳಿಸುತ್ತದೆ
ಸಿಟ್ಟು ಬಂದರೆ ಅಸಮಾಧಾನವಾದರೆ ಗುಮ್ಮನೇ ಕುಳಿತಿರುತ್ತದೆ
ಎಲ್ಲ ಭಾವನೆಗಳನ್ನು ಬೇರೆ ಬೇರೆ ತರದಲ್ಲಿ ಅನುಭವಿಸುವ ಸ್ವಭಾವ ಅದಕ್ಕೆ

ನನ್ನ ಮಗು ಘಟನೆ ಕಹಿ ಇರಲಿ ಸಿಹಿ ಘಟನೆ ಇರಲಿ
ಎಲ್ಲವನ್ನು ಬೇಗ ಮರೆತುಬಿಡುತ್ತದೆ
ಯಾರ ಬಗೆಗೂ ಸಿಟ್ಟು ದ್ವೇಷ ಇಲ್ಲ
ಆದದ್ದು ಆಯಿತು ಎಂದು ಎಲ್ಲವನ್ನು ಮರೆತು ಬಿಡುವುದು ಈ ಮಗುವಿನ ಮನಸ್ಸು

ನನ್ನವರ ಮಗುವಿಗೆ ನೆನಪಿನ ಶಕ್ತಿ ಹೆಚ್ಚು
ಬಹಳ ಕಹಿ ಅಥವಾ ಬಹಳ ಸಿಹಿ ಘಟನೆಗಳನ್ನು ಬೇಗ ಮರೆಯುವುದಿಲ್ಲ
ದ್ವೇಷ ಸಾಧಿಸುವ ಸ್ವಭಾವ ಇಲ್ಲದೇ ಹೋದರು
ನೋವಿನ ಬರೆ, ಸಂತೋಷದ ಗೆರೆಗಳನ್ನು ಬೇಗ ಮರೆಯದು ಈ ಮಗುವಿನ ಹೃದಯ

ನನ್ನ ಮಗು ಮನೆಯಲ್ಲಿದ್ದರು ಅದರ ಪಾಡಿಗೆ ಅದು
ತನ್ನ ಲೋಕದಲ್ಲಿ, ತನ್ನ ಕೆಲಸದಲ್ಲಿ ಮುಳುಗಿರುತ್ತದೆ
ಅದನ್ನು ಸುಧಾರಿಸುವ ಕಷ್ಟ ಇಲ್ಲ, ಬುಧ್ಧಿ ಹೇಳುವ ಗೋಜ಼ಿಲ್ಲಾ
ತೀಟೆ ಮಾಡದೇ ಸುಮ್ಮನೇ ಕೂತಿರು ಎಂದು ಹೆದರಿಸುವ ಕೆಲಸವಿಲ್ಲ

ನಮ್ಮವರ ಮಗು ಅವರು ಮನಯಲ್ಲಿದ್ದರೆ ತೀಟೆ ಮಾಡುತ್ತಲೇ ಇರುತ್ತದೆ
ಅದರ ಕೆಲಸಗಳ ಮಧ್ಯ ನಮ್ಮವರಿಗೊಂದಿಷ್ಟು ಕಾಟ ಕೊಡುತ್ತಾ ಇರುತ್ತದೆ
ತರಲೆ ಮಕ್ಕಳಿಗಿರುವ ಎಲ್ಲ ಗುಣಗಳು, ಅಭ್ಯಾಸಗಳು ಇದಕ್ಕಿವೆ
ಕೆಲವೊಮ್ಮೆ ಸುಮ್ಮನೇ ಕೂರಿಸಲು ಗದರಿಸುವ, ಮುದ್ದಿನಿಂದ ಹೇಳುವ ಅವಶ್ಯಕತೆ ಇದೆ

ಹಬ್ಬ ಹರಿದಿನಗಳು, ಜನುಮದಿನಗಳಂತಹ ಸಂದರ್ಭಗಳಲ್ಲಿ
ತುಂಬಾ ಸಂಭ್ರಮ, ಸಡಗರ ವ್ಯಕ್ತಪಡಿಸುವುದು ನನ್ನವರ ಮಗು
ನನ್ನವರ ಮಗುವಿನ ಸಂತಸವನ್ನು ನೋಡಿ ಖುಷಿ ಪಡುವುದು ನನ್ನ ಮಗು
ನನ್ನ ಮಗು ಸನ್ಯಾಸಿಯಾಗಬೇಕಿತ್ತು ಎಂದು ಒಮ್ಮೊಮ್ಮೆ ನನ್ನ ತಮಾಷೆ

ಮಗು ಮಗು ಎಂದು ಹೇಳಿ ಮಗು ಯಾರೆಂದು ಹೇಳಬೇಕಲ್ಲ
ಮನೆಯಲ್ಲಿರುವ ಇಬ್ಬರಲ್ಲಿ ನನಗೆ ನನ್ನವರು ಮಗು
ನನ್ನವರಿಗೆ ನಾನೇ ಮಗು
ಈಗ ಹೇಳಿ ನಿಮಗ್ಯಾವ ಮಗು ಇಷ್ಟ ಎಂದು.

baby-2

Published in: on ಮೇ 6, 2009 at 4:14 AM  Comments (9)  

ಹೌಸ್ ವೈಫ್

ಚಿತ್ರಕಲೆ, ಸಂಗೀತ ಮುಂತಾದ ವಿಧ ವಿಧವಾದ ಕಲೆಗಳಂತೆಯೇ ಚೆನ್ನಾಗಿ, ರುಚಿಕಟ್ಟಾದ ಅಡುಗೆ ಮಾಡುವುದೂ ಒಂದು ಕಲೆ. ಜಗತ್ತಿನಲ್ಲಿ ಬಹಳಷ್ಟು ಜನ ಅಡುಗೆ ಮಾಡುತ್ತಾರೆ. ಆದರೆ ಎಲ್ಲರೂ ರುಚಿ ರುಚಿಯಾಗೇ ಮಾಡುತ್ತಾರೆ ಅಂತ ಏನಿಲ್ಲವಲ್ಲ. ರುಚಿಯಾಗಿ ಅಡುಗೆ ಮಾಡುವುದಕ್ಕೂ ತಾಳ್ಮೆ, ಪರಿಶ್ರಮ, ಶ್ರದ್ಧೆ, ಅನುಭವ ಎಲ್ಲ ಬೇಕು. ಅಡುಗೆ ಮಾಡುವುದು ಎಲ್ಲರೂ ಸ್ವಲ್ಪ ಮಟ್ಟಿಗಾದರೂ ಕಲಿಯುವಂತಹ ಒಂದು ಕಲೆ.

ಹೌಸ್ ವೈಫ್ ಅಂದ ತಕ್ಷಣ “ಓ ನೀನು ಕೆಲಸಕ್ಕೆ ಹೋಗ್ತಾ ಇಲ್ವಾ?” ಅಂತ ಮುಗೆಳೆಯುವವರೂ ಇದ್ದಾರೆ. ಹೌಸ್ ವೈಫ್ ಅಂದರೆ ಬರೇ ಮನೆಯಲ್ಲಿ ಅಡುಗೆ ಮಾಡಿಕೊಂಡು ಕುಳಿತಿರುವವರು ಅನ್ನುವ ಭಾವನೆ. ಕೆಲವರು ತಾವು ಮನೆಯಲ್ಲಿರುವವರು, ಹೊರಗೆ ಹೋಗಿ ಕೆಲಸ ಮಾಡೋರಲ್ಲ ಅಂತ ಹೇಳೋಕೆ ಹಿಂಜರಿತಾರೆ. ಅವರ ಬಗ್ಗೆನೆ ಅವರಿಗೆ ಕೀಳರಿಮೆ. ನಾನೇನು ಮಾಡುತ್ತಿಲ್ಲ, ಗಂಡನ ಹತ್ತಿರ ಹಣ ತೆಗೆದುಕೊಳ್ಳಬೇಕಲ್ಲ ಎಂಬ ಭಾವನೆ.

ಇಡೀ ದಿನ ಮನೆಯಲ್ಲಿದ್ದು, 3 ಹೊತ್ತು ರುಚಿಯಾದ ಅಡುಗೆ ಮಾಡಿ, ಗಂಡನ (ಮಕ್ಕಳಿದ್ದರೆ ಮಕ್ಕಳ) ಅವಶ್ಯಕತೆಗಳನ್ನು ನೋಡಿಕೊಂಡು, ಮನೆಯ ಸ್ವಚ್ಛತೆ ಮತ್ತು ಇತರ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುವುದು ಯಾವುದಕ್ಕೆ ಕಮ್ಮಿ ಹೇಳಿ? ನಾನು ಸಹ ಕೆಲವೊಮ್ಮೆ ಹೀಗೆ ಯೋಚಿಸುತ್ತಿದ್ದೆ. ನಾನು ಹೊರಗೆ ಹೋಗಿ ಹಣ ಸಂಪಾದಿಸಿಕೊಂಡು ಬಂದರೆ ಮಾತ್ರ ಗೌರವ,ಇಲ್ಲವಾದರೆ ನಾನು ಏನು ಮಾಡುತ್ತಿಲ್ಲ, ನನ್ನವರ ಮೇಲೆ ಹೊರೆಯಾಗಿದ್ದೇನೆ ಅಂತೆಲ್ಲಾ ಯೋಚಿಸುತ್ತಿದ್ದೆ. ಆದರೆ ನನ್ನ ಈ ಯೋಚನೆಯನ್ನು ತಿಳಿದ ನನ್ನವರು ಹೇಳಿದ ಮಾತು ಇದು. ” ಮನೆಯಲ್ಲಿದ್ದು ನನ್ನ ಅವಶ್ಯಕತೆಗಳನ್ನೆಲ್ಲ ನೋಡಿಕೊಂಡು, ಮನೆಯ ಆಗು ಹೋಗುಗಳನ್ನು ನೋಡಿಕೊಂಡು ನನಗೆ ಹೊರಗೆ ದುಡಿಯುವ ಶಕ್ತಿ ಕೊಡುವವಳು ನೀನು. ನೀನು ನನ್ನ ಮೇಲೆ ಹೊರೆಯಾಗಿಲ್ಲ. ನಿನ್ನ ಪ್ರೋತ್ಸಾಹ ಇದ್ದಾರೆ ಮಾತ್ರ ನಾನು ಏನನ್ನಾದರೂ ಮಾಡಲು ಸಾಧ್ಯ. ನೀನು ಮನೆಯಲ್ಲಿ ದುಡಿಯುತ್ತೀಯ, ನಾನು ಹೊರಗೆ ಅಷ್ಟೇ. ನಾನು ದುಡಿಯುವುದರಲ್ಲಿ ನಿನಗೂ ನನ್ನಷ್ಟೇ ಹಕ್ಕಿದೆ” ಅಂತ ತಿಳಿಸಿ ಹೇಳಿದರು. ನನಗೂ ಅದು ನಿಜ ಅನ್ನಿಸಿತು. ಆಗಿನಿಂದ ನಾನು ನನ್ನ ವಿಚಾರಧಾರೆಯನ್ನು ಬದಲಾಯಿಸಿಕೊಂಡಿದ್ದೇನೆ. ನನ್ನ ಹಾಗೆ ಯೋಚಿಸುವವರು ಬಹಳಷ್ಟು ಜನ ಇದ್ದಾರೆ. ನೀವು ಕೂಡ ನಿಮ್ಮ ವಿಚಾರಧಾರೆಯನ್ನು ಬದಲಾಯಿಸಿಕೊಳ್ಳಿ. ಹೊರಗೆ ದುಡಿಯುವ ಮನಸ್ಸಿದ್ದರೆ, ಅನುಕೂಲವಿದ್ದರೆ ಹೊರಗೆ ಹೋಗಿ ಕೆಲಸ ಮಾಡಬಹುದು. ಇಲ್ಲವಾದರೆ ಮನೆಯ ಆಗು ಹೋಗುಗಳನ್ನು ಚೆನ್ನಾಗಿ ನಿಭಾಯಿಸಿ (ಸಂತೋಷದಿಂದ) ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ.

ನಾನು ಸಹ ವರ್ಷದ ಹಿಂದಷ್ಟೇ ಹೊಸದಾಗಿ ಗೃಹಿಣಿಯ ಪಟ್ಟವನ್ನು ಹೊಂದಿದವಾಳಾದ್ದರಿಂದ ಅಡಿಗೆಯಲ್ಲಿ ಅಷ್ಟೊಂದು ನುರಿತವಳಲ್ಲ. ಆದರೂ ನಾನು ಕಲಿತಂತಹ ಕೆಲವು ಅಡಿಗೆಗಳನ್ನು ಇಲ್ಲಿ ಹಾಕಿದ್ದ್ಡೇನೆ. ಒಮ್ಮೆ ಭೇಟಿ ಕೊಟ್ಟು ನೋಡಿ ತಮ್ಮ ಅಭಿಪ್ರಾಯ ತಿಳಿಸಿ.

ranjanah.blogspot.com

pic-12
pic-22

Published in: on ಮೇ 5, 2009 at 3:10 ಅಪರಾಹ್ನ  Comments (2)  

ಮನ ತುಂಬಿ ಬಂದ ಕ್ಷಣಗಳು

ನೋಡೇ ಯಾರು ಬಂದಿದ್ದಾರೆ ಅಂತ, ಮಾತಾಡ್ಸಿದೆಯ? ಏನು ತೊಗೋತಾರೆ ಅಂತ ಕೇಳಿದೆಯ ಅಂತ ಆತ ಆಕೆಯನ್ನು ಕೇಳಿದ. ಇದು ಯಾರು ಅಂತ ಗೊತ್ತಾಯ್ತಾ ಇಲ್ವಾ? ಅಂತ ಮನೆಗೆ ಬಂದವರನ್ನು ತೋರಿಸಿ ಕೇಳಿದಾಗಲು ಆಕೆಯಿಂದ ಯಾವುದೇ ಉತ್ತರವಿಲ್ಲ. ಓ ನಿನ್ನ ಉುಟದ ಟೈಮ್ ಆಯ್ತು ಅಲ್ವಾ, ಹಸಿವೆ ಆಗ್ತಿದೆಯೇನೋ ಅನ್ನುತ್ತಾ ಆತ ಹೋಗಿ ಆಕೆಯ ಆಹಾರವಾದ ತಿಳಿ ಗಂಜಿಯನ್ನು ತಂದು ಆಕೆಗೆ ತಿನ್ನಿಸತೊಡಗಿದ. ನಿಧಾನವಾಗಿ ಒಂದೊಂದೇ ಗುಟುಕು ಒಳಗೆ ಹೋಗುತ್ತಿತ್ತು. ಆಕೆ ಆತನ ಮಗುವಲ್ಲ, ಆದರೂ ಮಗುವಿನಂತೆಯೇ….ಆಕೆ ಆತನ ಪತ್ನಿ. ಈ ಜಗತ್ತಿನ ಪರಿವಿಯೆ ಇಲ್ಲದಂತೆ ಕೋಮಾವಸ್ಥೆಯಲ್ಲಿ ಮಲಗಿರುವ ಹೆಣ್ಣುಮಗಳು. ಹೇಳಿದ ಮಾತು ತಿಳಿಯುವುದೋ ಇಲ್ಲವೋ, ಪ್ರತ್ಯುತ್ತರ ಹೇಳಲಾಗದು, ಹಾಸಿಗೆಯಲ್ಲಿ ಮಲಗಿ ಅಲ್ಲಿ ಅತ್ತಿತ್ತ ತಿರುಗುವುದಕ್ಕೂ, ಅಲ್ಲಿಂದ ಏಳುವುದಕ್ಕೂ ಆಕೆಯಿಂದ ಆಗದು. ತೆಳ್ಳಗಿನ ಆಹಾರ ಬಾಯಿಗೆ ಕೊಟ್ಟರೆ ನಿಧಾನವಾಗಿ ಒಳಗೆ ಇಳಿಯುತ್ತದೆ ಅಷ್ಟೇ. ಯಾವುದೋ ಖಾಯಿಲೆಯಿಂದಾಗಿ ಆಕೆ ತನ್ನ 45-50 ವಯಸ್ಸಿನಲ್ಲಿ ಕೋಮಾವಸ್ತೆಯನ್ನು ತಲುಪಿದ್ದಳು. ವರ್ಷಗಟ್ಟಲೇ ಇದೆ ಸ್ಥಿತಿ. ಮಕ್ಕಳು ಮದುವೆಯಾಗಿ ಅವರವರ ಮನೆಯಲ್ಲಿದ್ದರು, ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಇದ್ದರೂ ಎಷ್ಟು ದಿನ ಯಾರು ಸೇವೆ ಮಾಡಬಲ್ಲರು? ವರ್ಷಗಟ್ಟಲೇ ಆದರೂ ಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ನಿನಗೂ ನೋಡಿಕೊಳ್ಳುವುದು ಕಷ್ಟ, ಆಕೆಗೂ ಅನುಭವಿಸುವುದು ಕಷ್ಟ, ಸುಮ್ಮನೇ ಏನಾದರೂ ವಿಷದ ವಸ್ತು ಕೊಡಿಸಿಬಿಡು ಅಥವಾ ಡಾಕ್ಟರ್ ಹತ್ತಿರ ಏನಾದರೂ ಇಂಜೆಕ್ಶನ್ ಕೊಡಿಸಿ ಸಾಯಿಸಿಬಿಡು ಅಂತ ನೆಂಟರು, ಸ್ನೇಹಿತರು ಕೆಲವರು ಆತನಿಗೆ ಹೇಳಿದರು. ಆದರೂ ಆತನಿಗೆ ಇಷ್ಟುವರ್ಷ ಜೊತೆಗೆ ಸಂಸಾರ ಮಾಡಿದ ಪತ್ನಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಧರ್ಮೇಚ, ಅರ್ಥೆಚ, ಕಾಮೆಚ, ನಾತಿಚರಾಮಿ ಎಂದು ನೀಡಿದ ವಚನವನ್ನು ಮರೆಯಲು ಸಾಧ್ಯವಿಲ್ಲ. ಇಷ್ಟುವರ್ಷ ಎಲ್ಲವನ್ನು ಹಂಚಿಕೊಂಡು ಬದುಕಿದ ಆಕೆಯ ಜೊತೆ ಬಿಡಲು ಆತನ ಮನಸ್ಸು ಒಪ್ಪದು. ಆಕೆ ಇರುವಷ್ಟು ದಿನ ಆಕೆಯ ಸೇವೆಯನ್ನು ನಾನು ಮಾಡುತ್ತೇನೆ, ಆಕೆಯನ್ನು ನೋಡಿದರೆ ಸಂಕಟವಾಗುತ್ತದೆ ಎನ್ನುತ್ತಾ ಆಕೆಯ ಪ್ರತಿಯೊಂದು ಕೆಲಸಗಳನ್ನುಮನಸ್ಸಿಟ್ಟು ಮಾಡುತ್ತಿದ್ದ. ಆಕೆ ಆತನ ಮಾತಿಗೆ ಸ್ಪಂದಿಸುತ್ತಾಳೇನೋ ಅನ್ನುವಂತೆ ಆಕೆಯೊಂದಿಗೆ ಮಾತನಾಡುತ್ತಿದ್ದ. ಮನೆಗೆ ಯಾರಾದರೂ ಹೋದರೆ ತೋರಿಸಿ ಗುರುತು ಸಿಕ್ಕಿತೆ ಎಂದು ಕೇಳುತ್ತಿದ್ದ. ಆ ದಿನ ಆತ ” ಇದು ಯಾರು ಎಂತ ಗೊತ್ತಾಯ್ತಾ “ಅಂತ ತೋರಿಸಿದ್ದು ನನ್ನನ್ನು. ವರದಕ್ಷಿಣೆಗಾಗಿ, ಸಣ್ಣಪುಟ್ಟ ಜಗಳಗಳಿಗಾಗಿ ಸಾಯಿಸುವ, ಹೊಡೆದು ಬಡಿದು ಕಷ್ಟ ನೀಡುವ, ಡೈವರ್ಸ್ ಕೊಡುವ ವಿಷಯಗಳನ್ನು ಕೇಳಿದ್ದೆ. ಆದರೆ ಮಗುವಿನಂತೆ ಪತ್ನಿಯ ಸೇವೆ ಮಾಡುವ, ಪ್ರೀತಿಸುವ, ಕಾಳಜಿ ತೋರಿಸುವ ಉದಾತ್ತ ಮನಸ್ಸಿನ ಮನುಷ್ಯನನ್ನು ಕಂಡು ಮನಸ್ಸು ಮತ್ತು ಕಣ್ಣು ಎರಡೂ ತುಂಬಿಬಂದವು. ಆ ಹೆಣ್ಣುಮಗಳು ಅಂತಹ ಸ್ಥಿತಿಯಲ್ಲಿ ಮಲಗಿದ್ದರು ಆಕೆ ಪುಣ್ಯವಂತೆ ಅನ್ನಿಸಿತು.

ಆ ಮನೆಯ ಗೃಹಿಣಿ, ಆಕೆಯ ಪತಿ, ಒಬ್ಬ ಕೆಲಸದವಳು, ಒಬ್ಬ ನರ್ಸ್, ಒಬ್ಬ ಅತಿಥಿ. ಆ ಸಮಯದಲ್ಲಿ ಮನೆಯಲ್ಲಿದ್ದವರು ಈ 5 ಜನ. ಆ ದಂಪತಿಗಳ ಮಗ ಮತ್ತು ಸೊಸೆ ಎಲ್ಲೋ ಹೊರಗೆ ಹೋಗಿದ್ದರೆಂದು ತೋರುತ್ತದೆ. ಆ ಮನೆಯ ಗೃಹಿಣಿಯ ವಯಸ್ಸು ಒಂದು 60-65 ರ ಮಧ್ಯದಲ್ಲಿ ಇರಬಹುದು.ಗಂಟಲಲ್ಲೊಂದು ತೂತು, ಅಲ್ಲೊಂದು ಚಿಕ್ಕ ಕೊಳವೆಯಂತದ್ದು, ತಲೆಯಲ್ಲಿ ಕೂದಲಿಲ್ಲ, ತಲೆಗೊಂದು ಕರ್ಚಿಪ್ ಕಟ್ಟಿದ್ದಳು. ದೇಹ ಮೊದಲಿನಂತೆ ದಷ್ಟ ಪುಷ್ಟವಾಗಿರಲಿಲ್ಲ, ಕೃಶವಾಗಿತ್ತು, ಮುಖದ ಕಾಂತಿ ಕಳೆಗುಂದಿತ್ತು. ಮಾತನಾಡಲು ಧ್ವನಿ ಹೊರಡುತ್ತಿರಲಿಲ್ಲ. ಆಕೆ ಒಬ್ಬ ಕ್ಯಾನ್ಸರ್ ಪೆಶೆಂಟ್. ಆಕೆಗೆ ಆಗಿದ್ದು ಗಂಟಲಿನ ಕ್ಯಾನ್ಸರ್. ಆದರೂ ಸನ್ನೆಗಳ ಮೂಲಕ ಎಲ್ಲ ಕುಶಲವೇ ಎಂಬಂತೆ ಬಂದ ಅತಿಥಿಯನ್ನು ವಿಚಾರಿಸಿಕೊಂಡು, ಮನೆಯಲ್ಲೆಲ್ಲ ಹೇಗಿದ್ದಾರೆ, ಚಹಾ ತೆಗೆದುಕೊಳ್ಳುತ್ತೀಯಾ ಎಂದು ಒಂದು ಪೇಪರಿನಲ್ಲಿ ಬರೆದು ವಿಚಾರಿಸಿದಾಗ ಈಗ ಏನು ಬೇಡ ಎಂದು ಅತಿಥಿಯ ಉತ್ತರ. ಪೇಪರಿನಲ್ಲಿ ಬರೆದು ತೋರಿಸುವ ಮಾತುಕತೆ ಸ್ವಲ್ಪ ಹೊತ್ತು ಮುಂದುವರಿಯಿತು. ನಂತರ ಈಗ ಬಂದೆ ನೀವು ಮಾತಾಡುತ್ತೀರಿ ಎಂದು ಅತಿಥಿ ಮತ್ತು ಆಕೆಯ ಪತಿಯನ್ನು ಮಾತನಾಡಲು ಬಿಟ್ಟು ಎದ್ದು ಹೋದಳು. 10 ನಿಮಿಷವಾದರೂ ಬರದಿದ್ದಾಗ ಹೋಗಿ ಮಲಗಿಕೊಂಡರಾ ಎಂದು ಅತಿಥಿ ಆಕೆಯ ಪತಿಯನ್ನು ಕೇಳಿದಾಗ, ಟೀ ತರೋಕೆ ಹೋಗಿರಬಹುದು,ಒಳಗೆ ಕೆಲಸದವಳು ಇದ್ದಾಳೆ ಎಂಬ ಉತ್ತರ ಆಕೆಯ ಪತಿಯಿಂದ. ಹೀಗಂದ ಸ್ವಲ್ಪ ಹೊತ್ತಿನಲ್ಲಿ ಕೆಲಸದವಳ ಜೊತೆ ಹೊರಗೆ ಬಂದ ಆಕೆಯ ಕೈಯಲ್ಲಿ ಒಂದು ಟೀ ಕಪ್, ಕೆಲಸದವಳ ಕೈಯಲ್ಲಿ ಒಂದು ಪ್ಲೇಟ್ ಪುರಿ ಭಾಜಿ, ಒಂದು ಸ್ವೀಟ್. ಬೇಡ ಎಂದರು ಒತ್ತಾಯಮಾಡಿ ಅತಿಥಿಗೆ ಅದೆಲ್ಲವನ್ನೂ ಕೊಟ್ಟಳು. ಅಷ್ಟು ಹೊತ್ತಿನವರೆಗೂ ಈಕೆ ಎದ್ದು ಗಟ್ಟಿಯಾಗಿ ಓಡಾಡುತ್ತಾಳೋ ಇಲ್ಲವೋ ಎಂದು ಆಕೆಯ ಕುಶಲೋಪರಿ ವಿಚಾರಿಸಿಕೊಂಡು ಹೋಗಲು ಬಂದ ಅತಿಥಿ ಯೋಚಿಸುತ್ತಿದ್ದರೆ, ಆಕೆಯ ಈ ಅತಿಥಿ ಸತ್ಕಾರ ನೋಡಿ ಮಾತೇ ಹೊರಡುತ್ತಿರಲಿಲ್ಲ. ಅಂದು ಅವರ ಮನೆಗೆ ಹೋದ ಅತಿಥಿ ಬೇರೆ ಯಾರು ಅಲ್ಲ, ಅದು ನಾನೇ. ಮನೆಗೆ ಅತಿಥಿಗಳು ಏಕಾದರೂ ಬರುತ್ತಾರೋ ಎಂದು ಯೋಚಿಸುವ ಈ ಕಾಲದಲ್ಲಿ ಇಂತಹ ಸ್ಥಿತಿಯಲ್ಲೂ ಅತಿಥಿ ಸತ್ಕಾರ ಮಾಡುವ ಗೃಹಿಣಿಯನ್ನು ನೋಡಿ ಹೃದಯ ಭಾರವಾಯಿತು. ಆಕೆ ಕುಳಿತಲ್ಲಿಂದಲೇ ಕೆಲಸದವಲಿಗೆ ಒಂದು ಕಪ್ ಚಹಾ ಮಾಡಿಕೊಂಡು ಬಾ ಎಂದು ತಿಳಿಸಿದ್ದರು ಆಗುತ್ತಿತ್ತು. ಆದರೆ ತಾನೇ ಎದ್ದು ಹೋಗಿ ಮಾಡಿಕೊಂಡು ( ಮಾಡಿಸಿಕೊಂಡು) ಬಂದ ಆಕೆಗೆ ಮನಸ್ಸು ಹ್ಯಾಟ್ಸ್ ಆಫ್ ಎಂದಿತು.

ಇವೆರಡು ನನ್ನ ಕಣ್ಮುಂದೆ ನಡೆದ ಘಟನೆಗಳು. ಪ್ರಪಂಚದಲ್ಲಿ ಎಲ್ಲ ರೀತಿಯ ಜನರೂ ಇರುತ್ತಾರೆ. ಎಸ್ಟೋ ಸರಿ ನಮಗೆ ಇಂತಹ ಜನರ ಮನಸ್ಸಿನ ಜನರ ಭೇಟಿಯಾಗುತ್ತದೆ. ಎಲ್ಲರಿಗೂ ಇಂತಹ ಬೇರೆ ಬೇರೆ ಅನುಭವವಾಗಿರಬಹುದು. ಕೆಲವರಿಗೆ ಅದು ಜ್ಞಾಪಕವಿರುತ್ತದೆ, ಇನ್ನೂ ಕೆಲವರಿಗೆ ಮರೆತು ಹೋಗುತ್ತದೆ. ಈ ಇಬ್ಬರು ಉನ್ನತ ಮನಸ್ಸಿನ ಜನರ ಭೇಟಿಯ ನೆನಪು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣವೆಂದು ಅನ್ನಿಸಿತು………..ಬರೆದಿದ್ದೇನೆ……………

Published in: on ಏಪ್ರಿಲ್ 14, 2009 at 8:36 AM  Comments (10)  

ಮಲೇಶಿಯಾ ಪ್ರವಾಸ

ಬೆಳಿಗ್ಗೆ 7.30 ಘಂಟೆಗೆ ಬೆಂಗಳೂರಿನ ಜಯನಗರದಲ್ಲಿ ಬಸ್ ಇಳಿದಾಗ, BTM layout ಗೆ ಹೋಗೋಕೆ 100 ರೂಪಾಯಿ ಕೊಟ್ರೆ ಬರ್ತೀನಿ, 120 ರೂಪಾಯಿ ಕೊಟ್ರೆ ಬರ್ತೀನಿ ಅಂತ ಬಸ್ ಹತ್ರ ನಿಂತು ಕೇಳ್ತಾ ಇದ್ದ ಆಟೋದವರ ನೆನಪು ಬಂದಿದ್ದು ನಾವು ಮಲೇಶಿಯಾಗೆ ಹೋದಾಗ. 2 ತಿಂಗಳ ಹಿಂದೆ ನಾವು ಪ್ರವಾಸಕ್ಕೆ ಅಂತ ಮಲೇಶಿಯಾದ ರಾಜಧಾನಿ kuala lumpur ಗೆ ಹೋಗಿದ್ದೆವು. ಬೆಳಿಗ್ಗೆ ಹೋಗಿ ಅಲ್ಲಿನ Airport ನಿಂದ ಹೊರಗೆ ಬಂದು ನಾವು ಬುಕ್ ಮಾಡಿದ್ದ ಹೊಟೆಲ್ ಗೆ ಹೋಗುವುದಕ್ಕೆ ಅಂತ ಟ್ಯಾಕ್ಸಿ ಕೇಳಿದ್ರೆ ಒಬ್ಬ 120 ರಿಂಗೇಟ್ಸ್ ( ಮಲೇಶಿಯಾದ ಕರೆನ್ಸಿ) ಕೊಡಿ ಅಂದ್ರೆ ಇನ್ನೊಬ್ಬ 100 ಅಂದ. ಹೀಗೆ ಮನಸ್ಸಿಗೆ ಬಂದಷ್ಟು ದುಡ್ಡು ಕೆಳೋರೆ ಹೊರತು ಮೀಟರ್ ಹಾಕುವವರ ಮಾತೇ ಇಲ್ಲ. ಅದರಲ್ಲೂ ನಾವು ಬೇರೆ ಪ್ರದೇಶದವರು, ಹೊಸದಾಗಿ ಅಲ್ಲಿ ಹೋದವರು ಅಂತ ತಿಳಿದರಂತು ಒಬ್ಬೊಬ್ಬರು ಒಂದೊಂದು ರೇಟ್ ಹೇಳುವವರೇ. ಈ ಹಾಡು ನಾವು ತಿರುಗಿ ಬರುವುದಕ್ಕೆಂದು ಏರ್‌ಪೋರ್ಟ್‌ಗೆ ಹೋಗುವವರೆಗೂ ಇತ್ತು. ಆ ವಿಷಯ ಹಾಗಿರಲಿ, ನಾನು ಇಲ್ಲಿ ಹೇಳುವುದಕ್ಕೆ ಹೊರಟಿರುವುದು ನಾವು ನೋಡಿದ ಸ್ಥಳಗಳ ಬಗ್ಗೆ.

kuala lumpur ದ genting highland, Bathu caves, Petronas twin tower ಇವು ಮೂರು ಮುಖ್ಯ ಪ್ರವಾಸಿ ಸ್ಥಳಗಳು.

ನಮ್ಮ ಉುಟಿ ಯ ಹಾಗೆ ಎತ್ತರದ ಪ್ರದೇಶ, ಹೋಗುವಾಗ ಮಂಜು ಕವಿದು ರಸ್ತೆಯೇ ಕಾಣದಂತಿರುವ ದೃಶ್ಯ, ಮಧ್ಯಾಹ್ನವೇ ಚಳಿಯ ಅನುಭವ. ಅಲ್ಲಿ ನಮ್ಮ ವಂಡರ್ ಲಾ ದ ಹಾಗೆ ಆದರೆ ಅದಕ್ಕಿಂತಲೂ ದೊಡ್ಡದಾದ ಒಂದು ಅಮ್ಯೂಸ್ಮೆಂಟ್ ಪಾರ್ಕ್. ಅಲ್ಲಿ ವಿಧ ವಿಧದ ಆಟಗಳು, ಷೋಗಳು, ದೃಶ್ಯಗಳು….ಒಟ್ಟಾರೆ ಒಂದು ದಿನ ಪೂರ್ತಿ ಅಲ್ಲಿ ಕಳೆದರು ನೋಡಿ, ಅನುಭವಿಸಿ ಮುಗಿಯದಿರುವಂತಹ ಸ್ಥಳ. ಅಲ್ಲಿನ ಕೆಲವು ಚಿತ್ರಗಳು ನಿಮಗಾಗಿ…
theme-2
theme-3
theme-41
dscn09692

ನಮ್ಮ ಮುಂದಿನ ಪಯಣ Petronas Twin Tower ನ ಕಡೆಗೆ. ಸರ್ಕಾರದ ಮತ್ತು ಇತರ ಕೆಲವು ಕಂಪನಿಗಳ ಸಹಾಯದೊಂದಿಗೆ Petronas ಕಂಪನಿ ಇದನ್ನು 1992 ರಿಂದ 1998 ರವರೆಗೆ ನಿರ್ಮಾಣ ಮಾಡಿತು. 88 ಅಂತಸ್ತುಗಳ ಎತ್ತರವಿರುವ ಈ ಅದ್ಭುತ ಜೋಡಿ ಕಟ್ಟಡಗಳ ಮಧ್ಯೆ 41ನೆಯ ಅಂತಸ್ತಿನಲ್ಲಿ ಒಂದು over bridge ಕಟ್ಟಲಾಗಿದೆ. ಈ ಕಟ್ಟಡದ ಅಂತಸ್ತುಗಳಲ್ಲಿ ಹಲವು ಪ್ರಮುಖ ಕಂಪನಿಗಳು ತಮ್ಮ office branch ಹೊಂದಿವೆ. 41ನೆಯ ಅಂತಸ್ತುಗಳವರೆಗೆ ಹೋಗಿ, ಆ ಅದ್ಭುತ ಸೌಂದರ್ಯವನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ಇದೆ. Glass, steel, concrete ಇವುಗಳನ್ನು ಉಪಯೋಗಿಸಿ ಈ ಅದ್ಭುತ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಆ ಸುಂದರ ಕಟ್ಟಡಗಳ ಮತ್ತು ಜಗತ್ತಿನ ಇನ್ನೂ ಹಲವು ಎತ್ತರದ ಕಟ್ಟಡಗಳ ಮಾಹಿತಿಯನ್ನು ಹೊಂದಿದ ಚಿತ್ರಗಳು ಇಲ್ಲಿವೆ.
dsc089691
dscn10572
dscn10332
dscn10462
dscn10482
dscn10472
dscn10492
dscn10502

ಕೊನೆಯದಾಗಿ ನಾವು ಭೇಟಿ ನೀಡಿದ ಸ್ಥಳ ಒಂದು ದೇವಸ್ಥಾನ. Bathu caves (god murugan temple) . ಇಲ್ಲಿನ ಗುಹೆಗಳು ಮತ್ತು ಮುರುಗ ( ಷಣ್ಮುಖ) ದೇವರು ಪ್ರಸಿದ್ಧ. ಅಲ್ಲಿನ ಒಂದು ಚಿತ್ರ ತಮ್ಮ ನೋಟಕ್ಕೆ.
dscn10652

ನಾವು ಪ್ರವಾಸ ಮುಗಿಸಿ ಬಂದು 2 ತಿಂಗಳುಗಳಾದರೂ ನಿನ್ನೆ ತಾನೇ ನೋಡಿ ಬಂದಂತೇ ಅನ್ನಿಸುತ್ತಿದೆ. ಆದ್ದರಿಂದ ಅಲ್ಲಿನ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿ ಈ ಬ್ಲಾಗನ್ನು ಬರೆಯುತ್ತಿದ್ದೇನೆ. ಅಲ್ಲಿನ ಮಾಹಿತಿ ಮತ್ತು ಚಿತ್ರಗನ್ನು ನೋಡಿ ನೀವೂ ಸಂತೋಷ ಪಡುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ, ಸರಿನಾ……..

Published in: on ಏಪ್ರಿಲ್ 9, 2009 at 9:36 AM  Comments (9)  

ಬದುಕೆಂಬ ದೋಣಿ

ಬದುಕೆಂದರೆ ಕಾಮನಬಿಲ್ಲು, ಬದುಕೆಂದರೆ ಬಿರು ಬಿಸಿಲು, ಬದುಕೆಂದರೆ ಮರಳುಗಾಡು, ಬದುಕೆಂದರೆ ಮುಂಗಾರಿನ ಮಳೆ ಅಂತ ಬದುಕಿನ ಬಗ್ಗೆ ಒಬ್ಬೊಬ್ಬರು ಒಂದೊಂದು ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ. ಅವರವರ ಬದುಕಿನ ಆ ಸಂದರ್ಭಕ್ಕನುಸಾರವಾಗಿ, ಅಥವಾ ಅವರ ಬದುಕಿನ ಅನುಭವಗಳಿಂದಾಗಿ ವ್ಯಕ್ತಪಡಿಸುವ ಭಾವನೆ ಅದು. ಇವೆಲ್ಲ ಭಾವನೆ, ಅನುಭವಗಳ ಮಿಶ್ರಣವೇ ಬದುಕು ಅಂತ ನನ್ನ ಅನಿಸಿಕೆ.

ಕಷ್ಟ ಕೋಟಲೆಗಳು ಕಣ್ಣ ಮುಂದೆ ಬಂದು ನಿಂತಾಗ ಬದುಕು ಬರಡು ಮರುಭೂಮಿ ಅನ್ನಿಸುತ್ತದೆ, ನೋವುಗಳ ಬಿಸಿ ತಾಗಿದಾಗ ಬದುಕೊಂದು ಸುಡು ಬಿಸಿಲು ಅನ್ನಿಸುವುದು ಸಹಜವೇ ಸರಿ.ಅದೇ ಬದುಕಿನಲ್ಲಿ ಸುಖದ ಹೊಳೆ ಹರಿದಾಗ ಬದುಕೊಂದು ಸುಂದರ ಕಾಮನಬಿಲ್ಲು, ಮುಂಗಾರಿನ ತುಂತುರು ಮಳೆ ಅನ್ನಿಸುವುದು ಅಷ್ಟೇ ವಾಸ್ತವಿಕ.ಸುಖವೂ ಶಾಶ್ವತವಲ್ಲ, ದುಃಖವೂ ಶಾಶ್ವತವಲ್ಲ. ಎರಡು ಒಂದರ ಜೊತೆಗೊಂದು ಕಣ್ಣಾ ಮುಚ್ಚಾಲೆ ಆಡುತ್ತಿರುತ್ತವೆ. ಇವುಗಳನ್ನು ಋತು ಚಕ್ರಕ್ಕೆ ಹೋಲಿಸಿದರೆ, ಮಳೆಗಾಲದ ನಂತರ ಚಳಿಗಾಲ, ನಂತರ ಬೇಸಿಗೆ, ಅದಾದ ಮೇಲೆ ತಿರುಗಿ ಮಳೆಗಾಲ ಬರುವಂತೆಯೇ ಬದುಕಿನ ಮುಖಗಳೂ ಸಹ ಚಕ್ರದಹಾಗೆ ಸುತ್ತುತ್ತಲೇ ಇರುತ್ತವೆ.

ಕೆಲವೊಮ್ಮೆ ಸುಡು ಸುಡು ಬಿಸಿಲಿನ ನಡುವೆ ಸಣ್ಣ ಮಳೆ ಬಂದು ಹೋದಂತೆ, ಜೋರಾದ ಜದಿ ಮಳೆಯ ಮಧ್ಯೆ ಇಣುಕಿ ನೋಡುವ ಸೂರ್ಯ ಕಿರಣ ದಂತೆ ಕಷ್ಟಗಳ ನಡುವೆ ನವಿರಾದ ಸಂತಸ, ಸಾಂತ್ವನ, ನೋವಿನ ಬಿಸಿ ಗಾಯಕ್ಕೆ ತಣ್ಣನೆಯ ಮದ್ದು.ಅಥವಾ ಮೇಲೇರುತ್ತಿರುವವನ ಕಾಲು ಹಿಡಿದು ಎಳೆಯುವಂತೆ, ಸುಖವಾಗಿ ನಿದ್ರಿಸುತ್ತಿರುವವನ ಮೇಲೆ ತಣ್ಣೀರು ಎರಚಿದಂತೆ, ಸುಖದ ನಡುವೆ ಸ್ವಲ್ಪ ಕಿರಿ ಕಿರಿ, ಮೃದುವಾದ ದೇಹವನ್ನು ಚೇಳು ಬಂದು ಕೂಟುಕಿದಂತೆ ಸಣ್ಣನೆಯ ಯಾತನೆ ನಡೆಯುತ್ತಲೇ ಇರುತ್ತದೆ. ಇದರಿಂದ ಯಾರೂ ಮುಕ್ತರಲ್ಲ, ಯಾರಿಂದಲೂ ತಪ್ಪಿಸಲೂ ಆಗದು. ಬಂದದ್ದು ಬಂದಂತೆ ಅನುಭವಿಸುವುದೊಂದೇ ದಾರಿ.

ಸುಖ, ದುಃಖ, ನೋವು, ನಲಿವುಗಳನ್ನು ಒಂದೇ ತೆರನಾಗಿ ಸ್ವೀಕರಿಸಬೇಕು ಅನ್ನುವುದು ಸತ್ಯವಾದರೂ ನಮ್ಮಂಥ ಸಾಮಾನ್ಯ ಮನುಷ್ಯರಿಗೆ ಅದು ಅಸಾಧ್ಯವಾದಂತ ಮಾತು. ಎಲ್ಲವನ್ನು ಒಂದೇ ರೀತಿಯಾಗಿ ಸ್ವೀಕರಿಸುವ ಮನುಷ್ಯ ಮಹಾತ್ಮನಾಗುತ್ತಾನೆ, ಇನ್ನೊಂದು ಅರ್ಥದಲ್ಲಿ ಆಸೆ ಆಕಾಂಕ್ಷೆ, ನಾನು, ನನ್ನದು ಎನ್ನುವುದನ್ನೆಲ್ಲ ಬಿಟ್ಟ ಮಹಾತ್ಮರಿಂದ ಮಾತ್ರ ಇದು ಸಾಧ್ಯ ಅಂತ ಸಾಮಾನ್ಯ ಮನುಷ್ಯೆಯಾದ ನನಗೆ ಅನ್ನಿಸುತ್ತದೆ. ನನಗೆ ಜೀವನದಲ್ಲಿ ಬಹಳಷ್ಟು ಆಸೆಗಳಿವೆ, ಕಣ್ಣು ತುಂಬಾ ಕನಸುಗಳಿವೆ, ನಾನು ನನ್ನದು ಎಂಬ ಮಮಕಾರವಿದೆ ಹೀಗಿರುವಾಗ ನಾನು ಸುಖ ಬಂದಾಗ ಹಿಗ್ಗುತ್ತೇನೆ, ದುಃಖ ಬಂದಾಗ ಕುಗ್ಗುತ್ತೇನೆ. ಯಾವುದೇ ತರದ ಭಾವನೆಗಳನ್ನು ವ್ಯಕ್ತ ಪಡಿಸದೇ, ಸುಖ, ದುಃಖ ಎರಡು ಒಂದೇ ಎಂದು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ನಿಮ್ಮೆಲ್ಲರ ಮನಸ್ಸು ಇದನ್ನೇ ಹೇಳುತ್ತದೆ ಅಂದುಕೊಳ್ಳುತ್ತೇನೆ.

ಆದ್ದರಿಂದ ನನಗೆ ಅನಿಸುವ ದಾರಿ ಅಂದರೆ ಸಂದರ್ಭಗಳು ಯಾವ ರೀತಿಯಾಗಿ ಬರುತ್ತವೆಯೋ ಅದರಂತೆಯೇ ಅದನ್ನು ಸ್ವೀಕರಿಸುವುದು. ಒಬ್ಬೊಬ್ಬ್ಬರ ಪಾಲಿಗೆ ಒಂದೊಂದು ಹೆಚ್ಚು, ಒಂದೊಂದು ಕಮ್ಮಿ. ಆದರೆ ಯಾರೂ ಇದರಿಂದ ಹೊರತಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವುದು. ಸಂತಸ, ಸುಖ ಬಂದಾಗ ಸುಖವಾಗಿ ಅನುಭವಿಸುವುದು. ದುಃಖ, ಕಷ್ಟ ಬಂದರೆ ತಾಳಿಕೊಳ್ಳುವ, ಎದುರಿಸುವ ಶಕ್ತಿ, ತಾಳ್ಮೆ (ಇದು ನನ್ನಲ್ಲಿ ಸ್ವಲ್ಪ ಕಮ್ಮಿ ಅಂದುಕೊಳ್ಳುತ್ತೇನೆ, ನಾನು ರೂಢಿಸಿಕೊಳ್ಳುವುದು ಬಹಳಷ್ಟಿದೆ) ಬೆಳೆಸಿಕೊಳ್ಳುವುದು. ಮುಂದೆ ಅನುಭವಿಸಲಿರುವ ಸುಖಕ್ಕಾಗಿ ಕಾಯುವುದು ಅಷ್ಟೇ…..
ಇದು ನಾನು ನನ್ನ ಜೀವನದಿಂದ ಕಂಡುಕೊಂಡಿದ್ದು, ನಿಮ್ಮಲ್ಲಿ ಕೆಲವರದ್ದಾದರೂ ಇದೆ ರೀತಿಯ ಅನುಭವ ಅಭಿಪ್ರಾಯ ಇರಬಹುದಲ್ಲವೇ? ತಿಳಿಸಿ

ತಾಳಿಕೊಂಡು ಬಾಳು
ಬಾಳುವುದಕ್ಕಾಗಿ ತಾಳು

ಸುಖ ದುಃಖಗಳ ಸಂಕೇತವಾಗಿ 2 ಚಿತ್ರಗಳನ್ನು ಇಲ್ಲಿ ಹಾಕುತ್ತಿದ್ದೇನೆ.

dscn0976

dsc01094