ಒಂದು ಉೂರು, ಅಲ್ಲೊಂದು ಕುಡಿಯುವ ನೀರಿನ ಬಾವಿ, ಬಾವಿಯ ಬಳಿ ಒಂದು ಹುತ್ತ, ಹುತ್ತದಲ್ಲಿ ಒಂದು ಹಾವಿನ ವಾಸ. ಹಾವು ಆ ಉರಿನವರಿಗೆ ಯಾರಿಗೂ ಆ ಕಡೆಗೆ ಸುಳಿಯಾಲು ಬಿಡುತ್ತಿರಲಿಲ್ಲ. ಅಪ್ಪಿ ತಪ್ಪಿ ಬಂದರೆ ಕಚ್ಚುತ್ತಿತ್ತು. ಉೂರಿನವರು ಅದರ ಉಪದ್ರವ ತಡೆಯಲಾರದೇ ಬೇಸತ್ತಿದ್ದರು. ಅಷ್ಟರಲ್ಲಿ ಒಬ್ಬ ಸನ್ಯಾಸಿ ಆ ಉುರಿಗೆ ಆಗಮಿಸಿದ. ಆತನನ್ನು ನೋಡಲು ಹೋದ ಉೂರಿನ ಜನರು ಹಾವು ನೀಡುತ್ತಿರುವ ಕಷ್ಟವನ್ನು ಹೇಳಿಕೊಂಡರು. ಅದನ್ನು ಕೇಳಿದ ಸನ್ಯಾಸಿ, ಉರಿನ ಜನ ನಿಲ್ಲು ಎಂದರು ಕೇಳದೇ, ಬಾವಿಯ ಬಳಿ ಹೋದ. ಆತನನ್ನು ನೋಡಿದ ಹಾವು ಹೆದರಿಸುತ್ತಾ ಕಚ್ಚಲು ಬಂತು. ಸ್ವಲ್ಪವೂ ಧೃತಿಗೆಡದ ಸನ್ಯಾಸಿ ಆ ಹಾವನ್ನು ಎದುರಿಸಿ ನಿಂತು ಅದಕ್ಕೆ ” ಇಷ್ಟು ಜನಕ್ಕೆ ಕಷ್ಟ ನೀಡಿ ನೀನು ಏನು ಪಡೆಯುವೆ, ನೀನು ಕೆಟ್ಟದ್ದು ಮಾಡಿದರೆ ಅದರ ಫಲವು ಕೆಟ್ಟದ್ದೇ ಆಗುವುದು, ನೀನು ಇಲ್ಲಿ ಇರುವೆ ಎಂಬ ಕಾರಣಕ್ಕಾಗಿ ಜನರನ್ನು ಬಾವಿಯ ಕಡೆ ಬರದಂತೆ ತಡೆಯುವುದು ಸರಿಯಲ್ಲ. ಅವರ ಪಾಡಿಗೆ ಅವರು ಬರಲಿ, ನಿನ್ನ ಪಾಡಿಗೆ ನೀನು ಬದುಕು, ಕಚ್ಚಬೇಡ, ಹಿಂಸೆಯನ್ನು ಬಿಟ್ಟುಬಿಡು” ಎಂದು ಹೇಳಿದ. ಸನ್ಯಾಸಿಯ ಮಾತನ್ನು ಕೇಳಿದ ಹಾವು ಮನಃ ಪರಿವರ್ತನೆ ಹೊಂದಿ, ಆತ ನುಡಿದಂತೆ ಇರುವೆನೆಂದು ಮಾತು ಕೊಟ್ಟಿತು. ಸನ್ಯಾಸಿ ಬೇರೊಂದು ಉುರಿಗೆ ಹೊರಟು ಹೋದ.
ಇತ್ತ ಹಾವು ಸನ್ಯಾಸಿಗೆ ಕೊಟ್ಟ ಮಾತಿನಂತೆ ಹಿಂಸೆಯನ್ನು ಬಿಟ್ಟು ಬಿಟ್ಟಿತು. ಆಹಾರಕ್ಕಾಗಿಯೂ ಪ್ರಾಣಿಗಳ ಬೇಟೆಯಾಡುವುದನ್ನು ನಿಲ್ಲಿಸಿತು. ಅಲ್ಲಿ ಇಲ್ಲಿ ಬಿದ್ದಿರುವ, ಸಿಕ್ಕಿದ ಆಹಾರ ತಿನ್ನುತ್ತಿತ್ತು. ಜನರಿಗೆ ಕಚ್ಚುತ್ಟಿರಲಿಲ್ಲ, ಹೆದರಿಸುತ್ತಿರಲಿಲ್ಲ. ಸ್ವಲ್ಪ ದಿನ ಮೊದಲಿನ ಭಯದಲ್ಲೇ ಇದ್ದ ಜನ, ಸ್ವಲ್ಪ ದಿನಗಳ ನಂತರ ಏನೂ ಮಾಡದ ಹಾವಿಗೆ ಹೆದರುವುದನ್ನು ನಿಲ್ಲಿಸಿದರು. ಬಾವಿಗೆ ನೀರು ತರಲು ಹೋಗಲಾರಂಭಿಸಿದರು. ಮಕ್ಕಳು ಹಾವಿನ ಸಮೀಪದಲ್ಲೇ ಆಡಲಾರಂಭಿಸಿದರು. ದಷ್ಟ ಪುಷ್ಟವಾಗಿದ್ದ ಹಾವು, ಬೇಟೆಯಾಡುವುದನ್ನು ಬಿಟ್ಟು ಸರಿಯಾದ ಆಹಾರ ಸಿಗದೆ ಕೃಶವಾಯಿತು. ದಿನ ಕಳೆದಂತೆ ಮಕ್ಕಳು ಹಾವನ್ನು ಉಪಯೋಗಿಸಿಕೊಂಡು ಆಟವಾಡತೊಡಗಿದರು. ಹಾವು ದಾರಿಯಲ್ಲಿ ಮಲಗಿದ್ದರೆ ಎತ್ತಿ ಬದಿಗೆ ಬಿಸಾಡಿ ಮುಂದೆ ಹೋಗುತ್ತಿದ್ದರು ಜನ. ಹೀಗೆ ಒಂದು ದಿನ ಆ ಬಾವಿಯ ಹಗ್ಗ ತುಂಡಾಯಿತು. ನೀರು ಎಳೆಯಲು ಹಗ್ಗ ಗಿಡ್ದವಾದ ಕಾರಣ ಬದಿಯಲ್ಲೇ ಮಲಗಿದ್ದ ಹಾವನ್ನು ಹಗ್ಗದ ಜೊತೆ ಗಂಟು ಹಾಕಿ ನೀರೆಳೆಯಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ಬೇರೆ ಉುರಿಗೆ ಹೋದ ಸನ್ಯಾಸಿ ಮರಳಿ ಆ ಉುರಿಗೆ ಬಂದು, ಹಾವನ್ನು ನೋಡಲು ಬಾವಿಯ ಸಮೀಪ ಹೋದ. ಹಾವಿನ ಸ್ಥಿತಿ ನೋಡಿ ಆತನಿಗೆ ಪಸ್ಚಾತ್ತಾಪವಾಯಿತು. ಜನರಿಂದ ಹಾವನ್ನು ಬಿಡಿಸಿ, ಇದೇನು ನಿನ್ನ ಪರಿಸ್ಥಿತಿ ಎಂದು ಕೇಳಿದ. ಹಾವು ಹೇಳಿತು ” ತಾವು ನನಗೆ ಹಿಂಸೆ ಮಾಡಬೇಡ ಎಂದಿರಿ, ನಾನು ಬೇಟೆಯಾಡುವುದನ್ನು ನಿಲ್ಲಿಸಿದೆ. ಆಹಾರ ಸರಿಯಾಗಿ ದೊರಕಲಿಲ್ಲ. ನಾನು ಏನೂ ಮಾಡದ ಕಾರಣ ಜನರಲ್ಲಿ ನನ್ನ ಮೇಲಿನ ಭಯ ಹೊರಟು ಹೋಯಿತು. ಅವರು ನನ್ನನ್ನು ಹೀಗೆ ಹಿಂಸಿಸುತ್ತಿದ್ದಾರೆ ಎಂದಿತು. ಅದನ್ನು ಕೇಳಿದ ಸನ್ಯಾಸಿ ” ನಾನು ನಿನಗೆ ಕಚ್ಚಬೇಡ ಎಂದೆನೆ ಹೊರತು ಬುಸ್ ಎನ್ನಬೇಡ ಎಂದೇನಾ? ನಿನ್ನ ರಕ್ಷಣೆಗಾಗಿ ನಿನಗೆ ಅವಶ್ಯಕವಾಗಿ ಬೇಕಾಗುವ ಆಹಾರವನ್ನು ತಿನ್ನ ಬೇಡ ಎಂದೇನಾ? ಕಚ್ಚಬೇಡ ಎಂದೆ ಇದರರ್ಥ ಹೆದರಿಸಬೇಡ ಎಂದಲ್ಲ. ಒಳ್ಳೆಯವನಾಗು ಆದರೆ ಅತಿಯಾಗಿ ಒಳ್ಳೆಯವನಾಗಬೇಡ. ಜಗತ್ತಿನಲ್ಲಿ ಬದುಕುವುದು ಅಸಾಧ್ಯವಾಗುತ್ತದೆ ” ಎಂದ. ಹಾವು ಆತನ ಮಾತಿನ ಅರ್ಥ ತಿಳಿದು ಅದರಂತೆಯೇ ತನ್ನ ಜೀವನ ಸಾಗಿಸಿತು.
ಈ ಕಥೆಯ ಸಾರಾಂಶ ಏನೆಂದರೆ ಒಳ್ಳೆಯತನ ಬೇಕು ಆದರೆ ಅತಿಯಾದ ಒಳ್ಳೆಯತನ ಬೇಡ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಈ ಮಾತು ಅಕ್ಷರಶಹ ನಿಜ ಎಂದು ಅನ್ನಿಸುತ್ತದೆ. ಹಿಂದೆ ತ್ರೇತಾಯುಗದ ರಾಮನ ಕಾಲದಲ್ಲಿ ಎಷ್ಟು ಒಳ್ಳೆಯತನ ಇದ್ದರು ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ಎಷ್ಟು ಬೇಕೋ ಅಷ್ಟು ಒಳ್ಳೆಯತನ ಇದ್ದರೆ ಸಾಕು. ನಾವು ಅತಿಯಾಗಿ ಒಳ್ಳೆಯವರಾಗಿದ್ದರೆ ನಮ್ಮ ಸುತ್ತಲಿನವರು ಒಳ್ಳೆಯವರಿರುತ್ತಾರೆ ಎಂದೇನಿಲ್ಲವಲ್ಲ. ನಾವು ಬಹಳ ಒಳ್ಳೆಯವರಾಗಿದ್ದರೆ ಅದರಿಂದ ತಮ್ಮ ಉಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಇದರಿಂದ ನಮ್ಮ ಜೀವನ ನಡೆಸುವುದು ದುಸ್ತರವಾಗುತ್ತದೆ. ಅತಿಯಾದ ಒಳ್ಳೆಯ ಗುಣ ಹೊಂದಿ ಇತರರಿಗೆ ಒಳ್ಳೆಯದನ್ನು ಮಾಡುತ್ತಲೇ ಜೀವನ ಸಾಗಿಸುತ್ತೇನೆ ಎನ್ನುವವರು ಸನ್ಯಾಸಿಯಾಗಿ ಜೀವನ ಸಾಗಿಸುವುದೇ ಸರಿ ಎನ್ನುವಂತಾಗಿಬಿಡುತ್ತದೆ.
ಇವಳ ಹಿಂದಿನ ಬರಹದಲ್ಲಷ್ಟೇ ಹೇಳಿದ್ದಳು ಇತರರಿಗೆ ಸಹಾಯ ಮಾಡಿ ಎಂದು, ಇಲ್ಲಿ ಹೀಗೆ ಹೇಳುತ್ತಿದ್ದಾಳೆ ಅಂತ ಗೊಂದಲಗೊಳ್ಳಬೇಡಿ. ನಾನಲ್ಲಿ ಹೇಳಿದ್ದು ನಿಮ್ಮ ಕೈಲಿರುವ ಹಣದಲ್ಲಿ ಸ್ವಲ್ಪ ಸಹಾಯ ಮಾಡಿ ಎಂದು. ಕೈಲಿರುವ ಎಲ್ಲ ಹಣವನ್ನು ನೀಡಿ ಎಂದು ಅಲ್ಲ. ಅದರರ್ಥ ಒಳ್ಳೆಯತನ ಬೇಕು (ಅತಿಯಾದ ಒಳ್ಳೆಯತನ ಬೇಡ) ಎಂದು. ಕಚ್ಚುವ ಹಾವಾಗಬೇಡಿ, ಅದರಂತೆಯೇ ಅತ್ಯಂತ ಸಾತ್ವಿಕವಾಗಿ ಕಷ್ಟ ಪಡುವ ಹಾವು ಆಗಬೇಡಿ. ಬುಸ್ ಎನ್ನುವ ಹಾವಾಗಿ. ಇಂದಿನ ಜಗತ್ತಿನಲ್ಲಿ ಹಾಗೆ ಬದುಕುವುದೇ ಸರಿ. ನಮ್ಮ ಅತಿಯಾದ ಒಳ್ಳೆಯತನ ಉಪಯೋಗಿಸಿಕೊಂಡು, ಜೊತೆಗೆ ಮೇಲಿಂದ ಒಂದು ಕಲ್ಲು ಎಂಬಂತೆ ನಮ್ಮನ್ನು ಕೆಳಗೆ ದೂಡುವ ಜನರಿಗೇನು ಕೊರತೆಯಿಲ್ಲ. ನಮ್ಮ ಒಳ್ಳೆಯತನದ ಭುಜವನ್ನೇ ಮೆಟ್ಟಿಲಾಗಿಸಿಕೊಂಡು ಮೇಲೆ ಹತ್ತಿದಮೇಲೆ ನಮ್ಮನ್ನು ಒದ್ದು ಹೋಗುವವರು ಇದ್ದಾರೆ. ನಾವು ಮಾತ್ರ ಇದ್ದಲ್ಲೇ ಇರುತ್ತೇವೆ. ಕಾರಣ ನಮ್ಮ ಅತಿಯಾದ ಒಳ್ಳೆಯತನ. ಆದ್ದರಿಂದ ಬದುಕಲು “ಕೆಟ್ತತನ ಬೇಡವೇ ಬೇಡ, ಒಳ್ಳೆಯತನ ಬೇಕು, ಅತಿಯಾದ ಒಳ್ಳೆಯತನ ಬೇಡ”
“Don’t ever be bad, be good, don’t be too good”
Nice article
ಈ ಜನ್ರೆ ಹೀಗೆ ಅಂಗೈ ಕೊಟ್ರೆ ಮುಂಗೈ ನುನ್ಗ್ತಾರೆ ಕಳ್ನನ್ಮಕ್ಳು…!